ಸಮರ್ಪಣೆ


ಪ್ರಕೃತಿದೇವಿ

ತನ್ನ ಮಡಿಲ

ಫಲ ಪುಷ್ಪಗಳನ್ನೆಲ್ಲ

ಹಸಿರು ಹರಿವಾಣದೊಳಿಟ್ಟು

ಸೃಷ್ಠಿಕರ್ತನಿಗೆ

ಸಮರ್ಪಿಸಿದಾಗ

ಮೂಡಿದ..ಧನ್ಯತೆಯ ಹನಿ

ನೀ..... ಇಬ್ಬನಿ....!!!!!

ಅಭಿರುಚಿ ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವ



ಅಭಿರುಚಿ ಸಂಸ್ಥೆಯು ತನ್ನ ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಕೈವಲ್ಯ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳ ಸಮಾನತೆಯನ್ನು ಬಿಂಬಿಸುವ ವಿಶಿಷ್ಟ ಕಾರ್ಯಕ್ರಮ "ಸ್ವರವಚನ-ಕೀರ್ತನಾ ಸಾಮರಸ್ಯ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಮುಪ್ಪಿನ ಷಡಕ್ಷರಿ ಮತ್ತು ನಿಜಗುಣ ಶಿವಯೋಗಿಯವರ ರಚನೆಗಳನ್ನು ವಿದುಷಿ ಶ್ರೀಮತಿ ಸುಕನ್ಯಾ ಪ್ರಭಾಕರ್, ಮೈಸೂರು ಮತ್ತು ಕನಕ-ಪುರಂದರರ ಕೀರ್ತನೆಗಳನ್ನು ವಿದ್ವಾನ್ ಬಳ್ಳಾರಿ ರಾಘವೇಂದ್ರ, ಮೈಸೂರು ಅವರು ಹಾಡಿದರು.ಈ ಸಂಗೀತಗಾರರಿಬ್ಬರೂ ತಮ್ಮ ಸುಶ್ರಾವ್ಯ ಗಾಯನದಿಂದ ಪ್ರೇಕ್ಷಕರ ಮನತಣಿಸಿದರು.ಇಬ್ಬರು ಕಲಾವಿದರ ನಡುವೆ ಸೇತುವೆಯಂತಿದ್ದ  ಡಾ||ಎ.ಜಿ.ಗೋಪಾಲಕೃಷ್ಣಕೊಳ್ತಾಯರವರು ತಮ್ಮ ಅತ್ಯುತ್ತಮ ನಿರೂಪಣೆಯ ಮೂಲಕ  ವಚನ-ದಾಸ ಸಾಹಿತ್ಯಗಳಲ್ಲಿರುವ ಸಮಾನತೆಯನ್ನು ಸಮರ್ಥವಾಗಿ ನಿರೂಪಿಸಿದರು.




ಇದೇ ಸಂದರ್ಭದಲ್ಲಿ ಅಭಿರುಚಿ ಸಂಸ್ಥೆಯು ತನ್ನದೇ ಆದ ಅಂತರ್ಜಾಲತಾಣವನ್ನು ಬಿಡುಗಡೆಗೊಳಿಸಿತು.
ಅಧ್ಯಕ್ಷರಾದ ಡಾ|| ಶಿವರಾಮಕೃಷ್ಣ ಅವರು ಅಂತರ್ಜಾಲ ತಾಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ನಮ್ಮ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ದಯಮಾಡಿ http://abhiruchivedike.blogspot.in/  ವಿಳಾಸಕ್ಕೆ ಭೇಟಿ ನೀಡಿ ತಮ್ಮ ಅಭಿಪ್ರಾಯವನ್ನು ತಿಳಿಸಿ.









ಚಿಣ್ಣರ ದೀಪಾವಳಿ

        ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿಯ ಶುಭಾಶಯಗಳು


ಮರಳಿ ಬಂದಿದೆ ದೀಪಾವಳಿ
ಮರೆಯದೆ ತಂದಿದೆ ಹರುಷಾವಳಿ
ಮನೆಮನ ಬೆಳಗಿವೆ ದೀಪಗಳು
ಮಕ್ಕಳ ಕುಣಿಸಿವೆ ಪಟಾಕಿಗಳು

ಎಳೆಯರ ಕೈಗೆ ಗನ್ನನು ತಂದಿದೆ
ಚಟಪಟ ಸದ್ದಿನ ಚಿನಕುರಳಿ
ಜಂಬದೆ ಢಂ ಢಂ ನಾದವ ಮಾಡುತ
ಸಂತಸ ತಂದಿದೆ ಈ ಸುರಳಿ

ಗದ್ದಲವಿಲ್ಲದೆ ಮೆಲ್ಲಗೆ
ಬೆಳಗಿದೆ ಮತಾಪು ಕಡ್ಡಿಗಳು
ಭಯವನು ಮರೆಸಲು ಅಮ್ಮನ 
ಕೈ ಜೊತೆ ಕಂದನ ಕೈಯಿಗಳು


ಸುರು ಸುರು ನಾದವಗೈಯ್ಯುತ
ಬೆಳಗುವ ನಕ್ಷತ್ರ ಕಡ್ಡಿಗಳು
ಇದ ಸವಿಯುತ ಮನ
ಲಗ್ಗೆಯಿಟ್ಟಿದೆ ತಾರಾಲೋಕದೊಳು

ಕಿಡಿಯನು ಸೋಕಿಸೆ ಒಡನೆಯೆ
ಚಿಮ್ಮಿದೆ ಸೊಯ್ಯನೆ ಗಗನಕೆ ರಾಕೇಟು
ಚಿಣ್ಣರ ರಂಜಿಸೆ ಇಸ್ರೋ
ಕಳುಹಿದೆ ಚಂದ್ರಲೋಕಕೆ ಟಿಕೇಟು

ಬೆಂಕಿಯನುಗುಳುತ ಗರಗರ
ತಿರುಗಿವೆ ತರತರ ಚಕ್ರಗಳು
ಬಣ್ಣಬಣ್ಣದ ಹೂ ಮಳೆಗರೆಯುತ
ಕಣ್ಮನ ತಣಿಸಿವೆ ಹೂ ಕುಂಡಗಳು

ಧರೆಯನು ನಡುಗಿಸಿ
ಕಿವಿಗಪ್ಪಳಿಸಿವೆ ಆಟಂಬಾಂಬುಗಳು
ದೀಪ ಧೂಪಗಳ ಸಂಗಮದಾರತಿ
ಇದುವೇ ನಲಿವಿನ ದೀಪಾವಳಿಯು.

ಬಾಲ್ಯದ ನೆನಪುಗಳು - ೩ - ಬಾಲ್ಯದ ಭಾನುವಾರವೆಂದರೆ....!!

ಎಲ್ಲರ ಬಾಲ್ಯದಲ್ಲೂ ಭಾನುವಾರವೆಂದರೆ ರಜಾ-ಮಜದ ದಿನ. ಶಾಲೆಗೆ ಓಡಬೇಕೆಂಬ ಒತ್ತಡವಿಲ್ಲದೆ ನಮ್ಮ ಆಟದ ಸಾಮಾನುಗಳನ್ನೆಲ್ಲ ಹರಡಿಕೊಂಡು ದಿನವೆಲ್ಲಾ ಸಂತಸದಿಂದ ಕಳೆಯುತ್ತಿದ್ದೆವು. ಟ್ಯೂಷನ್-ಹೋಂವರ್ಕ್ ಎನ್ನುವ ಯಾವ ಜಂಜಾಟಗಳೂ ನಮಗಿರಲಿಲ್ಲ...! 

ಆದರೆ ಚಿಕ್ಕವಳಾದ ನನಗೆ ರೇಜಿಗೆ ತರಿಸುತ್ತಿದ್ದ ಒಂದು ಕಾರ್ಯಕ್ರಮ ಈ ಭಾನುವಾರದಲ್ಲಿ ಸೇರಿಹೋಗಿತ್ತು ಎನ್ನುವುದು ಮರೆಯಲಾಗದ ವಿಷಯ.... ಅದೆಂದರೆ ಎಣ್ಣೆಸ್ನಾನ...... ಇದು  ಪೂರ್ವನಿಶ್ಚಿತ ಕೆಲಸ.... ಇದರಲ್ಲಿ ಬದಲಾವಣೆ ಅಗುತ್ತಿದ್ದುದು ಮಾತ್ರ ಬಹು ಅಪರೂಪ..... ಶಾಂಪೂ ಹಾಕಿ ನೊರೆ ಅರಳಿಸಿ, ಶವರ್ ನೀರಿನಲ್ಲಿ ೧೫-೨೦ ನಿಮಿಷಗಳಲ್ಲಿ ತಲೆಸ್ನಾನ ಮುಗಿಸುವ ಇಂದಿನ ಧಾವಂತ, ಅಂದಿನ ದಿನಗಳಲ್ಲಿ ಇರಲಿಲ್ಲ... ಹಾಗೆಂದು ರಸಋಷಿ ಶ್ರೀ ಕುವೆಂಪುರವರು ಬಣ್ಣಿಸಿರುವ ’ಅಜ್ಜಯ್ಯನ ಅಭ್ಯಂಜನ’ವನ್ನು ನೀವು ನೆನಪಿಸಿಕೊಳ್ಳಬೇಡಿ. ! ಅಜ್ಜಯ್ಯನವರದು ’ಅಭ್ಯಂಜನ’ , ಆದರೆ ನನ್ನದು ಕೇವಲ ’ಎಣ್ಣೆಸ್ನಾನ’.... ಏಕೆಂದರೆ ಅಷ್ಟು ಸುಧೀರ್ಘವಾಗಿ ಎಣ್ಣೆಸ್ನಾನವನ್ನು ಅನುಭವಿಸುವ ತಾಕತ್ತು ನಮಗೆಲ್ಲಿಂದ ಬರಬೇಕು......! ಅದರ ಮುಂದೆ ನನ್ನ ಈ ಅನುಭವ ತೃಣ ಸಮಾನ ಎನ್ನಿಸದಿರಲಿಲ್ಲ....! ಆದರೆ ಚಿಕ್ಕವಳಾದ ನನಗೆ ಎಣ್ಣೆಸ್ನಾನ ಬಹಳ ಕಠಿಣವೆನ್ನಿಸುತ್ತಿದ್ದುದು ಮಾತ್ರ ನಿಜ. ಆ ವೇಳೆಗೆ ಕುವೆಂಪುರವರ ಪ್ರಬಂಧ ಓದಿದ್ದರೆ ನಾನು ಹಾಗೆ ಯೋಚಿಸುತ್ತಿರಲಿಲ್ಲ ಅಂತ ಈಗ ನನ್ನ ಅನುಭವಕ್ಕೆ ಬಂದಿದೆ. 

ಬೆಚ್ಚಗೆ ಕಾಯಿಸಿದ ಹರಳೆಣ್ಣೆ ಮೈಗೆಲ್ಲ ಹಚ್ಚಿ, ಅದು ಮುಟ್ಟಬೇಡ,ಇದು ಮುಟ್ಟಬೇಡ ಅಂತ ನಮ್ಮಮ್ಮ ಹೇಳಿದಾಗ ಸುಮ್ಮನೆ ನಿಲ್ಲಬೇಕಾದ ಶಿಕ್ಷೆ ಎಂದು ಮುಖ ಊದಿಸಿಕೊಳ್ಳುತ್ತಿದ್ದೆ....!ಮೈಗಂಟಿದ ಎಣ್ಣೆ.....ಬಿಸಿಬಿಸಿ ನೀರು....ಅಂಟುವಾಳದಕಾಯಿ-ಸೀಗೆಪುಡಿ ಮಿಶ್ರಣದಿಂದ ತಲೆ ಉಜ್ಜುವಾಗ ಕಣ್ಣಿಗೆ ಸೀಗೆಪುಡಿ ಸೇರಿ ಉರಿ ತರಿಸುತ್ತಿದ್ದುದು- ಇವೆಲ್ಲಾ ನನಗೆ ಎಣ್ಣೆಸ್ನಾನದ ಮೇಲೆ ಕೋಪ ತರಿಸಲು ಕಾರಣವಾಗಿದ್ದವು..... ಆದರೆ ನನ್ನ ಕೋಪಕ್ಕೆ ಚಿಕ್ಕಾಸಿನ ಬೆಲೆ ಸಿಕ್ಕದೆ ಹೋ.... ಎಂದು ಅಳುತ್ತಾ ನನ್ನ ಸ್ನಾನ ಮುಗಿಯುತ್ತಿದ್ದುದನ್ನು ಈಗ  ನೆನೆದಾಗ ನಗು ಉಕ್ಕುತ್ತದೆ.

ಬಾಲ್ಯದ ಭಾನುವಾರದ ಮತ್ತೊಂದು ನೆನಪೆಂದರೆ ಸಂಜೆಗೆ ಆಕಾಶವಾಣಿಯಿಂದ ಪ್ರಸಾರವಾಗುತ್ತಿದ್ದ ಚಲನಚಿತ್ರ ಧ್ವನಿಮುದ್ರಿಕೆ ಕಾರ್ಯಕ್ರಮವನ್ನು ಕೇಳಿ ಆನಂದಿಸುವುದು. ಇದು ಬಹು ಜನಪ್ರಿಯವಾದ ಕಾರ್ಯಕ್ರಮವಾಗಿತ್ತು. ಅತ್ಯುತ್ತಮ ಸಿನಿಮಾಗಳು ಇಲ್ಲಿ ಪ್ರಸಾರವಾಗುತ್ತಿದ್ದವು. ಬರೀ ಆಡಿಯೋ ಆಗಿದ್ರು ಕೂಡ ಅದನ್ನು ಕೇಳುವುದರಲ್ಲಿ ನಾನು ತಲ್ಲೀನಳಾಗುತ್ತಿದ್ದೆ....  ಈ ಸಮಯದಲ್ಲಿ ಅಂದರೆ ಸಂಜೆ ನಾಲ್ಕು ಗಂಟೆಯ ನಂತರ, ನಮ್ಮಮ್ಮ ನನ್ನ ಕೂದಲಿನ ಸಿಕ್ಕು ಬಿಡಿಸಿ ಜಡೆ ಹೆಣೆಯುತ್ತಾ ಸಿನಿಮಾ ಕೇಳುವ ಪದ್ಧತಿ. ಚಿತ್ರದ ಹಾಸ್ಯ ಪ್ರಸಂಗಗಳಿಂದಾಗಿ ಕೂದಲಿನ ಸಿಕ್ಕು ಬಿಡಿಸುವಾಗಿನ ನೋವಿನ ಅನುಭವ ನನಗಾಗುತ್ತಿರಲಿಲ್ಲ. ..!ಆದರೆ "ನಾಂದಿ" ಸಿನಿಮಾ ನೋಡುವಾಗ, ಸಿಕ್ಕಿನ ನೆಪ ಮಾಡಿಕೊಂಡು ಬಿಕ್ಕಳಿಸಿ ಅತ್ತಿದ್ದು ಮಾತ್ರ ನನ್ನಿಂದ ಈಗಲೂ ಮರೆಯಲಾಗಿಲ್ಲ....!! ಕಿವುಡ-ಮೂಗರ ಸಮಸ್ಯೆಯ ಕತೆಯನ್ನು ಹೊಂದಿದ ಅತ್ಯುತ್ತಮ ಚಿತ್ರವದು. ರಾಜ್,ಕಲ್ಪನ ಮತ್ತು ಹರಿಣಿ ಪ್ರಧಾನ ಭೂಮಿಕೆಯಲ್ಲಿರುವ ಈ ಚಲನಚಿತ್ರ, ಅನನ್ಯ ಅಭಿನಯ ಮತ್ತು ಸುಮಧುರ ಹಾಡುಗಳಿಂದಾಗಿ ಎಂದಿಗೂ ಮರೆಯಲಾರದ ಒಂದು ಅಮೋಘ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.
      ಆಗಿನ ದಿನಗಳಲ್ಲಿ ಬರುತ್ತಿದ್ದ ಉತ್ತಮ ಗುಣಮಟ್ಟದ ಚಲನಚಿತ್ರಗಳು ಈಗೆಲ್ಲಿ?

      ಹಾಗೆಯೇ ಅಂದಿನ ದಿನಗಳು ಇಂದೆಲ್ಲಿ...?

      ಓ...ನೆನಪೇ.... ನೀನೆಷ್ಟು ಮಧುರ..ಮಧುರ..ಮಧುರ. ..!!!   

ನಾಂದಿ ಚಿತ್ರದ ಒಂದೆರಡು ಹಾಡುಗಳನ್ನು ಕೆಳಗೆ ಲಿಂಕ್ ಮಾಡಿದ್ದೇನೆ. ಆ ಸವಿಯನ್ನು ನೀವೂ ಆಸ್ವಾದಿಸಿ ನೋಡಿ...!!

ಹಾಡೊಂದ ಹಾಡುವೆ ನೀ ಕೇಳು ಮಗುವೆ..

ಉಡುಗೊರೆಯೊಂದ ತಂದಾ..

ಚಂದ್ರಮುಖಿ.. ಪ್ರಾಣಸಖಿ...


ಚಲನಚಿತ್ರ ಅಂತ್ಯಾಕ್ಷರಿ - ಉತ್ತರಗಳು

ಸನ್ನಿವೇಶ ಸುತ್ತು:-

೧.ಚಿತ್ರ - ಮಯೂರ
  ನಾನಿರುವುದೆ ನಿಮಗಾಗಿ ನಾಡಿರುವುದೆ ನಮಗಾಗಿ
  ಕಣ್ಣೀರೇಕೆ ಬಿಸಿಯುಸಿರೇಕೆ ಬಾಳುವಿರೆಲ್ಲಾ ಹಾಯಾಗಿ)

೨.ಚಿತ್ರ -  ಬೆಳ್ಳಿಮೋಡ
ಮೂಡಲಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
 ನುಣ್ಣನೆ ಎರಕಾವಾ ಹೊಯ್ದ
 ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲಾ ತೋಯ್ದ

೩.ಚಿತ್ರ - ಗುರುಶಿಷ್ಯರು
ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ ಎಂದೂ ನಿಜವಲ್ಲ.

೪.ಚಿತ್ರ - ಜೀವನ ಚೈತ್ರ 
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
 ಸಾಯೊತನಕ ಸಂಸಾರದೊಳಗೆ ಗಂಡಾಗುಂಡಿ
 ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ

೫.ಚಿತ್ರ - ಬಂಧನ
ಬಣ್ಣ ನನ್ನ ಒಲವಿನ ಬಣ್ಣ
ನನ್ನ ....... ಬಣ್ಣ
ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು
ನೂರಾಸೆಯ ಕನಸಿನ ಬಣ್ಣ

೬.ಚಿತ್ರ - ನಾನೂ ನನ್ನ ಕನಸು
ಪುಟ್ಟ ಪುಟ್ಟ ಕೈ ಪುಟ್ಟ ಪುಟ್ಟ ಕಾಲ್
 ನಿನ್ನ ಪುಟ್ಟ ಕೈ ನಿನ್ನ ಪುಟ್ಟ ಕಾಲ್

ಅಂತ್ಯ ಪದ ಸುತ್ತು:-

೧.ಸ್ನೇಹದ ಕಡಲಲ್ಲಿ
ನೆನಪಿನ ದೋಣಿಯಲಿ
ಪಯಣಿಗ ನಾನಮ್ಮ
ಪಯಣಿಗ ನಾನಮ್ಮ

೨.ಕನ್ನಡ ನಾಡಿನ ವೀರರಮಣಿಯ
ಗಂಡುಭೂಮಿಯ ವೀರನಾರಿಯ
ಚರಿತೆಯ ನಾನು ಹಾಡುವೆ

೩.ಒಲವೆ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ

೪.ತುಂತುರು ಅಲ್ಲಿ ನೀರಹಾಡು
ಕಂಪನ ಇಲ್ಲಿ ಪ್ರೀತಿಹಾಡು
ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ

೫.ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

೬.ಬಾನಿಗೊಂದು ಎಲ್ಲೆ ಎಲ್ಲಿದೆ
ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ
ನಿಧಾನಿಸು ನಿಧಾನಿಸು

ಚಿತ್ರಗೀತೆಯಾಗಿ ಕವಿಗಳ ಕವನ ಸುತ್ತು:-

೧.ತೆರೆದಿದೆ ಮನೆ ಓ.. ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯ
ಹೊಸ ಬಾಳನು ತಾ ಅತಿಥಿ

೨.ಉತ್ತರ ಧ್ರುವದಿಂ ದಕ್ಷಿಣ ಧ್ರುವಕು
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ

೩.ಜಯ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೆ
ಜಯಹೇ ರಸಋಷಿಗಳ ಬೀಡೆ

೪.ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.  

೫. ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೊ ಬಂದು ನನ್ನ ಸೆಳೆದಳು

೬.ಕುಹೂ ಕುಹೂ ಕುಹೂ ಕುಹೂ
 ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ

ಚರಣ - ಪಲ್ಲವಿ ಸುತ್ತು:-

೧.ಹುವ್ವೇ ಹುವ್ವೇ ಹುವ್ವೇ ಹುವ್ವೇ ಹುವ್ವೇ
ನಿನ್ನೀ ನಗುವಿಗೆ ಕಾರಣವೇನೆ
ಸೂರ್ಯನ ನಿಯಮಾನೇ.. ಚಂದ್ರನ ನೆನಪೇನೇ...

೨.ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು
ಬದುಕಿದು ಜಟಕಾಬಂಡಿ
ಇದು ವಿಧಿಯೋಡಿಸುವ ಬಂಡಿ

೩.ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲ
ನಾ ನಿಂತಲ್ಲೆ ಹಾಳಾದೆ ನಿನ್ನಿಂದಲೆ

೪.ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ



ಚಲನಚಿತ್ರ ಗೀತೆಗಳ ಅಂತ್ಯಾಕ್ಷರಿ ಕಾರ್ಯಕ್ರಮ....!!!

ಈ ದಿನ ಹಾಗೇ ಸುಮ್ಮನೆ ಅಂತ್ಯಾಕ್ಷರಿ ಮಾಡೋಣ ಅನ್ನಿಸಿತು....!!!ಎಲ್ಲವೂ ಸರಳ ಪ್ರಶ್ನೆಗಳು... ಎಲ್ಲಾ ಸುತ್ತುಗಳಿಗೂ ಸೇರಿ ನಿಮಗಿರುವ ಸಮಯ ಹತ್ತು ನಿಮಿಷಗಳು.ಉತ್ತರ ತಿಳಿಸುತ್ತೀರಲ್ವ..???  

ಸನ್ನಿವೇಶ ಸುತ್ತು:- 

ಈ ಸುತ್ತಿನಲ್ಲಿ ಚಿತ್ರದ ಸನ್ನಿವೇಶದ ಬಗ್ಗೆ ಒಂದು ಚಿಕ್ಕ ಮಾಹಿತಿ ನೀಡಿದ್ದೇನೆ. ಆ ಸುಳಿವಿನ ಮೂಲಕ ಚಿತ್ರದ ಹೆಸರು ಮತ್ತು ಹಾಡು ಯಾವುದೆಂದು ಕಂಡು ಹಿಡಿಯಬೇಕು  

1.ಮೊದಲ ಕನ್ನಡ ಸಾಮ್ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಕದಂಬರ ಪ್ರಸಿದ್ಧ ರಾಜನ ಕತೆಯ ಚಲನಚಿತ್ರವಿದು.ದುಷ್ಟ ರಾಜನ ಆಡಳಿತದಿಂದ ನೊಂದ ಬಡಜನರ ಕಣ್ಣೀರು ಒರೆಸಿ,ನಿಮ್ಮೊಂದಿಗೆ ನಾನಿದ್ದೇನೆ,ವೈರಿಗಳನ್ನು ಬಡಿದೋಡಿಸುವೆ ಎಂದು ಈ ಹಾಡಿನ ಮೂಲಕ ನಾಯಕ ನಾಡಿನ ಜನರಿಗೆ ಅಭಯ ನೀಡುವ ಹಾಡು.ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಮಂಜುಳ ಪ್ರಧಾನ ಪಾತ್ರದಲ್ಲಿದ್ದಾರೆ.

2.ತ್ರಿವೇಣಿ ಕಾದಂಬರಿ ಆಧಾರಿತ ,ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮೊದಲ ಚಿತ್ರ.ಈ ಚಿತ್ರದ ನಾಯಕಿ ಕಾಫಿ ಎಸ್ಟೇಟ್ ಮಾಲೀಕರ ಒಬ್ಬಳೇ ಮಗಳು.ಬೆಳಗ್ಗೆ ತನ್ನ ತೋಟವನ್ನೆಲ್ಲ ಸುತ್ತಾಡುತ್ತಾ ಪೂಜೆಗಾಗಿ ಹೂಗಳನ್ನು ಕೀಳುತ್ತಾ, ದ ರಾ ಬೇಂದ್ರೆಯವರು ಬರೆದ ಈ ಗೀತೆಯನ್ನು ಹಾಡುತ್ತಾಳೆ.ಕಲ್ಪನಾ ಚಿತ್ರದ ನಾಯಕಿ. 

3.ಶಾಪಕ್ಕೆ ಗುರಿಯಾದ ಏಳು ಜನ ಗಂಧರ್ವರು ಪೆದ್ದ ಶಿಷ್ಯರಾಗಿ ಭೂಮಿಗೆ ಬರುತ್ತಾರೆ. ಈ ಪೆದ್ದ ಶಿಷ್ಯರು ಹಾಡುವ ಜಾಣರ ಹಾಡಿದು.ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ವಿಷ್ಣುವರ್ಧನ್, ಮಂಜುಳ ಇದ್ದಾರೆ.

4.ವಿಶ್ವ ವಿಖ್ಯಾತ ಜೋಗವನ್ನು ಕುರಿತಾದ ಈ ಹಾಡನ್ನು ರಾಜ್ ಕುಮಾರ್ ಹಾಡಿದ್ದಾರ‍ೆ.

5.ವಿಷ್ಣುವರ್ಧನ್ ಮತ್ತು ಸುಹಾಸಿನಿ ಓಕುಳಿಯಾಡುತ್ತಾ ಹಾಡಿದ ಈ ಹಾಡು ನಾಯಕ ಕಂಡ ಕನಸು ಮಾತ್ರ.

6.ತನಗೊಂದು ಮಗು ಹುಟ್ಟುವುದರೊಂದಿಗೆ ಅಪ್ಪನೂ ಹುಟ್ಟುತ್ತಾನೆ.ಅದು ಬೆಳೆದಂತೆ ತಾನೂ ಬೆಳೆಯುತ್ತಾನೆ ಎನ್ನುವ ಈ ಚಿತ್ರದ ತಂದೆ ತನ್ನ ಮಗಳು ಹುಟ್ಟಿದಾಗ ಹಾಡುವ ಕನಸಿನ ಹಾಡು.


ಅಂತ್ಯ ಪದ ಸುತ್ತು:- 

ಚಿತ್ರಗೀತೆಯ ಪಲ್ಲವಿಯ ಸಾಲಿನ ಕೊನೆಯ ಪದವನ್ನು ಕೊಟ್ಟಿದ್ದೇನೆ.ಹಾಡು ಯಾವುದೆಂದು ಗುರುತಿಸಿ.

1............ ಕಡಲಲ್ಲಿ
........... ದೋಣಿಯಲಿ
........... ನಾನಮ್ಮ

2................. ವೀರರಮಣಿಯ
................. ವೀರನಾರಿಯ
................. ಹಾಡುವೆ

3........... ಸಾಕ್ಷಾತ್ಕಾರ
........... ಮಮಕಾರ
........... ಮಮಕಾರ

4............ ನೀರಹಾಡು
............ ಪ್ರೀತಿಹಾಡು
............ ಇರುಳಿರಲಿ 
............ ಹೇಗಿರಲಿ
............ ನೀ ತುಂಬಿದೆ

5..................... ಬದುಕಿರಲಾರೆ
..................... ನಾನಿರಲಾರೆ
..................... ತಾಳಲಾರೆ
..................... ಸಹಿಸಲಾರೆ 

6.............. ಎಲ್ಲಿದೆ
.............. ಕೊನೆಯಿದೆ
.............. ಕಾಣುವೆ
...............ನಿಧಾನಿಸು



ಚಿತ್ರಗೀತೆಯಾಗಿರುವ  ಕವಿಗಳ ಕವನ ಸುತ್ತು:-

1.ಕುವೆಂಪು ರವರು ಬರೆದ "ಹೊಸಬೆಳಕು" ಚಿತ್ರದ ಗೀತೆಯನ್ನು ಹೇಳಿ.

2."ಶರಪಂಜರ" ಚಿತ್ರದ ದ ರಾ ಬೇಂದ್ರೆ ವಿರಚಿತ ಗೀತೆ ಹೇಳಿ.

3.ಕುವೆಂಪು ವಿರಚಿತ ನಮ್ಮ ನಾಡಗೀತೆಯೂ ಚಲನಚಿತ್ರ ಗೀತೆಯಾಗಿದೆ. ಅದನ್ನು ಹೇಳಿ.

4.ದ ರಾ ಬೇಂದ್ರೆಯವರ ಜನಪ್ರಿಯ ಯುಗಾದಿಯ ಹಾಡನ್ನು ಹೇಳಿ.

5.ಗೌರಿ ಚಿತ್ರದಲ್ಲಿ ಕೆ ಎಸ್ ನರಸಿಂಹಸ್ವಾಮಿಯವರು ಬರೆದ ಕವನವನ್ನು ಹೇಳಿ.

6.ಕುವೆಂಪು ರವರು ಬರೆದ ಮನ್ನಾಡೆ ಹಾಡಿದ ಚಲನಚಿತ್ರ ಗೀತೆಯನ್ನು ಹೇಳಿ.


ಚರಣ - ಪಲ್ಲವಿ ಸುತ್ತು:- 
ಚಿತ್ರಗೀತೆಯ ಚರಣದ ಸಾಹಿತ್ಯವನ್ನು ನೋಡಿ ಪಲ್ಲವಿಯನ್ನು ಹೇಳಿ

1.ಆಭರಣದ ಅಂಗಡಿಗೆ ಹೋಗೋಣ ಗಿಳಿಮರಿಯೆ
ಮುದ್ದಾದ ಮೂಗಿಗೆ ಮೂಗುತಿ ಹಾಕುವೆ
ಸೀರೆಗಳ ಅಂಗಡಿಗೆ ಹೋಗೋಣ ಬಾ ನವಿಲೆ
ಸಿಂಗಾರ ಮಾಡಲು ನಿನ್ನಂತೆ ನನ್ನನು
ಮುಗಿಲೆ ಓ ಮುಗಿಲೆ ಕೆನ್ನೆ ಕೆಂಪು ಏಕೆ
ನಿನ್ನಾ ನೋಡೋಕೆ ನಲ್ಲ ಬರುವನೇನೆ
ಗಾಳಿಯೇ ಕಂಪನು ಕದ್ದೊಯ್ವೆ ಎಲ್ಲಿಗೆ

2.ಕಾಶಿಲೀ ಸ್ನಾನ ಮಾಡು 
ಕಾಶ್ಮೀರ ಸುತ್ತಿ ನೋಡು
ಜೋಗಾದ ಗುಂಡಿ ಒಡೆಯ ನಾನೆಂದು ಕೂಗಿ ಹಾಡು
ಅಜಂತಾ ಎಲ್ಲೋರನ ಬಾಳಲಿ ಒಮ್ಮೆ ನೋಡು
ಬಾದಾಮಿ ಐಹೊಳೆಯ ಚಂದಾನ ತೂಕ ಮಾಡು
ಕಲಿಯೋಕೆ ಕೋಟಿ ಭಾಷೆ
ಹಾಡೋಕೆ ಒಂದೇ ಭಾಷೆ ಕನ್ನಡ... ಕನ್ನಡ..ಕಸ್ತೂರಿ ಕನ್ನಡ

3.ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೊ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ಕರೆ ಬಂದಿದೆ.

4.ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆಯು ಎಂದೆಂದು ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ

Bye…. Bye…. Telegram…!!!!!!

ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ,ನಮ್ಮ ಶಾಲೆಯ ಎದುರುಗಡೆಯೇ ಪೋಸ್ಟಾಫೀಸ್ ಇತ್ತು. ಶಾಲೆಗೆ ಹೋಗುವಾಗ ಮತ್ತು ಬರುವಾಗಲೆಲ್ಲಾ  ಪೋಸ್ಟಾಫೀಸಿನಿಂದ ಕಟ್ಟ.. ಕಡ..ಕಡ... ಎಂಬ ಶಬ್ದ ನಿರಂತರವಾಗಿ ಕಿವಿಗೆ ಬೀಳುತ್ತಿತ್ತು. ಇದೇನು ಎಂಬ ಕುತೂಹಲ ನನ್ನದಾಗಿತ್ತು....??!!!.ಸ್ವಲ್ಪ ಬೆಳೆದ ನಂತರ Post card ತರಲು ಪೋಸ್ಟಾಫೀಸಿಗೆ ಹೋದಾಗ ಈ ಶಬ್ದ ಏನು ಅಂತ ಕೇಳಿಯೇ ಬಿಟ್ಟೆ....!! ಆಗ ನನಗೆ ತಿಳಿದು ಬಂತು,  ಇದು ಟೆಲಿಗ್ರಾಂ ಕಳುಹಿಸುವ ಯಂತ್ರದ ಶಬ್ದವೆಂದು...!! ಕೇವಲ ಕಟ್ಟ.. ಕಡ..ಕಡ... ಸದ್ದಿನೊಂದಿಗೆ ಸಂದೇಶಗಳನ್ನು ತಿಳಿಯಲು ಸಾಧ್ಯವೇ ಎಂಬ ಅಚ್ಚರಿ ನನಗಾಯಿತು....!!
ಇಂದು ರಾತ್ರಿ ಹನ್ನೆರಡು ಗಂಟೆಯಿಂದ ದೇಶಾದ್ಯಂತ ಈ ಸದ್ದು ಶಾಶ್ವತವಾಗಿ ನಿಂತುಹೋಗುತ್ತಿದೆ. ಅತಿ ಕಡಿಮೆ ದರದಲ್ಲಿ ದೇಶದ ಮೂಲೆಮೂಲೆಗಳಿಗೂ ಸಿಹಿ-ಕಹಿ ಸಂದೇಶಗಳನ್ನು ಹೊತ್ತು ತರುತ್ತಿದ್ದ ತಂತಿ ಸಂದೇಶ (Telegram), ನಾಳೆಯಿಂದ ಬರೀ ನೆನಪು ಮಾತ್ರ. ಜನಸಾಮಾನ್ಯರೊಂದಿಗೆ ಭಾವನಾತ್ಮಕವಾಗಿ ಬೆರೆತಿದ್ದ ಈ ಸೇವೆಗೊಂದು ನಮನ ಸಲ್ಲಿಸಲೋಸುಗವೇ ಈ ನನ್ನ ಲೇಖನ.

1982 ರಲ್ಲಿ ನನ್ನ ಮದುವೆಯ ಸಂದರ್ಭದಲ್ಲಿ, ಕಾರಣಾಂತರದಿಂದ ವಿವಾಹಕ್ಕೆ ಬರಲಾಗದವರು ತಮ್ಮ ಶುಭಾಶಯಗಳನ್ನು ಹಂಚಿಕೊಂಡಿದ್ದು ಈ Telegram ಮೂಲಕ...!!!
ಇನ್ನು 1996 ರಲ್ಲಿ ನಾನು ಮೈಸೂರಿಗೆ ಟ್ರೈನಿಂಗಿಗೆ ಹೋಗಿದ್ದೆ. ಆಗ ನನ್ನ ಹುಟ್ಟುಹಬ್ಬ ಬಂದಿತ್ತು. ಮದುವೆಯಾದಾಗಿನಿಂದ ನನ್ನವರೊಂದಿಗೆ ಆಚರಿಸಿಕೊಳ್ಳುತ್ತಿದ್ದ ನನ್ನ ಹುಟ್ಟುಹಬ್ಬ ಈ ಸಾರಿ ಅನಿವಾರ್ಯವಾಗಿ ತಪ್ಪಿಹೋಗಿತ್ತು. ಆಗ ನನ್ನವರ ಮತ್ತು ನನ್ನ ಮಗಳ ಶುಭಾಶಯಗಳನ್ನು ಹೊತ್ತು ತಂದಿದ್ದು ಸಹ ಈ ತಂತಿ ಸಂದೇಶವೇ...!!! ಈ ಎಲ್ಲಾ Telegramಗಳು , ನನ್ನ ಜೀವನದ ಸಿಹಿ ಸಂಕೇತಗಳಾಗಿ ಇಂದಿಗೂ ನನ್ನ ಬಳಿ ಜೋಪಾನವಾಗಿವೆ.
ನಾನು ಈಗ ಕೆಲಸ ಮಾಡುತ್ತಿರುವ  B S N L  ಸಂಸ್ಥೆ ,ಮೊದಲಿಗೆ P&T ಎಂದು ಹೆಸರಾಗಿತ್ತು. ಕಾಲಕ್ರಮೇಣ ವಿಶ್ವದಲ್ಲುಂಟಾದ ಸಂಪರ್ಕ ಕ್ರಾಂತಿಯಿಂದಾಗಿ  Telecommunication ಶಾಖೆ Postal ನಿಂದ ಬೇರ್ಪಟ್ಟಿತು. ಜಾಗತೀಕರಣದ ಕಾರಣದಿಂದಾಗಿ Telecommunication Department , Bharath Sanchar Nigam Limited (B S N L) ಆಗಿ ಬದಲಾಯಿತು. ವರ್ಷದಿಂದ ವರ್ಷಕ್ಕೆ ನೂತನ ಆವಿಷ್ಕಾರಗಳಿಗೆ ತನ್ನನ್ನು ತೆರೆದುಕೊಂಡಿತು.ನಮ್ಮ ಕೆಲಸದ ವೈಖರಿಯೂ ಬದಲಾಯಿತು. STD,ISD ಗಳ ಸೇವೆಗಳಿಂದಾಗಿ Trunk call ಸೇವೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು.  ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಪೈಪೋಟಿಯಾಗಿ ನಿಲ್ಲಬೇಕಾದ ಪರಿಸ್ಥಿತಿ...! ಹಾಗಾಗಿ ನಿಧಾನಗತಿಯ ಯಂತ್ರಗಳಿಗೆ ವಿದಾಯ ಹೇಳಲೇಬೇಕಾದ ಅನಿವಾರ್ಯತೆ ನಮ್ಮದಾಯಿತು.
Mobile, Computer, Internet ಸೇವೆಗಳು ವ್ಯಾಪಕವಾಗಿ ಬಳಕೆಗೆ ಬಂದಂತೆ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಉಂಟಾಯಿತು. ಈಗ ಮನೆಯಲ್ಲಿಯೇ ಕುಳಿತು, ಚಿಟಿಕೆ ಹೊಡೆಯುವುದರಲ್ಲಿ ನಮ್ಮ ಸಂದೇಶಗಳನ್ನು ವಿಶ್ವದಾದ್ಯಂತ ಹಂಚಿಕೊಳ್ಳಬಹುದು. ಇಂತಹ email ಯುಗದಲ್ಲಿ Telegram ಇಷ್ಟು ದಿನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದೇ ಹೆಚ್ಚು. ದೇಶದಲ್ಲಿ ದಿನವೊಂದಕ್ಕೆ ಲಕ್ಷಾಂತರದಲ್ಲಿದ್ದ ತಂತಿ ಸೇವೆ ಕೇವಲ ಸಾವಿರಕ್ಕಿಳಿದಾಗ ಸಂಸ್ಥೆಗೆ ನಷ್ಟವೂ ಹೆಚ್ಚು. ಈ ನಿಮಿತ್ತ B S N L  ಸಂಸ್ಥೆ  ಇಂದು ರಾತ್ರಿ ಹನ್ನೆರಡು ಘಂಟೆಯಿಂದ ಟೆಲಿಗ್ರಾಂ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ. ಹೊಸನೀರು ಬಂದಾಗ ಹಳೆನೀರು ಕೊಚ್ಚಿ ಹೋಗಲೇಬೇಕು. ನಾವೆಲ್ಲರೂ email ಯುಗಕ್ಕೆ ಸಂತಸದಿಂದ ಕಾಲಿರಿಸಬೇಕು. ಸುಮಾರು ನೂರ ಅರವತ್ತು ವರ್ಷಗಳಿಂದಲೂ ನಮ್ಮ ಬದುಕಿನ ಸಿಹಿ-ಕಹಿ ಕ್ಷಣವನ್ನು ಹೊತ್ತು ತರುತ್ತಿದ್ದ ತಂತಿಸಂದೇಶ (Telegram)ಕ್ಕೆ ಸಂತಸದಿಂದಲೇ ವಿದಾಯ ಹೇಳೋಣ.

Bye…. Bye…. Telegram…!!!!!!

ಕೆಳಗಿನ ಲಿಂಕಿಗೂ ದಯವಿಟ್ಟು ಭೇಟಿ ಕೊಡಿ

https://www.facebook.com/photo.php?fbid=600128216698298&set=gm.481868878564334&type=1&theater

"ಗಣೇಶ ನಮಸ್ಕಾರ ಸ್ತೋತ್ರಂ"

ನಾನು ಚಿಕ್ಕವಳಿದ್ದಾಗ ಈ ಗಣಪತಿ ನಮಸ್ಕಾರ ಸ್ತೋತ್ರ ವನ್ನು ತುಂಬಾ ಹೇಳುತ್ತಿದ್ದೆ. ನನಗೆ ನಮ್ಮ ಅಮ್ಮ ಇದನ್ನು ಹೇಳಿಕೊಟ್ಟಿದ್ರು...!!! ನಾನು ಇತ್ತೀಚೆಗೆ ಇದನ್ನು ಸ್ವಲ್ಪ ಮರೆತುಬಿಟ್ಟಿದ್ದೆ. ..!!  ಆದರೆ ಇವತ್ತು ನನ್ನ ಹಳೆ ಪುಸ್ತಕದಲ್ಲಿ ಇದರ ಪೂರ್ಣ ಸಾಹಿತ್ಯ ಸಿಕ್ಕಾಗ ನನಗೆ ಅತೀವ ಸಂತಸವಾಯಿತು....!!!! ತಕ್ಷಣ ಇದನ್ನು Type ಮಾಡಿ ನನ್ನ Bolgಗೆ post ಮಾಡಿದ್ದೇನೆ....!!!!! ಇದನ್ನು ಇವತ್ತು ಲೆಕ್ಕವಿಲ್ಲದಷ್ಟು ಬಾರಿ ಹೇಳಿಕೊಂಡು ಆನಂದಿಸಿದ್ದೇನೆ....!!!! ಕಳೆದ ಬಾಲ್ಯದ ನೆನಪುಗಳಲ್ಲಿ ನಾನು ತೇಲಿಹೋಗಿದ್ದೇನೆ...!!! ಗೌರಿ-ಗಣಪತಿ ಹಬ್ಬದಲ್ಲಂತೂ ಈ ಸ್ತೋತ್ರವನ್ನು ಎಷ್ಟು ಹೇಳುತ್ತಿದ್ದೆವೋ ...!ಲೆಕ್ಕವಿಲ್ಲ....!! ಗಣಪತಿ ನೋಡಲು ಹೋಗುತ್ತಿದ್ದ ಮನೆಮನೆಯಲ್ಲಿಯೂ ಇದನ್ನು ಹಾಡುತ್ತಿದ್ದೆವು...!!! ನನ್ನ ಪ್ರಿಯ ಗಣಪ... ನಿನಗೆ ಕೋಟಿ ನಮಸ್ಕಾರಗಳು......!!!!!!
"ಗಣೇಶ ನಮಸ್ಕಾರ ಸ್ತೋತ್ರಂ"

ಜಯ ಜಯ ಗಣಪತಿ |
ಜಯ ಜಯ ಭೂಪತಿ |
ಜಯ ಜಯ ಪಾರ್ವತಿ ಪುತ್ರನಿಗೆ |
ಜಯ ಜಯವೆಂದು ಜನಗಳು ಪೊಗಳಲು
ಭವಭಯಗಳ ಪರಿಹರಿಸುವನು ||

ಒಂದು ನಮಸ್ಕಾರವ ಮಾಡಲು ಕುಂದದೆ ಮುಕ್ತಿಯ ಕೊಡುವವನು |
ಎರಡು ನಮಸ್ಕಾರವ ಮಾಡಲು ಎಲ್ಲರ ಕರುಣದಿ ಕಾಯುವನು |

ಮೂರು ನಮಸ್ಕಾರವ ಮಾಡಲು ಮುಕ್ತಿಗೆ ಮಾರ್ಗವ ತೋರುವನು |
ನಾಲ್ಕು ನಮಸ್ಕಾರವ ಮಾಡಲು  ಮನುಜಗೆ ನರಕದ ಭಯವಿಲ್ಲ |

ಐದು ನಮಸ್ಕಾರವ ಮಾಡಲು ಮುತ್ತೈದೆತನ ಕೊಡುವವನು |
ಆರು ನಮಸ್ಕಾರವ ಮಾಡಲು ಹಾರಿಸುವನು ಪರಿಪಾಪಗಳ |

ಏಳು ನಮಸ್ಕಾರವ ಮಾಡಲು ಏಳು ಜನ್ಮದ ಶನಿ ತೊಲಗುವುದು |
ಎಂಟು ನಮಸ್ಕಾರವ ಮಾಡಲು ಕಂಟಕವನು ಪರಿಹರಿಸುವನು |

ನವ ನಮಸ್ಕಾರವ ಮಾಡಲು ನವ ವಿಧ ಪಾಪವು ಪರಿಹಾರ |
ಹತ್ತು ನಮಸ್ಕಾರವ ಮಾಡಲು  ಪುತ್ರರ ಕರುಣದಿ ಕಾಯುವನು |

ನೂರು ನಮಸ್ಕಾರವ ಮಾಡಲು ಘೋರ ನರಕದ ಭಯವಿಲ್ಲ |
ಸಾವಿರ ನಮಸ್ಕಾರವ ಮಾಡಲು ಶಿವಸಾಯುಜ್ಯವು ದೊರಕುವುದು |

ಲಕ್ಷ ನಮಸ್ಕಾರವ ಮಾಡಲು ಲಕ್ಷ್ಮೀ ಪದವಿಯ ಕೊಡುವವನು|
ಕೋಟಿ ನಮಸ್ಕಾರವ ಮಾಡಲು ಕೊಡುವನು ಬಹು ಧನ ಸಿರಿಗಳನು|| 

ವಿದೇಶ ವಿಹಾರ - 20 - ಸುಂದರ ನಗರ Townsville

ಆಸ್ಟ್ರೇಲಿಯಾದ Queens Land ರಾಜ್ಯದ ಕಡಲತೀರದ ಒಂದು ಸುಂದರ ನಗರ Townsville.ಈ ನಗರದ ಉತ್ತರಕ್ಕೆ Crains ಮತ್ತು ದಕ್ಷಿಣಕ್ಕೆ Brisbane ನಗರಗಳಿವೆ. ಈ ಎರಡು ದೊಡ್ಡ ನಗರಗಳಿಗೆ ಸೇತುವೆಯಂತಿದೆ ಈ ನಗರ. ತನ್ನ ಹೃದಯ ಭಾಗದಲ್ಲಿರುವ ಕ್ಯಾಸಲ್ ಬೆಟ್ಟ( Castal Hill) ದ ಸುತ್ತ ಹರಡಿಕೊಂಡಿರುವ ಸಮತಟ್ಟಾದ ಪ್ರದೇಶದಲ್ಲಿ ಟೌನ್ಸ್ವಿಲ್ಲ್ ನಗರ ಬೆಳೆದು ನಿಂತಿದೆ. ನಗರದ ತುಂಬೆಲ್ಲಾ ತಲೆ ಎತ್ತಿ ನಿಂತಿರುವ ಮರಗಳು ಈ ಊರನ್ನು ಹಸಿರಾಗಿಸಿವೆ ಮತ್ತು ತಂಪಾಗಿಸಿವೆ. ಇದೊಂದು ಅತ್ಯುತ್ತಮ ವಾಣಿಜ್ಯ ಕೇಂದ್ರ, ಕೈಗಾರಿಕ ಪ್ರದೇಶ, ಬಂದರು ಮತ್ತು ಪ್ರವಾಸೀತಾಣ.ಇಲ್ಲಿನ ಬಂದರಿನಿಂದ ಹಡಗಿನಲ್ಲಿ ಲೋಹಯುಕ್ತ ಅದಿರು, ಸಕ್ಕರೆ ಮುಂತಾದುವುಗಳನ್ನು ಬೇರೆಡೆಗೆ ರಫ್ತು ಮಾಡಲಾಗುತ್ತದೆ. 

ಇದು ಚಿಕ್ಕ ನಗರವಾದರೂ ಸ್ನೇಹಜೀವಿ ಜನರಿರುವ ಸ್ಥಳ. ಇಲ್ಲಿ ವಾಸಿಸುವ ಬಹುತೇಕ ಜನರು ನಗರಕ್ಕೆ ಹತ್ತಿರವಿರುವ ಮೈನಿಂಗ್ ಇಂಡಸ್ಟ್ರಿಗಳಲ್ಲಿ ದುಡಿಮೆ ಮಾಡುತ್ತಾರೆ.ಇಲ್ಲಿನ ಸಾಲ್ಟ್ ವಾಟರ್ ಆಕ್ವೇರಿಯಮ್ ತುಂಬಾ ಪ್ರಸಿದ್ಧವಾದುದು. ಹಸಿರಾದ ಪಾರ್ಕುಗಳು ಮತ್ತು ತಿಳಿನೀರಿನ ಸರೋವರಗಳು ನಗರದ ಸೊಬಗನ್ನು ಹೆಚ್ಚಿಸಿವೆ. ಇಡೀ ನಗರದ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿರುವ ಹಸಿರು ಲಾನ್ ಕಣ್ಣಿಗೆ ತಂಪನ್ನೀಯುತ್ತದೆ. ನಗರದಲ್ಲಿ ಎಲ್ಲಿಯೇ ಹೋದರೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ.ಇದೊಂದು ನಿರ್ಮಲವಾದ ಸುಂದರ ನಗರ.ಇವು ನಮ್ಮ ದೇಶಕ್ಕೆ ಮಾದರಿಯಾಗಿವೆ.ನಮ್ಮ ಮಗಳು- ಅಳಿಯ, ತಮ್ಮ ಕೆಲಸದೊತ್ತಡದ ಮಧ್ಯೆಯೂ ನಮ್ಮನ್ನು ಎಲ್ಲೆಡೆಯೂ ಸುತ್ತಾಡಿಸಿ,ಅಲ್ಲಿನ ವಿಶೇಷತೆಗಳನ್ನು ನಮಗೆ ವಿವರವಾಗಿ ತಿಳಿಸಿಕೊಟ್ಟರು.ಅದಕ್ಕಾಗಿ ಅವರಿಗೊಂದು ಧನ್ಯವಾದಗಳನ್ನು ನಾನು ಇಲ್ಲಿ ಹೇಳಲೇಬೇಕು. Thanks to Smitha & Girish...

ಈ ನಗರದಲ್ಲಿ ಹರಿಯುವ ರಾಸ್ ನದಿ ನಗರಕ್ಕೊಂದು ಶೋಭೆಯನ್ನು ತಂದಿದೆ.ನಮ್ಮ ಮಗಳಿದ್ದ ’Mint Apartment’ ಈ ನದಿಯ ದಂಡೆಯಲ್ಲಿದೆ.ಮನೆಯ ಹಿಂಭಾಗದ ಟೆರೇಸಿನಲ್ಲಿ ನಿಂತರೆ ನದಿಯ ನೀರಿನ ಏರಿಳಿತಗಳು,ನೀರಿನ ಸಣ್ಣ ಕಲರವ,ಮೀನಿಗಾಗಿ ಗಾಳ ಹಾಕಿ ಕುಳಿತ ಜನ,ಕಾದು ಕುಳಿತು ಸರ್ರನೆ ಹಾರಿ ಬಂದು ಮೀನನ್ನು ಕಚ್ಚಿ ಹಾರುವ ಹಕ್ಕಿಗಳ ದೃಶ್ಯಗಳು ಮನಸೆಳೆಯುತ್ತಿದ್ದವು.
ಇವುಗಳನ್ನು ನೋಡುತ್ತಲೇ ನಮ್ಮ ಊಟೋಪಚಾರಗಳು,     ಮನೆಯ ಎಲ್ಲಾ ಕೆಲಸಗಳು ನಡೆಯುತ್ತಿದ್ದವು ಎಂದರೆ ತಪ್ಪಲ್ಲ....!! ಆ ಸುಂದರ ದಿನಗಳನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ .

ಟೌನ್ಸ್ವಿಲ್ಲ್ ನಲ್ಲಿ ಜನರ  ಮನರಂಜನೆಗಾಗಿ ಅನೇಕ ಸುಂದರ ಬೀಚ್ ಗಳಿವೆ. ಅವುಗಳಲ್ಲಿ  Pallarenda ಮತ್ತು Strand ಬೀಚುಗಳು ಪ್ರಮುಖವಾದುವುಗಳು.

Pallarenda  Beach


ಇದು ಮರಳಿನಿಂದ ಕೂಡಿರುವ ಪ್ರಕೃತಿದತ್ತವಾದ ಸಮುದ್ರದಂಡೆ.  ಇದನ್ನು ನೋಡಿದರೆ ನಮ್ಮ ಭಾರತದ ಬೀಚುಗಳನ್ನು ನೋಡಿದಂತೆ ಭಾಸವಾಯಿತು. ಆದರೆ ಇಲ್ಲಿರುವ ಸ್ವಚ್ಛತೆಯನ್ನು ಮಾತ್ರ ನಮ್ಮ ಸಮುದ್ರ ತೀರಗಳಲ್ಲಿ ಕಾಣಲು ಎಂದೆಂದಿಗೂ ಸಾಧ್ಯವಿಲ್ಲ ಎಂಬುದು ಮಾತ್ರ ಸತ್ಯ...!!!
Strand Beach



ಸ್ಟ್ರ‍ಾಂಡ್ ಬೀಚ್ ಅತ್ಯಂತ ಉದ್ದವಾದ ಸಮುದ್ರ ತೀರವನ್ನು ಹೊಂದಿದೆ.ರಸ್ತೆ ಮತ್ತು ಸಮುದ್ರ ದಂಡೆಯ ಮಧ್ಯೆ ಬೆಳೆಸಿರುವ ಹಸಿರು ಲಾನ್ ಮತ್ತು ಮರಗಿಡಗಳು ಈ ಬೀಚಿನ ಸೌಂದರ್ಯವನ್ನು ಹೆಚ್ಚಿಸಿದೆ ಎಂದು ಹೇಳಬಹುದು.

ಇದು ಆಸ್ಟ್ರೇಲಿಯಾದಲ್ಲಿಯೇ ಸುಂದರವಾದ,ನಿರ್ಮಲವಾದ ಮತ್ತು ಅತ್ಯುತ್ತಮವಾದ ಬೀಚ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆಯಂತೆ....! ಇಲ್ಲಿರುವ ಸ್ಟ್ರಾಂಡ್ ಪಾರ್ಕ್, ಸ್ವಿಮ್ಮಿಂಗ್ ಪೂಲ್, ರೆಸ್ಟೋರೆಂಟ್ ಗಳು, ಕಾಫಿಕೆಫೆಗಳ ಅನುಕೂಲಗಳು ಜನರನ್ನು ಆಕರ್ಷಿಸುವಲ್ಲಿ ಮತ್ತು ಮಕ್ಕಳಿಗೆ ಇಷ್ಟವಾಗುವಲ್ಲಿ ನೆರವಾಗಿವೆ.

ಬೆಳಗಿನ ವೇಳೆಯಲ್ಲಿ ಸುಂದರ ಸೂರ್ಯೋದಯವನ್ನು ಮತ್ತು ಸಂಜೆಯ ವರ್ಣರಂಜಿತ ಸೂರ್ಯಾಸ್ತವನ್ನು ಕಾಣಲು ಜನ ಇಲ್ಲಿಗೆ ಬರುತ್ತಾರೆ. ಬೆಳಗಿನ ಮತ್ತು ಸಂಜೆಯ ಜಾಗಿಂಗಿಗೆ ಹೇಳಿಮಾಡಿಸಿದ ಜಾಗವಿದಾಗಿದೆ.  
Castle Hill
ನಗರದ ಪ್ರಮುಖ ಆಕರ್ಷಣೆ ಎಂದರೆ "ಕ್ಯಾಸಲ್ ಹಿಲ್"...!!!!!

ಇದು  ಟೌನ್ಸ್ವಿಲ್ಲ್ ನಗರದ ಮಧ್ಯಭಾಗದಲ್ಲಿದೆ. ಈ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಬಹುದು. ಸಂಜೆಯ ವೇಳೆ ಈ ಬೆಟ್ಟವನ್ನು ಬಹಳ ಜನ ಹತ್ತಿ- ಇಳಿದು ತಮ್ಮ ದೇಹದ ತೂಕವನ್ನು ಸಮತೋಲನದಲ್ಲಿರಿಸಲು ಪ್ರಯತ್ನಿಸುತ್ತಾರೆ. ಅಂದರೆ ವ್ಯಾಯಮಕ್ಕೆ ಉತ್ತಮ ಜಾಗವಿದೆಂದು ಹೇಳಬಹುದು. ಈ ಬೆಟ್ಟದ ಮೇಲೇರಲು ರಸ್ತೆ ಸಹ ಇದೆ. ಹಾಗಾಗಿ ವಾಹನದಲ್ಲಿ ಕೂಡ ಬೆಟ್ಟದ ತುದಿ ತಲುಪಬಹುದು. ಬೆಟ್ಟದ ಮೇಲಿನಿಂದ ಟೌನ್ಸ್ವಿಲ್ಲ್ ನಗರ ಅತಿ ಸುಂದರವಾಗಿ ಕಾಣುತ್ತದೆ..! ಮ್ಯಾಗ್ನೆಟಿಕ್ ದ್ವೀಪದ ದೃಶ್ಯವನ್ನೂ  ಇಲ್ಲಿಂದ ಸವಿಯಬಹುದು.....!! ರಾತ್ರಿ ವೇಳೆಯಲ್ಲಿ ಈ ದೃಶ್ಯಗಳು ಇನ್ನೂ ರಂಜನೀಯವೆನ್ನಿಸುತ್ತವೆ. ಈ ಬೆಟ್ಟವು ಅನೇಕ ಜಾತಿಯ ಸಸ್ಯ ಮತ್ತು ಪಕ್ಷಿಗಳನ್ನು ತನ್ನ ಒಡಲಿನಲ್ಲಿರಿಸಿಕೊಂಡಿದೆ.ಈ ಎಲ್ಲಾ ಕಾರಣದಿಂದಾಗಿ ಈ ಬೆಟ್ಟವು ಪ್ರವಾಸಿಗರನ್ನು ಅಕರ್ಷಿಸುತ್ತಿದೆ.  

Shopping Complex

ಜನಮನ ಸೆಳೆಯುವ ಶಾಪಿಂಗ್ ಮಾಲ್ ಗಳಿವೆ. "ಕ್ಯಾಸಲ್ ಟೌನಿಗೆ" ಹೋದರೆ ಪ್ರತಿಯೊಂದು ವಸ್ತುವೂ ಒಂದೆಡೆಯೇ ಸಿಗುತ್ತದೆ.ಸವಿಸ್ತಾರವಾದ ಪಾರ್ಕಿಂಗ್ ಅನುಕೂಲವಿರುವ ಇಲ್ಲಿ  BIG W , TARGET, WOOLWORTHS, BEST & LESS ಮುಂತಾದ ಬೃಹತ್ತಾದ ಮಾಲ್ ಗಳು ಇಲ್ಲಿ ಒಂದೆಡೆಯೇ ಇವೆ.....!!! ಹಾಗಾಗಿ ಇಲ್ಲಿ ಪರ್ಸಿನ ತುಂಬಾ ಹಣವಿಟ್ಟುಕೊಂಡು  ಒಮ್ಮೆ ಒಳ ಹೋದರೆ, ಹೊರ ಬರಲು ಗಂಟೆಗಳೇ ಬೇಕಾಗುತ್ತದೆ..!!ಆದರೆ ಹಣ ಮಾತ್ರ ನೀರಿನಂತೆ ಹರಿದುಹೋಗುತ್ತದೆ ಅಷ್ಟೆ...!!!!

ಇಂಡಿಯನ್ ಸ್ಟೋರ್ ನಲ್ಲಿ ಭಾರತೀಯರಿಗೆ ಅವಶ್ಯವಾದ ಎಲ್ಲಾ ವಸ್ತುಗಳು ಅಂದರೆ ಅಡುಗೆಗೆ ಬೇಕಾದ ದಿನಸಿ ಸಾಮಾನುಗಳು, ತರಕಾರಿಗಳು ಎಲ್ಲವೂ ದೊರೆಯುತ್ತದೆ.ನಮ್ಮ ದೇಶದಲ್ಲಿ ಸಿಗುವುದಕ್ಕಿಂತಾ ತಾಜಾ ಮತ್ತು ಶುದ್ಧವಾಗಿರುತ್ತವೆ...!!ಇದು ನಿಜಕ್ಕೂ ಭಾರತೀಯರಾದ ನಮಗೆ ಸಮಾಧಾನಕರವಾದ ಸಂಗತಿ.

ನನ್ನ ಮಗಳು ಮತ್ತು ಅಳಿಯ ವಾಸವಾಗಿರುವ ನಗರದ ಬಗ್ಗೆ ನನಗೆ  ಅಭಿಮಾನವಿದೆ.ಅಲ್ಲಿ ಓಡಾಡಿದ ಪ್ರತಿ ನಿಮಿಷವೂ, ಅಲ್ಲಿ ನೋಡಿದ ಪ್ರತಿಯೊಂದು ದೃಶ್ಯವೂ ನನಗೆ ಅವಿಸ್ಮರಣೀಯ ಆನಂದವನ್ನು ತಂದಿದೆ...!!!! ಅಲ್ಲಿನ ಶುಚಿತ್ವ, ಮೂಲಭೂತ ಸೌಕರ್ಯಗಳ ಸಮಂಜಸ ನಿರ್ವಹಣೆಯನ್ನು ಮೆಚ್ಚುವುದರೊಂದಿಗೆ ನಮ್ಮ ದೇಶದಲ್ಲಿ ಇದನ್ನು ಕಾಣುವುದು ಎಂದಿಗೆ ಎನ್ನುವ ಪ್ರಶ್ನೆ ಬೃಹದಾಕಾರವಾಗಿ ನನ್ನನ್ನು ಕಾಡುತ್ತಿದೆ......?!!!!  


ವಿದೇಶ ವಿಹಾರ - 19 - ಮನಸೆಳೆವ Magnetic Island


ಮ್ಯಾಗ್ನೆಟಿಕ್ ಐಲ್ಯಾಂಡ್ ಟೌನ್ಸ್ವಿಲ್ ನಗರದಿಂದ ೭-೮ ಕಿಲೋಮೀಟರ‍್ ದೂರದಲ್ಲಿದೆ. ಫೆರ್ರಿನಲ್ಲಿ ಹೋದರೆ ಇಪ್ಪತ್ತು ನಿಮಿಷಗಳಲ್ಲಿ ತಲುಪಬಹುದು.ಈ ದ್ವೀಪಕ್ಕೆ ಈ ಹೆಸರನ್ನಿಟ್ಟಿದ್ದು ಕ್ಯಾಪ್ಟನ್ ಕುಕ್. ಈ ದ್ವೀಪದ ಹತ್ತಿರ ಬರುತ್ತಿದ್ದಂತೆಯೇ ತನ್ನ ಹಡಗಿನ ಕಾಂಪಾಸ್ಸಿನಲ್ಲಿ ಉಂಟಾದ ಆಯಸ್ಕಾಂತೀಯ ಬದಲಾವಣೆಯನ್ನು ಗಮನಿಸಿ, ಈ ಪ್ರದೇಶದ ಆಯಸ್ಕಾಂತೀಯ ಗುಣವೇ ತನ್ನ ನೌಕೆಯ ಪಥವನ್ನು ಬದಲಾಯಿಸಿತು ಎಂದು ತಿಳಿದು ಇದನ್ನು "ಮ್ಯಾಗ್ನೆಟಿಕ್ ಐಲ್ಯಾಂಡ್" ಎಂದು ಕರೆದನಂತೆ. ನಂತರದ ಬೆಳವಣಿಗೆಗಳಲ್ಲಿ ಈ ಪ್ರದೇಶಕ್ಕೆ ಯಾವುದೇ ರೀತಿಯಾದ ವಿಶೇಷ ಆಯಸ್ಕಾಂತೀಯ ಶಕ್ತಿಯಿಲ್ಲವೆನ್ನುವುದು ತಿಳಿದು ಬಂದಿತಂತೆ.

ಟೌನ್ಸ್ವಿಲ್ ನಗರದಿಂದ ಈ ದ್ವೀಪಕ್ಕೆ ಫೆರ್ರಿಯಲ್ಲಿ ಸಾಗುವುದು ಒಂದು ವಿಶೇಷ ಅನುಭವವನ್ನು ತಂದುಕೊಡುತ್ತದೆ.ಈ ಫೆರ್ರಿಯಲ್ಲಿ ಕುಳಿತಾಗ ನನಗೆ ಸಿಗಂಧೂರಿಗೆ ಲಾಂಚ್ ನಲ್ಲಿ ಪಯಣಿಸಿದ್ದು ನೆನಪಾಯಿತು.ಆ ಲಾಂಚ್ ಚಿಕ್ಕದು ಮತ್ತು ಅಷ್ಟೊಂದು ಸುರಕ್ಷಿತವಾಗಿರಲಿಲ್ಲ ಎನ್ನಿಸಿತ್ತು.   ಆದರೆ ಇಲ್ಲಿನ ಫೆರ್ರಿಗಳು ಬೃಹತ್ತಾಗಿದ್ದುವಲ್ಲದೆ ಎರಡು,ಮೂರು ಅಂತಸ್ತುಗಳನ್ನು ಹೊಂದಿರುತ್ತವೆ.ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇರುತ್ತದೆ.ಎಲ್ಲೆಲ್ಲೂ ಶುಚಿತ್ವ ಎದ್ದು ಕಾಣುತ್ತದೆ. ವಿಮಾನದಲ್ಲಿ ಆಗಸದಲ್ಲಿ ಹಾರಾಡುವಾಗ ಉಂಟಾದ ಹಾಗೆಯೇ, ಫೆರ್ರಿಯಲ್ಲಿ ಕುಳಿತು ಸಮುದ್ರದ ಮೇಲೆ ಸಾಗುವಾಗಲೂ ವಿಶೇಷ ಅನುಭವವನ್ನು ಪಡೆದಂತಾಯಿತು. ಆಸ್ಟೇಲಿಯಾಕ್ಕೆ ಬಂದಾಗಿನಿಂದಲೂ ಜನಸಂದಣಿ ಪ್ರದೇಶ ಎನ್ನುವುದೇ ಮರೆತು ಹೋಗಿತ್ತು.ಆದರೆ ಇಲ್ಲಿನ ಟಿಕೆಟ್ ಬುಕ್ಕಿಂಗ್ ಕೌಂಟರಿಗಳಲ್ಲಿ ಮತ್ತು ಫೆರ್ರಿಗಳಲ್ಲಿ ಆಸ್ಟ್ರೇಲಿಯನ್ಸ್ ಮತ್ತು ಅನೇಕ ವಿದೇಶಿಯರನ್ನು ನೋಡಿ ಖುಷಿಯಾಯಿತು.ಅಲ್ಲದೆ ಈ ಪ್ರದೇಶದ ಆದಿವಾಸಿ (ಆಸ್ಟ್ರೇಲಿಯನ್ ಅಬಾರಿಜಿನಲ್ಸ್)ಗಳ ದರುಶನವನ್ನೂ ಪಡೆದೆವು. ಅಲ್ಲಿ ಈ ಮೂಲನಿವಾಸಿಗಳ ಸ್ಥಿತಿಯನ್ನು ಕಂಡು ಮನಸ್ಸು ಆರ್ದ್ರವಾಯಿತು.

ಮ್ಯಾಗ್ನೆಟಿಕ್ ಐಲ್ಯಾಂಡಿನಲ್ಲಿ ಸುಂದರವಾದ ಅನೇಕ ಕೊಲ್ಲಿ ಪ್ರದೇಶಗಳಿವೆ.ಅವುಗಳಲ್ಲಿ ಅರ್ಕಡಿಯಾ ಬೇ, ನೆಲ್ಲೀ ಬೇ,ಹಾರ್ಸ್ ಶೂ ಬೇ ಮತ್ತು ಪಿಕ್ನಿಕ್ ಬೇ ಮುಖ್ಯವಾದವುಗಳು.ನಾವು ಫೆರ್ರಿಯಲ್ಲಿ ಬಂದು ’ನೆಲ್ಲೀ ಬೇ’ನಲ್ಲಿಳಿಯುತ್ತೇವೆ. ಈ ದ್ವೀಪದಲ್ಲಿರುವ ವಿವಿಧ ಜಾತಿಯ ಸಸ್ಯವರ್ಗ, ವರ್ಣರಂಜಿತ ಬೆಟ್ಟ ಪ್ರದೇಶ, ಅಪರೂಪದ ಪ್ರ‍ಾಣಿ-ಪಕ್ಷಿಗಳು ಮತ್ತು ಎತ್ತೆತ್ತಲೂ ಕಾಣುವ ನೀಲ ಸಾಗರ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.ದ್ವೀಪದ ಎಲ್ಲಾಭಾಗಗಳನ್ನು ನೋಡಲು ಬಸ್ಸಿನ ವ್ಯವಸ್ಥೆ ಇದೆ. ಅಲ್ಲದೆ ಚಿಕ್ಕ ಜೀಪ್ ಗಳಂತಿರುವ ಮೋಕ್ ಗಳು ಮತ್ತು ಟಾಪ್ ಲೆಸ್ ಕಾರುಗಳು ಬಾಡಿಗೆಗೆ ಸಿಗುತ್ತವೆ. ಇಲ್ಲಿ ಸುತ್ತಾಡಲು ಸ್ಕೂಟರ್ ಸಹ ಬಾಡಿಗೆಗೆ ಸಿಗುತ್ತದೆ. ನಾನು ಆಸ್ಟ್ರೇಲಿಯಾಗೆ ಬಂದಾಗಿನಿಂದ ಎಲ್ಲೆಲ್ಲೂ ಬರೀ ಕಾರುಗಳನ್ನೆ ಕಂಡಿದ್ದೆ ಆದರೆ ಸ್ಕೂಟರನ್ನು ನೋಡಿದ್ದು ಇಲ್ಲಿ ಮಾತ್ರ ಎಂದು ಹೇಳಬಹುದು...!! ನಮ್ಮ ಅಳಿಯನ ಪರಿಚಿತರು ನಮಗೆ ಇಲ್ಲಿ ಸುತ್ತಾಡಲು ಎರಡು ಟಾಪ್ ಲೆಸ್ ಕಾರುಗಳನ್ನು ವ್ಯವಸ್ಥೆ ಮಾಡಿಕೊಟ್ಟರು.ಹಾಗಾಗಿ ನಮಗಿಲ್ಲಿ ತಿರುಗಾಡಲು ಮತ್ತು ಸಂಜೆಯತನಕ ಎಲ್ಲವನ್ನೂ ನೋಡಲು ತುಂಬಾ ಅನುಕೂಲವಾಯಿತು. 
 

ಇಲ್ಲಿನ ನ್ಯಾಷನಲ್ ಪಾರ್ಕ್ ಮತ್ತು ಪಕ್ಷಿಧಾಮಗಳಲ್ಲಿ ದಿನದ ಅನೇಕ ಭಾಗವನ್ನು ನಿದ್ದೆಯಲ್ಲಿಯೇ ಕಳೆಯುವ, ಮುದ್ದಾದ ಮಗುವಿನಂತಿರುವ ಅಪರೂಪದ ಪ್ರಾಣಿ ’ಕೊಯಲಾ’ಗಳಲ್ಲದೆ ಅನೇಕ ಬಗೆಯ ಸರಿಸೃಪಗಳನ್ನು,ಪಕ್ಷಿಗಳನ್ನೂ ನೋಡಿ ಮತ್ತು ನಮ್ಮ ಕೈಗಳಲ್ಲಿಡಿದು ಆನಂದಿಸಬಹುದು. ಅವುಗಳೊಂದಿಗೆ ಫೋಟೋಗಳನ್ನೂ ತೆಗೆದುಕೊಳ್ಳಬಹುದು. 

ಈ ದ್ವೀಪದಲ್ಲಿ ಪ್ರವಾಸಿಗರಿಗಾಗಿ ಅನೇಕ ಬಗೆಯ ಆಕ್ವಾಟಿಕ್ ಸ್ಪೋರ್ಟ್ಸ್ ಗಳನ್ನು ಆಡಲು ವ್ಯವಸ್ಥೆ ಮಾಡಿದ್ದಾರೆ. ಜೆಟ್ ಸ್ಕೈ , ಪೆಡಲ್ ಬೋಟುಗಳು ಬಾಡಿಗೆಗೆ ಸಿಗುತ್ತವೆ.
ನಾವು ಪೆಡಲ್ ಬೋಟಿನಲ್ಲಿ ಸಾಗರಯಾನವನ್ನು ಮಾಡಿ ಖುಷಿಪಟ್ಟೆವು. ಸಮುದ್ರದ ದಂಡೆಯಲ್ಲಿ ಮರಳಿನ ಮೇಲೆ ಬಿಸಿಲಿಗೆ ತಮ್ಮ ಮೈ ಚಿಲ್ಲಿ ಮಲಗಿ ಸನ್ ಬಾತ್ ಮಾಡುತ್ತಿರುವ ಆಸ್ಟ್ರೇಲಿಯನ್ನರನ್ನೂ ಕಾಣಬಹುದು.. .!!! ಒಟ್ಟಿನಲ್ಲಿ ಈ ದ್ವೀಪದಲ್ಲಿ ಕಳೆದ ಪ್ರತಿಕ್ಷಣವೂ ನಮಗೆ ನೂತನ ಅನುಭವಗಳನ್ನು ನೀಡಿ ನಮಗೆ ಹರ್ಷ ಕೊಟ್ಟಿತು. ಹೆಸರಿಗೆ ತಕ್ಕಂತೆ ಈ ದ್ವೀಪಕ್ಕೆ ಪ್ರವಾಸಿಗರನ್ನು ಆಯಸ್ಕಾಂತದಂತೆ ಸೆಳೆಯುವ ಶಕ್ತಿ ಇರುವುದಂತೂ ಸತ್ಯ...!!    

ಗರಿಕೆ


ಹಸಿರು ಹಸಿರಾಗಿ ಬೆಳೆವ
ಪುಟ್ಟ ಹುಲ್ಲೇ....!
ಎಂಥ ಸಾರ್ಥಕ
ಬದುಕು ನಿನದಲ್ಲೆ...!!

ಗಾಳಿಮಳೆಗೆ ಧೃತಿಗೆಡದೆ
ನೀ ತಳೆವೆ ಸ್ಥಿರತೆ.
ಧರೆಯನಪ್ಪಿ ಬೆಳೆದು
ತೋರುತಿಹೆ ಧೃಡತೆ..!!

ಪೋಷಣೆಯ ಬಯಸದೆ
ಬೆಳೆವೆ ನೀ ಎಲ್ಲೆಲ್ಲು...
ಹೆಮ್ಮರಗಳೂ ನಮಿಸಿವೆ
ನಿನ್ನ ಅಚಲತೆಗೆ ಮರೆತು ಸೊಲ್ಲು...!!

ಪಶುಗಳ ಹಸಿವ ನೀಗಿ
ನೀನಾದೆ ಜೀವಾಧಾರ.
ಕೋಮಲ ತೆನೆಯಲ್ಲಿ
ತುಂಬಿಕೊಂಡಿರುವೆ ಮದ್ದಿನ ಸಾರ...!!

ಪ್ರಥಮ ಪೂಜ್ಯನಿಗೆ
ನೀನಾದೆ ಪ್ರಿಯ ಗರಿಕೆ..!
ಗಜಮುಖನು ಸೋತನೆ
ನಿನ್ನ ನಿರಹಂಕಾರಕೆ..!!!

ಮಂಗಳ ಕಾರ್ಯಕೆ
ರಕ್ಷಾಸೂತ್ರ ನೀ ದೂರ್ವೆ.
ಪರೋಪಕಾರವೆ ಜೀವನಸೂತ್ರ
ಎಂದು ನೀ ಸಾರುವೆ...!!!
        


ವಿದೇಶ ವಿಹಾರ - 18 - ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳ ಕೆಲವು ದೃಶ್ಯಾವಳಿಗಳು


ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು


ಜಗತ್ತಿನಲ್ಲಿ ಅತ್ಯುತ್ತಮವಾದ ಮತ್ತು ಬೃಹತ್ತಾದ ಸಿಂಗಪೂರ್ ನ "ಚಾಂಗೀ ಅಂತಾರಾಷ್ಟ್ರೀಯ ವಿಮಾನನಿಲ್ದಾಣ"ದ ಒಳಗಿನ ಕೆಲವು ದೃಶ್ಯಾವಳಿಗಳು.


ವಿಮಾನದಿಂದ ಇಳಿಯುತ್ತಿದ್ದಂತೆಯೇ ನೆಲವೇ ಕಾಣಿಸದಂತೆ ಹಾಸಿದ ಕಾರ್ಪೆಟ್ ನಮ್ಮನ್ನು ಸ್ವಾಗತಿಸುತ್ತದೆ. ಝಗಮಗಿಸುವ ಲೈಟುಗಳು ನಮ್ಮ ಕಣ್ಣನ್ನು ಕೋರೈಸುತ್ತವೆ.ಸಿಂಗಪೂರ್ ವಿಮಾನ ನಿಲ್ದಾಣ ಒಂದು ರೀತಿ ಮಿನಿ ಪ್ರಪಂಚವಿದ್ದಂತೆ.ಎಲ್ಲಾ ದೇಶದ ಜನರನ್ನೂ ಇಲ್ಲಿ ನೋಡಬಹುದು.ವಿಶ್ವದ ದೊಡ್ಡ ಏರ್ ಪೋರ್ಟ್ ಗಳಲ್ಲಿ ಒಂದಾದ ಇಲ್ಲಿ ಒಂದು ಟರ್ಮಿನಲ್ ನಿಂದ ಇನ್ನೊಂದು ಟರ್ಮಿನಲ್ ಗೆ ಹೋಗಲು ಸ್ಕೈ ಟ್ರೈನ್ ವ್ಯವಸ್ಥೆ ಇದೆ. ಒಂದೊಂದು ಟರ್ಮಿನಲ್ ಗಳಲ್ಲೂ ಅನೇಕ ಗೇಟ್ ಗಳಿರುವುದರಿಂದ ಕಿಲೋಮೀಟರ್ ಗಟ್ಟಲೆ ನಡೆಯಬೇಕಾಗುತ್ತದೆ.ಪ್ರಯಾಣಿಕರ ಈ ತೋದರೆಯನ್ನು ನಿವಾರಿಸಲು ಎಸ್ಕಲೇಟರ್ (ಚಲಿಸುವ ಪಥ ಅಥವ ಸೋಪಾನ ಪಥ ಎನ್ನಬಹುದು)  ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ನಮ್ಮ ಲಗ್ಗೇಜುಗಳನ್ನು ಹಿಡಿದು ನಮ್ಮ ಗೇಟ್ ಬಳಿಗೆ ಹೋಗಲು ತುಂಬಾ ಸಹಾಯವಾಗುತ್ತದೆ.
ಸಾಮಾನ್ಯವಾಗಿ ಬೇರೆ ಯಾವುದೇ ವಿಮಾನ ನಿಲ್ದಾಣಗಳಲ್ಲಿ ನಾವು ಬಳಸುವ ಅಂತರ್ಜಾಲಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತದೆ.  ಆದರೆ ಇಲ್ಲಿ ಇಂಟರ್ ನೆಟ್ ಬಳಸುವವರಿಗಾಗಿ ಉಚಿತ ಕಂಪ್ಯೂಟರ್ ವ್ಯವಸ್ಥೆ ಇದೆ. ಮಕ್ಕಳಿಗೆ ಸಮಯ ಕಳೆಯಲು ಆಟಗಳಿವೆ ಮತ್ತು ಶಾಪಿಂಗ್ ಮಾಡಲೂಬಹುದು. ಇಲ್ಲಿನ ಟಾಯ್ಲೆಟ್ ಮತ್ತು ಬಾತ್ ರೂಂ ಗಳ ಶುಚಿತ್ವದ ಬಗ್ಗೆಯಂತೂ ಎಷ್ಟು ವರ್ಣಿಸಿದರೂ ಕಡಿಮೆಯೇ. ಎತ್ತ ನೋಡಿದರೂ ಅಚ್ಚುಕಟ್ಟು ಎದ್ದು ಕಾಣುತ್ತದೆ. ಇದೇ ಸಿಂಗಪೂರ್ ನ ವಿಶೇಷತೆ.

ಇದು ಆಸ್ಟೇಲಿಯಾದ ಬ್ರಿಸ್ಬೇನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು
  

ಇದು ಆಸ್ಟೇಲಿಯಾದ ಮೆಲ್ಬೋರ್ನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು

ಪ್ರಖ್ಯಾತ ಜ್ಯೋತಿಷಿಗಳಾದ ಶ್ರೀ ಸೋಮಯಾಜಿಯವರು ನಾವು ಹೊರಟ ವಿಮಾನದಲ್ಲಿ ಪ್ರಯಾಣಿಸಿದ್ದೊಂದು ವಿಶೇಷ.ಅವರೊಡನೆ ಮಾತನಾಡುವ ಅವಕಾಶ ನಮಗೆ ಇಲ್ಲಿ ಸಿಕ್ಕಿತು.

ಇದು ಆಸ್ಟೇಲಿಯಾದ ಟೌನ್ಸ್ವಿಲ್ ನ ಡೊಮೆಸ್ಟಿಕ್ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು.



ಇದು ನಮ್ಮ ಮಗಳಿರುವ ಸ್ಥಳವಾದ್ದರಿಂದ ಇಲ್ಲಿ ಕಾಲಿಡುತ್ತಿರುವಂತೆಯೇ ಒಂದು ರೀತಿಯ ಆತ್ಮೀಯ ಭಾವ ಮೂಡಿದ್ದು ಮಾತ್ರ ನಿಜ. ಹಾಗೆಯೇ ವಾಪಾಸಾಗುವಾಗ ಅಳಿಯ-ಮಗಳಿಗೆ ವಿದಾಯ ಹೇಳುವ ಸಮಯದಲ್ಲಿ ಕಣ್ತುಂಬಿ ಬಂದು ಎದೆ ಭಾರವಾಗಿತ್ತು.




ವಿದೇಶ ವಿಹಾರ 17- ಅಂತರರಾಷ್ಟ್ರೀಯ ವಿಮಾನದೊಳಗೆ ಹೇಗಿರಬಹುದು...?!!ಏನಿರಬಹುದು..?!!


ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನಮ್ಮ ಆಪ್ತರಿಂದ ಬೀಳ್ಕೊಂಡು,ಒಳಗೆ ಪ್ರವೇಶಿಸುತ್ತಿದ್ದಂತೆಯೇ ಚೆಕ್-ಇನ್ ಪ್ರಕ್ರಿಯೆ ಪ್ರಾರಂಭವಾಗುತ್ತದೆ.ಇದು ನಮ್ಮೂರಿನಲ್ಲಿ ಬಸ್ಸು,ರೈಲುಗಳನ್ನು ಹತ್ತಿದಂತೆ ಸುಲಭವಲ್ಲ...!! ಸಾಮಾನ್ಯವಾಗಿ ಒಂದೆರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ನಮಗೆ ನಿಗದಿತವಾದ ಕೌಂಟರಿನಲ್ಲಿ ನಮ್ಮ ಪಾಸ್ ಪೋರ್ಟ್, ಏರ್ ಟಿಕೆಟ್ ಮತ್ತು ನಮ್ಮ ಲಗ್ಗೇಜುಗಳನ್ನು ತಪಾಸಣೆ ಮಾಡುತ್ತಾರೆ.ನಮ್ಮ ಕ್ಯಾರಿ ಬ್ಯಾಗ್, ವ್ಯಾನಿಟಿ ಬ್ಯಾಗ್ ಗಳನ್ನು ಮತ್ತು ಪ್ರತಿ  ಪ್ರಯಾಣಿಕರನ್ನೂ ಭದ್ರತಾ ತಪಾಸಣೆಗೆ ಒಳಪಡಿಸಲಾಗುತ್ತದೆ.ಇದೆಲ್ಲವೂ ಓಕೆ ಆದಮೇಲೆ ಇಮ್ಮಿಗ್ರೇಶನ್ ಸರ್ಟಿಫಿಕೇಟ್ ಕೊಡಲಾಗುತ್ತದೆ.ಇದಿಷ್ಟೂ ಮುಗಿದ ನಂತರವಷ್ಟೇ ನಮಗೆ ಬೋರ್ಡಿಂಗ್ ಪಾಸ್ ನೀಡುತ್ತಾರೆ. ಇಲ್ಲಿಗೆ ನಮ್ಮ ಚೆಕ್ ಇನ್ ಪ್ರಕ್ರಿಯೆ ಅಂತ್ಯಗೊಂಡು ಸಮಾಧಾನವಾಗುತ್ತದೆ.

ಈಗ ನಮ್ಮ ವಿಮಾನ ಹತ್ತುವ ಗೇಟ್ ನಲ್ಲಿ ವ್ಯವಸ್ಥೆ ಮಾಡಿರುವ ಆಸನಗಳಲ್ಲಿ ಕಾದು ಕುಳಿತು ನಮ್ಮ ಸರದಿ ಬಂದಾಗ ಏರೋಬ್ರಿಜ್ ಮೂಲಕ ಹಾದು ವಿಮಾನದೊಳಗೆ ಪ್ರವೇಶಿಸುತ್ತೇವೆ.ನಾವು ಪ್ರಯಾಣಿಸಿದ್ದು ಸಿಂಗಪೂರ್ ಏರ್ ಲೈನ್ಸಿನಲ್ಲಿ. ನಾವು ಪ್ರಯಾಣಿಸಿದ ವಿಮಾನದಲ್ಲಿ ಸುಮಾರು ೩೫೦ ರಿಂದ ೪೦೦ ಜನ ವಿಮಾನಯಾನ ಮಾಡಬಹುದಾದಷ್ಟು ದೊಡ್ಡದು. ವಿಮಾನದ ದ್ವಾರದಲ್ಲಿಯೇ ಸಿಂಗಾಪೂರ್ ಸುಂದರಿಯರಾದ ಗಗನಸಖಿಯರು ನಗುಮೊಗದಿಂದ ನಮ್ಮನ್ನು  ಸ್ವಾಗತಿಸಿ, ನಮ್ಮ ಆಸನಗಳನ್ನು ಹುಡುಕಲು ಮತ್ತು ನಮ್ಮ ಕ್ಯಾರಿ ಬ್ಯಾಗುಗಳನ್ನು ಮೇಲಿಡಲು ಸಹಾಯ ಮಾಡುತ್ತಾರೆ.

ವಿಮಾನದೊಳಗಿನ ಸ್ವಚ್ಚವಾದ ವಾತಾವರಣ, ಸುಸಜ್ಜಿತವಾದ ಪುಶ್ ಬ್ಯಾಕ್ ಆಸನಗಳ ವ್ಯವಸ್ಥೆ ನಮ್ಮ ಮನಸ್ಸನ್ನು ಮುದಗೊಳಿಸುತ್ತದೆ.ಸರಿ ಸುಮಾರು ಅರ್ಧ ದಿನವೆಲ್ಲಾ ವಿಮಾನದಲ್ಲಿಯೇ ಕಾಲ ಕಳೆಯಬೇಕಾಗುವುದರಿಂದ ತನ್ನ ಪ್ರಯಾಣಿಕರನ್ನು ಸಂತೋಷವಾಗಿಡಲು ಬೇಕಾದ ಇಲ್ಲಾ ಐಶಾರಾಮಿ ವ್ಯವಸ್ಥೆಯೂ ಇಲ್ಲಿದೆ.ವಿಮಾನ ಮೇಲೇರುವ ಮುನ್ನ ಪ್ರಯಾಣಿಕರಿಗೆ ಕೆಲವು ಸೂಚನೆಗಳನ್ನು (ಬೆಲ್ಟ್ ಉಪಯೋಗಿಸುವುದು ಮತ್ತು ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಅನುಸರಿಸಬೇಕಾದ ಕೆಲವು ಅಗತ್ಯ ನಿಯಮಗಳ ಬಗ್ಗೆ)  ವೀಡಿಯೋ ಮೂಲಕ ಮತ್ತು ಸ್ವತಃ ಗಗನಸಖಿ ತಿಳಿಸಿಕೊಡುತ್ತಾರೆ.ಒಮ್ಮೆ ವಿಮಾನ ಮೇಲೇರಿತೆಂದರೆ ಗಗನಸಖಿಯರ ಚಟುವಟಿಕೆ ಶುರು. ನಮ್ಮ ಮುಖ,ಕೈಗಳನ್ನು ಒರೆಸಲು ಹಬೆಯಾಡುತ್ತಿರುವ ಶುಭ್ರ ಬಿಳಿಯ ಚಿಕ್ಕಚಿಕ್ಕ ಟವೆಲ್ಲುಗಳನ್ನು ಪ್ರತಿಯೊಬ್ಬರಿಗೂ ಕೊಡಲಾಗುತ್ತದೆ. ಏ ಸಿ ವ್ಯವಸ್ಥೆ ಇರುವುದರಿಂದ ಹೊದೆಯಲು ರಗ್ಗು,ಕಾಲಿಗೆ ಹಾಕಿಕೊಳ್ಳಲು ಸಾಕ್ಸ್,ನೀರಿನ ಬಾಟಲ್, ಟೀವಿ ಕೇಳಲು ಇಯರ್ ಫೋನ್ ಗಳನ್ನು ಕೊಡುತ್ತಾರೆ.ತಿಂಡಿ ಸಮಯಕ್ಕೆ ತಿಂಡಿ ,ಊಟದ ವೇಳೆಗೆ ಊಟದ ವ್ಯವಸ್ಥೆಯಿರುತ್ತದೆ. ಇವುಗಳ ನಡುವೆ ಬಾಯಾಡಿಸಲು ಕಾರದ ಗೋಡಂಬಿ,ಕಡ್ಲೆಬೀಜ,ಚಾಕೋಲೇಟುಗಳ ಜೊತೆಗೆ ಜ್ಯೂಸ್,ಕಾಫಿ,ಟೀ ಮುಂತಾದುವುಗಳನ್ನು ಗಗನಸಖಿಯರು ಬಿಡುವಿಲ್ಲದಂತೆ ಒದಗಿಸುತ್ತಿರುತ್ತಾರೆ. ಅಗತ್ಯವಿರುವವರಿಗೆ ಡ್ರಿಂಕ್ಸ್ ವ್ಯವಸ್ಥೆ ಸಹ ಇರುತ್ತದೆ. ಇಂಟರ್ ನ್ಯಾಷನಲ್ ಫ಼್ಲೈಟ್ ಗಳಲ್ಲಿ ಇವುಗಳಿಗೆಲ್ಲಾ ಪ್ರತ್ಯೇಕ ಶುಲ್ಕವಿರುವುದಿಲ್ಲ...!!.ಹಾಗಂತ ಫ಼್ರೀ ಅಂತ ತಿಳಿಬೇಡಿ..!! ಟಿಕೇಟಿನಲ್ಲಿ ಎಲ್ಲಾ ಶುಲ್ಕಗಳನ್ನೂ ಸೇರಿಸಿರುತ್ತಾರೆ ಅಷ್ಟೇ...!!ಆದರೆ ಡೊಮ್ಯಾಸ್ಟಿಕ್  ಫ಼್ಲೈಟ್ ಗಳಲ್ಲಿ ಒಂದು ಚಿಕ್ಕ ನೀರಿನ ಬಾಟಲಿಗೂ ದುಬಾರಿ ಬೆಲೆ ತೆರಬೇಕಾಗುತ್ತದೆ.ಇದಿಷ್ಟೇ ಅಲ್ಲದೇ ,ನಿಗದಿತ ಹಣ ಸಂದಾಯ ಮಾಡಿದರೆ ಚಿಕ್ಕ ಮಕ್ಕಳಿಗೆ ಮಲಗಿಸಲು ತೊಟ್ಟಿಲು, ವಯಸ್ಸಾದವರಿಗಾಗಿ ಮತ್ತು ಅನಾರೋಗ್ಯ ಪೀಡಿತರಿಗೆ ಮಲಗಲು ವ್ಯವಸ್ಥೆಯೂ ಇರುತ್ತದೆ. 

ವಿಮಾನದೊಳಗೆ ನಾ ಕಂಡ ಕೆಲವು ವಿಶೇಷತೆಗಳ ಕಿರು ಪರಿಚಯ:-

ಸಿಂಗಪೂರ್ ಏರ್ಲೈನ್ಸ್ ನ ವಿಮಾನದೊಳಗಿನ ದೃಶ್ಯವಿದು. ಆರಾಮದಾಯಕವಾದ ಆಸನಗಳು. ಸೀಟಿನ ಮೇಲ್ಗಡೆ ಕಾಣುವುದು ನಮ್ಮ ಕ್ಯಾಬಿನು ಬ್ಯಾಗುಗಳನ್ನು ಇಡಲು ವ್ಯವಸ್ಥೆ.ನಮ್ಮ ಮುಂದಿನ ಸೀಟಿನ ಹಿಂಭಾಗದಲ್ಲಿ ಟಿವಿಯ ವ್ಯವಸ್ಥೆ ಇದೆ.ಇದರಲ್ಲಿ ಬರೋಬ್ಬರಿ ನೂರಕ್ಕಿಂತಾ ಹೆಚ್ಚು ಚಾನಲ್ಲುಗಳು ಬರುತ್ತದೆ!! ನಗುವನ್ನು ಸೂಸುತ್ತಾ ಮಾರ್ಗದರ್ಶನ ನೀಡುತ್ತಿರುವ ಸಿಂಗಪೂರ್ ಗಗನಸಖಿಯರನ್ನೂ ಇಲ್ಲಿ ಕಾಣಬಹುದು.

ವಿಮಾನದಲ್ಲಿ ನಮಗಾಗಿ ನೀಡಿದ ಊಟದ ಚಿತ್ರ.ಹಾಲು,ಮೊಸರು,ಬೆಣ್ಣೆ,ಹಪ್ಪಳ,ರೈಸ್ ,ಸಾಂಬಾರ್,ಸಕ್ಕರೆ,ತರಕಾರಿ ಸಲಾಡ್,ಬನ್ ಪ್ರತಿಯೊಂದೂ ಪ್ಯಾಕಿಂಗ್ ಆಗಿರುವ ಪರಿ ನೋಡಿ.



ಪ್ರತಿಯೊಬ್ಬರಿಗೂ ಟಿವಿ ಮತ್ತು ಇಯರ್ ಫೋನ್ ಇರುತ್ತದೆ.ನಮ್ಮ ಆಸಕ್ತಿಗೆ ಅನುಗುಣವಾಗಿ ನಮಗೆ ಬೇಕಾದ ಚಾನಲ್ಲನ್ನು ನೋಡುತ್ತಾ ಸಮಯ ಕಳೆಯಬಹುದು.ಸುಮಾರು ನೂರು ಚಾನಲ್ಲುಗಳಿರುತ್ತದೆ.ಇದರಲ್ಲಿ ಹಿಂದಿ ಸಿನಿಮಾ ಚಾನಲ್ಲುಗಳೂ ಇದ್ದವು.ಬೆಂಗಳೂರಿನಿಂದ ಹೊರಡುವ ಮತ್ತು ಇಲ್ಲಿಗೆ ಬರುವ ವಿಮಾನಗಳಲ್ಲಿ ಕನ್ನಡ ಚಾನಲ್ಲುಗಳನ್ನು ಸೇರಿಸಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆಂದು ಕೇಳಿದೆ.ಹಾಗಾದಲ್ಲಿ ಮುಂದೆ ಎಲ್ಲಾ ಅಂತರಾಷ್ಟ್ರೀಯ ವಿಮಾನಗಳಲ್ಲೂ ಕನ್ನಡ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಸದ್ಯದಲ್ಲೇ ಒದಗಿ ಬರಬಹುದು.









ವಿಮಾನದೊಳಗೆ ಟಾಯ್ಲೆಟ್ ಮತ್ತು ವಾಶ್ ಬೇಸಿನ್ ವ್ಯವಸ್ಥೆಯ ಒಂದು ನೋಟ.



ಇಲ್ಲಿನ ಟಿವಿ ಚಾನಲ್ಲಿನಲ್ಲಿ ನಮ್ಮ ಪ್ರಯಾಣದ ಕ್ಷಣ ಕ್ಷಣದ ಮಾಹಿತಿ ನೀಡುವ "ಫ್ಲೈಟ್ ಪಾತ್" ಚಾನಲ್ ನನಗೆ ತುಂಬಾ ಮೆಚ್ಚುಗೆಯಾಯಿತು.



ಈಗ ನಾವೆಲ್ಲಿದ್ದೇವೆ,ಭೂಮಿಯಿಂದ ಎಷ್ಟು ಎತ್ತರದಲ್ಲಿ ಹಾರುತ್ತಿದ್ದೇವೆ,ನಾವು ತಲುಪಬೇಕಾದ ಸ್ಥಳಕ್ಕೆ ಇರುವ ದೂರವೇನು,ಅಲ್ಲಿನ ಸಮಯ ಮತ್ತು ನಾವಿರುವ ಪ್ರದೇಶದಲ್ಲಿ ಆಗಿರುವ ಸಮಯ ಎಲ್ಲ ವಿವರವನ್ನೂ ನಾವಿಲ್ಲಿ ತಿಳಿದುಕೊಳ್ಳಬಹುದು.ನನಗೆ ಇದು ತುಂಬಾ ಹಿಡಿಸಿತು.

ಬೆಳಗಿನಜಾವ ಐದೂವರೆ ಸಮಯದಲ್ಲಿ ನಾವು ಸಿಂಗಪೂರ್ ನಲ್ಲಿ ಲ್ಯಾಂಡ್ ಆಗುವ ಮೊದಲು, ವಿಮಾನದ ಮೇಲಿನಿಂದ ಸಿಂಗಪೂರ್ ಎಂಬ ಸುಂದರ ದೇಶ ನನ್ನ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.
 ದೊಡ್ಡದಾದ,ಅತ್ಯಾಧುನಿಕವಾದ,ಸುಸಜ್ಜಿತವಾದ,ವ್ಯವಸ್ಥಿತವಾದ ಮತ್ತು ನೆಲವೇ ಕಾಣದಂತೆ ಕಾರ್ಪೆಟು ಹಾಸಿ ವಿಶ್ವದ ಎಲ್ಲಾ ಭಾಗದ ಜನರನ್ನೂ ಸ್ವಾಗತಿಸುವ ಸಿಂಗಪೂರ್ ನ "ಚಾಂಗಿ ಏರ್ಪೋರ್ಟ್" ನ ವೈಭವವನ್ನು ಸಾರುವ ಕೆಲವೇ ಕೆಲವು ದೃಶ್ಯಗಳು.

ಗಗನಸಖಿ ಎಂದರೆ ಚೆಂದವಾಗಿ ಅಲಂಕರಿಸಿಕೊಂಡು ವಿಮಾನದಲ್ಲಿ ಅಲ್ಲಿಂದಿಲ್ಲಿಗೆ ಓಡಾಡುವ ಸುಂದರ ಬೊಂಬೆಗಳು ಎಂದು ತಿಳಿದಿದ್ದೆ. ಆದರೆ ಬೆಂಗಳೂರಿನಿಂದ ಹೊರಟು ಸಿಂಗಪೂರ್ ತಲುಪುವ ವೇಳೆಗೆ ನನ್ನ ಈ ಅಭಿಪ್ರಾಯ ಬದಲಾಗಿತ್ತು....!! ಅವರು ತಮ್ಮ ಡ್ಯೂಟಿ ವೇಳೆಯಲ್ಲಿ ಪ್ರಯಾಣಿಕರ ಸೇವೆಯೇ ತಮ್ಮ ಕರ್ತವ್ಯ ಎಂದು ತಿಳಿದಿರಬೇಕು.ಎಲ್ಲಾ ವಿಮಾನ ಸಂಸ್ಥೆಗಳೂ ತನ್ನ ಪ್ರಯಾಣಿಕರನ್ನು ಸಂತಸದಿಂದಿಡಲು ಮತ್ತು ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವತ್ತ ಹೆಚ್ಚಿನ ಮಹತ್ವ ನೀಡುತ್ತವೆ. ಗಗನಸಖಿ ಎಂದರೆ ಸಂಸ್ಥೆ ಮತ್ತು ಪ್ರಯಾಣಿಕರ ನಡುವಿನ ಕೊಂಡಿಯಂತೆ. ಸಂಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಈ ಗಗನಸಖಿಯರು ಮಾಡಬೇಕು

ಹಾಗಾಗಿ ತನ್ನ ಕೆಲಸದ ವೇಳೆಯಲ್ಲಿ ನಗುಮೊಗದಿಂದ ಕೂಡಿದ ಸೌಜನ್ಯಯುತ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.ಬೇಸರಿಸದೇ, ಸಿಡಿಮಿಡಿಗೊಳ್ಳದೇ ಪ್ರತಿಯೊಬ್ಬ ಪ್ರಯಾಣಿಕರ ಕರೆಗೆ ತತ್ ಕ್ಷಣ ಓಗೊಡಬೇಕಾಗುತ್ತದೆ. ಚೈತನ್ಯದ ಚಿಲುಮೆಯಂತೆ  ತಮ್ಮ ಕೆಲಸದಲ್ಲಿ ಚುರುಕಾಗಿರಬೇಕಾಗುತ್ತದೆ.ತನ್ನ ಪ್ರಯಾಣಿಕರಿಗೆ ಸಹಾಯ ಹಸ್ತ ನೀಡಬೇಕಾಗುತ್ತದೆ. ಗಗನಸಖಿಯರೇ, ನಿಮಗೊಂದು ನನ್ನ ಸೆಲ್ಯೂಟ್...!
ವಿಮಾನ ಭೂಸ್ಪರ್ಶವಾದ ನಂತರ ಗಗನಸಖಿಯರಿಂದ ಶುಭ ವಿದಾಯವನ್ನು ಸ್ವೀಕರಿಸಿ, ವಿಮಾನದಿಂದಿಳಿದು ನಮ್ಮ ಲಗ್ಗೇಜುಗಳನ್ನು ತೆಗೆದುಕೊಳ್ಳುವಲ್ಲಿಗೆ ಹೋಗಿ, ನಮ್ಮ ಸೂಟ್ಕೇಸುಗಳನ್ನು ತಳ್ಳುಗಾಡಿಯಲ್ಲಿರಿಸಿಕೊಂಡರೆ ನಮ್ಮ ಅರ್ಧ ಕೆಲಸವಾದಂತೆ. ಮುಂದೆ ಆ ದೇಶದ ಕಸ್ಟಮ್ಸ್ ನವರಿಂದ ಲಗ್ಗೇಜುಗಳ ಪರಿಶೀಲನೆ ನಡೆಯುತ್ತದೆ. ನಾವು ತಂದಿರುವ ಎಲ್ಲಾ ವಸ್ತು ಮತ್ತು ತಿಂಡಿಗಳನ್ನೂ ಚೆಕ್ ಮಾಡಿ ನೋಡುತ್ತಾರೆ. ಕೆಲವೊಮ್ಮೆ ಉಪ್ಪಿನಕಾಯಿ,ಮಸಾಲೆ ಪದಾರ್ಥಗಳನ್ನು ಡಸ್ಟ್ ಬಿನ್ನಿಗೆ ಎಸೆಯುವುದೂ ಇರುತ್ತದೆ.ಇಲ್ಲಿ ಲಗ್ಗೇಜ್ ತಪಾಸಣೆ ಮುಗಿಸಿದರೆ ನಾವು ವಿದೇಶದಲ್ಲಿರುವ ನಮ್ಮವರಿಗಾಗಿ ಅತಿ ಮುತುವರ್ಜಿಯಿಂದ ತಂದ ವಸ್ತುಗಳೆಲ್ಲಾ ಅವರಿಗೆ ತಲುಪಿದಂತೆಯೇ..!! ಇವೆಲ್ಲವನ್ನು ಮುಗಿಸಿದ ನಂತರವಷ್ಟೇ ನಾವು ವಿಮಾನ ನಿಲ್ದಾಣದಿಂದ ಹೊರಬರಬಹುದು.