ಮನೆಯಂಗಳದ ಮಾತು.....!

 ನನಗೆ ಕುವೆಂಪುರವರ ಹುಟ್ಟೂರು ಕುಪ್ಪಳ್ಳಿಯನ್ನು ನೋಡಿದಾಗೆಲ್ಲಾ ನಾನು ಮಲೆನಾಡಿನಲ್ಲಿ ಹುಟ್ಟಬೇಕಿತ್ತು ಎನ್ನಿಸುತ್ತದೆ. ಬನವಾಸಿ, ಕುಪ್ಪಳ್ಳಿಗಳು ಕನ್ನಡಿಗರ ಪಾಲಿಗೆ ಸ್ವರ್ಗ ಸಮಾನ ಸ್ಥಳಗಳು ಎಂದರೆ ತಪ್ಪಾಗಲಾರದು.ಎಷ್ಟು ವರ್ಣನೆಗೈದರೂ ಮುಗಿಯದ ಸೊಬಗಿನೊಂದಿಗೆ ಕವಿಗಳ ಮನಸೂರೆಗೊಳಿಸಿದ ತಾಣಗಳಿವು.ಇಂತಹ ಸುಂದರ ಪರಿಸರದಲ್ಲಿ ವಿಹರಿಸುವ ಸೌಭಾಗ್ಯ ಎಲ್ಲರ‍ಿಗೂ ಲಭ್ಯವಾಗುವುದಿಲ್ಲ.ಆದರೆ ನಾವು ಸ್ವಲ್ಪ ಮನಸ್ಸು ಮಾಡಿದರೆ ನಾವಿರುವ ಜಾಗದಲ್ಲಿಯೇ ನಿಸರ್ಗದ ಚಿಕ್ಕಪುಟ್ಟ ಅಚ್ಚರಿಗಳನ್ನು ಕಂಡು ಆನಂದಿಸಬಹುದು.ಬಾಲ್ಯದಿಂದಲೂ ನನಗೆ ಕೀ.. ಕೀ.. ಎಂದು ಇಂಚರಗೈಯ್ಯುತ್ತಾ, ಪುರ್ರನೆ ಆಗಸಕ್ಕೆ ಹಾರಿ ಸ್ವೇಚ್ಛೆಯಾಗಿ ವಿಹರಿಸುವ  ಪಕ್ಷಿಗಳೆಂದರೆ ಅಕ್ಕರೆ ಒಂದೆಡೆಯಾದರೆ ಅವುಗಳ ದಿನಚರಿ ಕುರಿತು ಕುತೂಹಲ ಇನ್ನೊಂದೆಡೆ.ಕೆಲವಾರು ನಿಮಿಷಗಳಾದರೂ ಹಕ್ಕಿ ಪಕ್ಷಿಗಳ ಚಿನ್ನಾಟವನ್ನು ನಮ್ಮ ಮನೆಯಂಗಳದಲ್ಲಿಯೇ ಕಂಡು ಆನಂದಿಸುವ ಅವಕಾಶ ದೊರೆತರೆ......!!ವಾಹ್....!! ಇಲ್ಲಿದೆ ನೋಡಿ ನಮ್ಮ ಮನೆಯಂಗಳದ ಮಾತು.....!     

ಹದಿನಾರು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿರುವ ಪ್ರಿಯದರ್ಶಿನಿ ಬಡಾವಣೆಯಲ್ಲಿ ಮನೆ ಕಟ್ಟುವ ನಿರ್ಧಾರಕ್ಕೆ ಬಂದೆವು. ನಮ್ಮದೇ ಆದ ಪುಟ್ಟ ಗೂಡಿಗೆ ವಾಸಕ್ಕೆ ಬಂದೆವು.ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು.ನಮ್ಮ ಬಡಾವಣೆ ಶಿವಮೊಗ್ಗದ ಸಿಟಿಯಿಂದ ಸುಮಾರು ೩-೪ ಕಿ ಮೀ ದೂರವಿದೆ.ಆದರೆ ಈಗ ಊರು ಇದಕ್ಕೂ ಮುಂದೆ ಬೆಳೆದು ನಿಂತಿದೆ-ಆ ಮಾತು ಬೇರೆ.

ಹದಿನಾರು ವರ್ಷಗಳ ಹಿಂದೆ ನಮ್ಮ ಬಡಾವಣೆ ಜನಸಂದಣಿ ಮತ್ತು ವಾಹನ ಭರಾಟೆಯಿಂದ ದೂರವಿದ್ದುದರಿಂದ ಅಲ್ಲಿ ಮೌನ,ಗಂಭೀರತೆ ಮನೆ ಮಾಡಿತ್ತು.ಅಲ್ಲೊಂದು ಇಲ್ಲೊಂದಿದ್ದ ಮನೆಗಳು. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಗಂಡ-ಹೆಂಡತಿ ಕೆಲಸಕ್ಕೆ ಮತ್ತು ಮಕ್ಕಳು ಶಾಲೆಗೆ ಹೋಗುತ್ತಿದ್ದುದರಿಂದ ಬೆಳಗಿನ ವೇಳೆ ಬಡಾವಣೆಯಲ್ಲಿ ಎಲ್ಲವೂ ಖಾಲಿ ಎನಿಸುತ್ತಿತ್ತು.ಬೇಸಿಗೆಯಲ್ಲಿ ರಣ ಬಿಸಿಲಿನ ಬೇಗೆಯಾದರೆ ಮಳೆಗಾಲದಲ್ಲಿ ಸುರಿಯುವ ಮಳೆಯೊಂದಿಗೆ ಬಿಚ್ಚಿ ಬೀಳಿಸುವ ಗುಡುಗು-ಸಿಡಿಲಿನ ಅಬ್ಬರ. ರ‍ಾತ್ರಿಯಲ್ಲಿ ಕಳ್ಳರ ಭಯ. ಮನೆಯಲ್ಲಿದ್ದಾಗ ಏನೋ ಒಂದು ರೀತಿ ಹೆದರಿಕೆಯ ಭಾವ .ಅಲ್ಲೊಂದು-ಇಲ್ಲೊಂದಿದ್ದ ಮನೆಯವರಲ್ಲಿ ಆತ್ಮೀಯತೆ ಬೆಳೆಯಲು ಈ ವಾತಾವರಣವೂ ಪ್ರೇರಣೆಯಾಗಿತ್ತು ಎಂಬುದು ಬೇರೆ ಮಾತು. ಹಾಗಾಗಿ ೧೦-೧೨ ಮನೆಯವರೆಲ್ಲಾ ಸೇರಿ ಒಂದು ಸಂಘವನ್ನು ಮಾಡಿಕೊಂಡೆವು. ಸಂಘದ ಮೂಲಕ ನಮ್ಮ ಬಡಾವಣೆಯ ಅಭಿವೃದ್ಧಿಗೆ ಶ್ರಮಿಸುತ್ತಾ ,ನಮ್ಮ ಮನದ ಸಂತಸಕ್ಕಾಗಿ ಆಗಾಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡೆವು.ಪ್ರತಿ ವರ್ಷವೂ ಜನವರಿ ಒಂದನೇ ತಾರೀಖಿನಂದು ನಮ್ಮ ಬಡಾವಣೆಯವರೆಲ್ಲ ಒಟ್ಟಾಗಿ ಕಲೆತು ನೂತನ ವರ್ಷಾಚರಣೆಯನ್ನು ಆಚರಿಸುವ ಪದ್ಧತಿಯನ್ನು ಜಾರಿಗೆ ತಂದೆವು.ಇವತ್ತಿಗೂ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ.ಈಗ ನಮ್ಮ ಹದಿನಾರನೇ ವಾರ್ಷಿಕೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿರುವಾಗ ಆ ಹಿಂದಿನ ದಿನಗಳು ನೆನಪುಗಳು ನನ್ನನ್ನು ಕಾಡುತ್ತಿದೆ.    

ನಮ್ಮ ಸಂಘ ಮತ್ತೊಂದು ಸ್ತುತ್ಯಾರ್ಹ ಕೆಲಸವನ್ನು ಮಾಡಿತು.ಬಿಸಿಲಿನ ಬೇಗೆಯನ್ನು ಗಮನದಲ್ಲಿಟ್ಟುಕೊಂಡು, ಅರಣ್ಯ ಇಲಾಖೆಯಿಂದ ಸಸಿಗಳನ್ನು ತಂದು ಬಡಾವಣೆಯಲ್ಲಿ ಬೆಳೆಸುವ ವಿಚಾರವನ್ನು ಕಾರ್ಯರೂಪಕ್ಕೆ ತರಲಾಯಿತು.ಅಂದಿನ ಆ ನಿರ್ಧಾರ  ನಮ್ಮ ಬಡಾವಣೆಯನ್ನು ಇಂದು ಹಸಿರಾಗಿಸಿ, ಮಾದರಿ ಬಡಾವಣೆ ಎನ್ನಿಸಿದೆ.ಅಂದು ಬೆರಳೆಣಿಕೆಯ ಜನ ಉತ್ಸಾಹದಿಂದ ನೆಟ್ಟು, ಬೆಳೆಸಿದ ಸಸಿಗಳು ಇಂದು ದೊಡ್ಡ ಮರಗಳಾಗಿ ಬೆಳೆದು ನಿಂತು ನಮಗೆ ತಂಪನ್ನೀಯುತ್ತಿವೆ. ವಿವಿಧ ರೀತಿಯ ಪಕ್ಷಿಸಂಕುಲಕ್ಕೆ ಆಶ್ರಯ ನೀಡಿ, ಅವುಗಳ ಉಳಿವಿಗೆ ಮಾರ್ಗ ತೋರಿವೆ. ಮೌನದ ಬೀಡಾಗಿದ್ದ ನಮ್ಮ ಬಡಾವಣೆಯಲ್ಲೀಗ ಹಕ್ಕಿಗಳ ಕಲರವದಿಂದಾಗಿ ,ಒಂದು ರ‍ೀತಿಯ ಮಂಗಳಕರ ನಿನಾದ ಸದಾ  ಮೊಳಗುತ್ತಿರುವಂತಿದೆ.

ನಮ್ಮ ಮನೆಯ ಮುಂದಿರುವ ಹಸಿರಾದ ಮರ-ಗಿಡಗಳು ನನಗೀಗ  ಆತ್ಮೀಯವಾಗಿವೆ. ಕಾರಣ ಇಲ್ಲಿ ಆಶ್ರಯ ಪಡೆದಿರುವ ನೂರಾರು ಪಕ್ಷಿಗಳು.ಅವುಗಳ ಶಿಸ್ತುಬದ್ಧವಾದ ಜೀವನ ಶೈಲಿ ನನಗೆ ಅಚ್ಚರಿ ಉಂಟುಮಾಡಿದೆ. ಮುಂಜಾನೆಯ ಹಕ್ಕಿಗಳ ಕಲರವ ನಮ್ಮನ್ನು ಬೆಳಗಾಯಿತೆಂದು ಎಚ್ಚರಿಸುತ್ತದೆ. ಬಿಡುವಿನ ದಿನಗಳಲ್ಲಿ ಜೋಡಿ ಹಕ್ಕಿಗಳ ಚಿನ್ನಾಟ,ಗೂಡು ಕಟ್ಟುವಾಗಿನ ಕಾರ್ಯತತ್ಪರತೆ,ಮರಿಗಳಿಗೆ ಗುಟುಕು ನೀಡಿ ಸಾಕುವ ಪರಿಯನ್ನು ನೋಡಿ ಆನಂದಿಸಿದ್ದೇನೆ.ಅವುಗಳ ದಿನಚರಿಯನ್ನು ಕುತೂಹಲದಿಂದ ನೋಡಿ ಬೆರಗಾಗಿದ್ದೇನೆ. ರೆಕ್ಕೆ ಬಂದ ಮರಿ ಹಕ್ಕಿಗೆ ಮಾರ್ಗದರ್ಶನ ಮಾಡುವ ಹಿರಿತನವನ್ನು ಕಂಡು ಮೈಮರೆತಿದ್ದೇನೆ.ಹಾಗೆಯೇ ,ತಮ್ಮ ಮೊಟ್ಟೆಗಳನ್ನು ಬೆಕ್ಕೋ, ಹಾವೋ ಅಪಹರಿದಾಗಿನ ಅವುಗಳ ಆರ್ತನಾದವನ್ನು ಕೇಳಿ ಸಂಕಟವನ್ನೂ ಅನುಭವಿಸಿದ್ದೇನೆ.   ನಾವೀಗ ಬರೀ ಪುಸ್ತಕದಲ್ಲಿ ಮಾತ್ರ ನೋಡಿದ,ಹೆಸರೇ ತಿಳಿಯದ ಕೆಲವು ಪಕ್ಷಿಗಳನ್ನು ಮನೆಯ ಮುಂದಿನ ಮರ-ಗಿಡಗಳಲ್ಲಿ, ನಮ್ಮ ಮನೆಯ ಟೆರೇಸ್ ಮೇಲೆ  ನೋಡಿ ಅನಿರ್ವಚನೀಯವಾದ ಆನಂದವನ್ನು ಅನುಭವಿಸುತ್ತಿದ್ದೇನೆ. ಆಫೀಸಿಗೆ ರಜವಿದ್ದಾಗ, ಒಬ್ಬಳೇ ಮನೆಯಲ್ಲಿದ್ದಾಗ ಮನೆಯ ಕಿಟಕಿಯಿಂದ ತೂರಿ ಬರುವ ಕೋಗಿಲೆಯ ಕುಹೂ.. ಗಾನಕ್ಕೆ ಮೈಮರೆತಿದ್ದೇನೆ.ಅರಗಿಳಿಗಳ ಹಾರಾಟಕ್ಕೆ ಆನಂದಿತಳಾಗಿದ್ದೇನೆ. ಹಕ್ಕಿ-ಪಕ್ಷಿಗಳ ಇಂಚರಕ್ಕೆ ತಲೆದೂಗಿದ್ದೇನೆ. ಸಂಜೆಗತ್ತಲಾಗುವ ಮುನ್ನವೇ ನಮ್ಮ ಮನೆ ಮುಂದಿನ ಮರದ ಆಶ್ರಯಕ್ಕೆ ಎಲ್ಲೆಲ್ಲಿಂದಲೋ ಬಂದು ರಾತ್ರಿ ಕಳೆಯುವ ನೂರಾರು ಪಕ್ಷಿಗಳನ್ನು ನೋಡಿ ಕೌತುಕಪಟ್ಟಿದ್ದೇನೆ.   

 ಮುದ್ದು ಅಳಿಲಿನ ಪುಟು-ಪುಟು ಓಡಾಟಕ್ಕೆ ಮನದಲ್ಲಿ ಮುದಗೊಂಡಿದ್ದೇನೆ. ಬಣ್ಣ-ಬಣ್ಣದ ಚಿಟ್ಟೆಗಳ ವೈಯ್ಯಾರದ ನರ್ತನಕ್ಕೆ ಮೈಮರೆಯುತ್ತೇನೆ. ಕಾಲಚಕ್ರ ತಿರುಗಿದಂತೆ ಅವುಗಳಲ್ಲಿ ಉಂಟಾಗುವ ಬದಲಾವಣೆಗೆ ಅಚ್ಚರಿಪಟ್ಟಿದ್ದೇನೆ.ಸಾವಿರಾರು ಜೇನುಹುಳಗಳು ಒಗ್ಗಟ್ಟಿನಿಂದ ಗೂಡು ಕಟ್ಟಿ, ಮಧುವಾಗಿಸುವಾಗಿನ ಅವುಗಳ ಕಾರ್ಯತತ್ಪರತೆ ಕಂಡು ಬೆರಗಾಗಿದ್ದೇನೆ.ನೆರಳಿನಾಶ್ರಯ ಬಯಸಿ ಬಂದ ಗೋವುಗಳ ಅಂಬಾ ದನಿಗೆ, ಮನಸ್ಸಿಗೆ ಉಲ್ಲಾಸದ ಹೂಮಳೆ ಸುರಿಸಿದ ಮಧುರಾನುಭೂತಿಯನ್ನು ಅನುಭವಿಸಿದ್ದೇನೆ.    

ಕೇವಲ ಕೆಲವಾರು ಮರಗಳಿಂದಲೇ ಇಷ್ಟೆಲ್ಲಾ ಆನಂದವೇ ಎಂದು ಮನ ಅಚ್ಚರಿಪಡುವಂತಾಗಿದೆ.....!! ಅಂದು ನಮ್ಮ ಮನೆಯಂಗಳದಲ್ಲಿ ಮತ್ತು ಬಡಾವಣೆಯಲ್ಲಿ ಮನೆ ಮಾಡಿದ್ದ ಅಸಹನೀಯ ಮೌನ ಮುರಿದು ಮಾತಾಗಿದ್ದಕ್ಕೆ,  ಮಾತು ಮಧುರಗೀತೆಯಾಗಿದ್ದಕ್ಕೆ ಇಂದು ಸಂತಸವಾಗಿದೆ.
ನಮೋ ಆಶ್ರಯದಾತ ....! ನಮೋ ನಮೋ ವೃಕ್ಷರಾಜ.....!!

 ೨೦೧೨ ಕ್ಕೆ ತೆರೆ ಬೀಳುತ್ತಿದೆ. ಮತ್ತೊಂದು ನೂತನ ವರ್ಷ ಆಗಮಿಸುತ್ತಿದೆ. ಸರ್ವರಿಗೂ ಎರಡುಸಾವಿರದ ಹದಿಮೂರನೇ ವರ್ಷಕ್ಕೆ ಶುಭಾಶಯಗಳು.   

ವಿದೇಶ ವಿಹಾರ - 16 - ವಿಮಾನಯಾನದ ಗಮ್ಮತ್ತು


ಇಪ್ಪತ್ತು ವರ್ಷಗಳ ಹಿಂದೆ ವಿಮಾನಯಾನ, ವಿದೇಶಯಾತ್ರೆ ಎಂದರೆ ನಮ್ಮಂತಹ ಮಧ್ಯಮವರ್ಗದವರ ಪಾಲಿಗೆ ಒಂದು ಕನಸೇ ಸರಿ! ಆದರೆ ಕಾಲಚಕ್ರ ಈ ಪರಿ ವೇಗವಾಗಿ ಬದಲಾಗಬಹುದೆಂಬ ಕಲ್ಪನೆ ಸಹ ನಮ್ಮದಾಗಿರಲಿಲ್ಲ. ಐಟಿ ಯುಗ, ಜಾಗತೀಕರಣ ಎಂದೆಲ್ಲಾ ಬಂದದ್ದೇ ಬಂದದ್ದು ನಮ್ಮಂಥವರ ಜೀವನ ಶೈಲಿಯೇ ಬದಲಾಗಿ ಹೋಯಿತು !! ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ,ಅವರ ಪ್ರತಿಭೆಗೆ ತಕ್ಕ ಅವಕಾಶ ಒದಗಿ ಬರುವ ಭಾಗ್ಯ ನಮ್ಮದಾಯಿತು. ದೇಶ-ವಿದೇಶಗಳಲ್ಲಿ ನಮ್ಮ ಮಕ್ಕಳು ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆದು , ನಮಗೆ ಮತ್ತು ನಮ್ಮ ನಾಡಿಗೇ ಕೀರ್ತಿ ತರುತ್ತಿದ್ದಾರೆ ಎನ್ನಲು ನನಗೆ ಹೆಮ್ಮೆಯಾಗುತ್ತದೆ. ಭಾರತೀಯರೆಂದರೆ ವಿದೇಶಗಳಲ್ಲಿ ಗೌರವ ಭಾವನೆ ಮೂಡುತ್ತಿದೆ.ಭಾರತೀಯ ಯುವಕ-ಯುವತಿರ ಪ್ರತಿಭೆಯನ್ನು ಕಂಡು ಅವರು ಬೆರಗಾಗಿದ್ದಾರೆ !! ವಿದೇಶಗಳಲ್ಲಿ ವಾಸಿಸುತ್ತಿರುವ ನಮ್ಮ ಭಾರತೀಯರು ನಮ್ಮ ಸಂಸ್ಕೃತಿಯನ್ನು,ನಮ್ಮ ಭವ್ಯ ಪರಂಪರೆಯನ್ನು ಜಗತ್ತಿನೆಲ್ಲೆಡೆ ಪ್ರಚಾರ ಮಾಡುತ್ತಿರುವ " ಸಾಂಸ್ಕೃತಿಕ ರಾಯಭಾರಿ"ಗಳಾಗಿದ್ದಾರೆ.ಆದರೆ ಈ ಬೆಳವಣಿಗೆಯ ಬಗ್ಗೆ ಗೊಣಗುವವರ ಸಂಖ್ಯೆಗೇನೂ ಕಡಿಮೆ ಇಲ್ಲ.  ಒಳಿತು-ಕೆಡುಕು ಎಂಬುದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ಒಂದರೊಡನೊಂದು ಇದ್ದೇ ಇರುತ್ತವೆ.ಆರಿಸಿಕೊಳ್ಳುವಾಗ ಎಚ್ಚರವಾಗಿರಬೇಕು ಅಷ್ಟೆ...!!.ನಮ್ಮ ಬದುಕಿಗೆ ಬೇಕಾದ ಸನ್ಮಾರ್ಗದ ಹಾದಿಯನ್ನು ಹುಡುಕಿ ನಡೆಯಬೇಕಾದ ಸಂಸ್ಕಾರ ನಮ್ಮಲ್ಲಿರಬೇಕು.ಬೇವನ್ನು ಬಿತ್ತಿ ಮಾವನ್ನು ಬೆಳೆಯಲು ಸಾಧ್ಯವಿಲ್ಲ ಎಂಬ ಅರಿವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು.

ಇರಲಿ, ನಾನೀಗ ನನ್ನ ಮೊದಲ ವಿಮಾನ ವಿಹಾರದ ಅನುಭವವನ್ನಿಲ್ಲಿ ಹೇಳಲು ಹೊರಟಿದ್ದೇನೆ.ವಿಮಾನದಲ್ಲಿ ಸಂಚರಿಸುವುದು ನನ್ನ ಬಹು ದಿನದ ಕನಸಾಗಿತ್ತು. ಸಿಂಗಪೂರ್ ಏರ‍್ಲೈನ್ಸ್ (ಎಸ್ ಕ್ಯು ೫೦೪- ೦೧/೦೮/೨೦೧೧)ನಲ್ಲಿ ಬೆಂಗಳೂರಿನಿಂದ ಸಿಂಗಪೂರ್ ಗೆ ನನ್ನ ಮೊದಲ ವಿಮಾನಯಾನ. ಅಲ್ಲದೆ, ನನ್ನ ಪ್ರಥಮ ವಿದೇಶ ಪ್ರವಾಸವೂ ಆಗಿತ್ತು.ಆ ದಿನಕ್ಕಾಗಿ,ವಿನೂತನ ಅನುಭವಕ್ಕಾಗಿ ನಾನು ತುಂಬಾ ಕಾತರದಿಂದ ಕಾಯುತ್ತಿದ್ದೆ.ಅಂದಿನಿಂದ ಆರಂಭವಾದ ನಮ್ಮ ಗಗನ ಸಂಚಾರ‍ ಮುಂದಿನ ಒಂದು ತಿಂಗಳಲ್ಲಿ ೭-೮ ವಿಮಾನಗಳಲ್ಲಿ ಪ್ರಯಾಣಿಸುವ ಅವಕಾಶವನ್ನು ನಮ್ಮ ಮಕ್ಕಳು ನಮಗೆ ಒದಗಿಸಿ ಕೊಟ್ಟರು. ಹಗಲಿನಲ್ಲಿ ಅಂಬರದಲ್ಲಿ ಹಾರಾಡುವ ಅನುಭವವು ರಾತ್ರಿಯ ಸಮಯದ ಗಗನ ಸಂಚಾರಕ್ಕಿಂತ ಭಿನ್ನವಾಗಿರುತ್ತದೆ.ನಾನಂತೂ ವಿಮಾನ ಏರಿ ಕುಳಿತೆನೆಂದರೆ, ಅದು ಹಗಲಿರಲಿ ರಾತ್ರಿ ಇರಲಿ ಒಂದು ನಿಮಿಷವೂ ವ್ಯರ್ಥ ಮಾಡದಂತೆ ಕಿಟಕಿಯಲ್ಲಿ ಕಣ್ಣಿಟ್ಟು ಹೊರಗಿನ ದೃಶ್ಯವನ್ನು ವೀಕ್ಷಿಸುವುದರಲ್ಲಿ ತಲ್ಲೀನಳಾಗಿ ಬಿಡುತ್ತಿದ್ದೆ....!!! 

"ಹಾರುತ ದೂರಾ.. ದೂರಾ..ಮೇಲೇರುವ ಬಾರಾ..ಬಾರಾ..
ನಾವಾಗುವ ಚಂದಿರ ತಾರಾ... ಸುಂದರ ಗಗನವಿಹಾರ..."

ರಾತ್ರಿ ವೇಳೆಯಲ್ಲಿ ವಿಮಾನಯಾನದ ಅನುಭವ:-

ಆಸ್ಟ್ರ‍ೇಲಿಯಾಗೆ ಹೋಗುವಾಗ ಬೆಂಗಳೂರಿನಿಂದ ಸಿಂಗಪೂರ್ ಮತ್ತು ವಾಪಾಸಾಗುವಾಗ ಸಿಂಗಪೂರ್ ನಿಂದ ಬೆಂಗಳೂರಿಗೆ ರಾತ್ರಿ ಸಂಚರಿಸುವ ಅವಕಾಶ ನಮ್ಮದಾಯಿತು.   

ವಿಮಾನ ಮೇಲೇರುವ ಮೊದಲು ನಿಲ್ದಾಣದಲ್ಲಿ ಚಕ್ರಗಳ ಮೇಲೆ ಚಲಿಸುತ್ತಾ ನಿಗದಿಯಾದ ರನ್ ವೇ ನಲ್ಲಿ ತನ್ನ ವೇಗವನ್ನು ಹೆಚ್ಚಿಸಿಕೊಂಡು ನಿಧಾನವಾಗಿ ನೆಲವನ್ನು ಬಿಟ್ಟು ಮೇಲೇರುತ್ತದೆ.ಈ ಲೋಹದ ಹಕ್ಕಿಯೂ ನಾವು ದಿನನಿತ್ಯ ನೋಡುವ ಪಕ್ಷಿಗಳಂತೆಯೇ ಹಗುರವಾಗಿ, ಸ್ವಲ್ಪ ಓರೆಯಾಗಿ ಮೇಲೇರುವ ಒಂದೆರಡು ಕ್ಷಣ ಹೊಟ್ಟೆಯಲ್ಲಿ ಒಂದು ರೀತಿಯ ಅನುಭವವಾಗಿ ಆನಂದವಾಗುತ್ತದೆ. ನಂತರ ವಿಮಾನ ಹಂತಹಂತವಾಗಿ ಆಕಾಶಕ್ಕೆ ನೆಗೆಯುತ್ತಾ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ ಭೂಮಿಗೆ ಸಮಾನಾಂತರವಾಗಿ ಚಲಿಸಲಾರಂಭಿಸುತ್ತದೆ.ಇನ್ನು ಬರೀ ಗಾಳಿಯಲ್ಲಿ ತೇಲಿದಂತಾಗುತ್ತದೆ...! ಮೊದಲ ಸಲ ಈ ನೆಲದಿಂದ ಮುಗಿಲಿಗೆ ಹಾರಿದ ಸಂತಸ.ಆಕಾಶದಿಂದ ನನ್ನ ಭರತ ಭೂಮಿಯನ್ನು ವೀಕ್ಷಿಸುವ ಸುಯೋಗ.ನಿಧಾನವಾಗಿ ಮೇಲೇರಿದಂತೆ ಬೆಂಗಳೂರಿನ ರಾತ್ರಿಯ ವೈಭವದ ನೋಟ ನಯನ ಮನೋಹರ...!!ಕೆಳಗೆ ದೀಪಗಳ ಸರಮಾಲೆ, ಹರಿದಾಡುವ ವಾಹನಗಳು  ಮಾತ್ರ ನಮಗೆ ಕಾಣುತ್ತದೆ.ರಾತ್ರಿ ವೇಳೆ ಧರೆಯಲ್ಲಿ ನಿಂತು ಆಕಾಶದ ನಕ್ಷತ್ರಗಳನ್ನು ನೋಡಿದಂತಾಗುತ್ತದೆ....!! ವಿಮಾನದ ರೆಕ್ಕೆಗಳನ್ನು ಬಿಟ್ಟರೆ ಬೇರ‍ೆನೂ ಗೋಚರಿಸದು.ರೆಕ್ಕೆಯ ಅಂಚಿನಲ್ಲಿ ಪುಕ್.. ಪುಕ್.. ಎನ್ನುವ ದೀಪವೊಂದೇ ಆ ಕಗ್ಗತ್ತಲಿನಲ್ಲಿ ಕಾಣುತ್ತಿರುತ್ತದೆ.ಎಷ್ಟೊಂದು ಬೃಹದಾಕಾರವಾಗಿದ್ದ ಮತ್ತು ಅಷ್ಟೊಂದು ತೂಕವನ್ನು ಹೊತ್ತ ವಿಮಾನ ಈ ಪರಿ ಹಗುರವಾಗಿದ್ದು ಹೇಗೆ ಎಂದು ವಿಸ್ಮಿತಳಾದೆ....!!! ಹಾಗೆ ಮಾನವನ ಬುದ್ಧಿಮತ್ತೆಗೆ ಮನದಲ್ಲಿಯೇ ಒಮ್ಮೆ ಜಯಕಾರ ಮಾಡಿದೆ.ಒಂದು ಚಿಕ್ಕ ಸದ್ದು ಬಿಟ್ಟರೆ ಬೇರ‍ೇನೂ ಕೇಳಿಸದು, ರಾತ್ರಿಯಾದ್ದರಿಂದ ಬೇರೇನೂ ಕಾಣಿಸದು. ವಿಮಾನ ನಿಂತಲ್ಲೇ ನಿಂತ ಅನುಭವ.....!!!  ಗಾಳಿಯಲ್ಲಿ ಹಾರಿದಂತೆ ಎಲ್ಲವೂ ಸುಖಮಯ. ಹದಿನೈದು ಇಪ್ಪತ್ತು ಸಾವಿರ ಅಡಿಗಳ ಎತ್ತರದಿಂದ ಚನ್ನೈ ನಗರವನ್ನು ಹಾದು ಸಮುದ್ರದ ಮೇಲೆ ಬಂದಾಗ ಸಹ ಬರೀ ಕತ್ತಲು. ವಿಮಾನ ಮುಂದೆ ಸಾಗಿದಂತೆ, ಚಿಕ್ಕ ಚಿಕ್ಕ ದ್ವೀಪಗಳ ಮೇಲೆ ಹಾದು ಹೋಗುವಾಗ ಮಾತ್ರ ದೂರದಲ್ಲಿ ನಕ್ಷತ್ರಗಳು ಮಿನುಗಿದಂತೆ ಅನುಭವ! ಇಂಡೋನೇಷಿಯಾದ ಮೇಲೆ ಹೋಗುವಾಗಲಂತೂ ಚಿಕ್ಕಚಿಕ್ಕ ದ್ವೀಪಗಳು ಮುತ್ತು,ರತ್ನ,ಹವಳಗಳಿಂದ ಕುಸುರಿ ಕೆಲಸ ಮಾಡಿದ ಚಿನ್ನದ ಪದಕಗಳಂತೆ, ವಿವಿಧ ವಿನ್ಯಾಸದ ಕಿವಿಯ ಓಲೆಗಳಂತೆ ಮನಸೆಳೆಯುತ್ತವೆ. ಉದ್ದವಾದ ಭೂಪ್ರದೇಶವನ್ನು ಹೊಂದಿದ ದ್ವೀಪಗಳು ನವರತ್ನಗಳಿಂದ ನಿರ್ಮಿತವಾದ ,ಆ ಪದಕಗಳಿಗೆ ಜೋಡಿಸಿದ ಅಮೂಲ್ಯವಾದ ಹಾರವೇನೋ ಎಂಬಂತೆ ಕಾಣುತ್ತಿತ್ತು....!! ಈ ಅಪರೂಪದ ದೃಶ್ಯವನ್ನು ಇನ್ನೂ ಸ್ವಲ್ಪ ಹೊತ್ತು ನೋಡೋಣ ಅನ್ನಿಸುವಷ್ಟರಲ್ಲಿ ನಮ್ಮ ವಿಮಾನ ವೇಗವಾಗಿ ಮುಂದೋಡಿರುತ್ತದೆ. ಆ ವೈಭವದ ನೋಟ ಮಾತ್ರ ಅಚ್ಚಳಿಯದ ನೆನಪಾಗುತ್ತದೆ.

ಸಿಂಗಪೂರ್ ಹತ್ತಿರವಾದಂತೆ ಝಗಮಗಿಸುವ ದೀಪಗಳ ಸಾಲು ಕಣ್ ಕೋರೈಸುತ್ತದೆ. ಭವ್ಯವಾದ,ಸುಂದರವಾದ ನೋಟ.ನಾವು ಕುಳಿತ ವಿಮಾನ ನಿಧಾನವಾಗಿ, ಹಂತಹಂತವಾಗಿ ಕೆಳಗಿಳಿಯತೊಡಗುತ್ತದೆ.ಆಗಿನ್ನು ಬೆಳಗಿನ ಜಾವ ಐದು ಗಂಟೆ. ಆರುನೂರು ಅಡಿಗಳ ಎತ್ತರದಿಂದ ಆ ದೇಶವನ್ನು ನೋಡುವುದೇ ಒಂದು ಸೊಗಸು.ಸುತ್ತೆಲ್ಲಾ ಬರೀ ಸಮುದ್ರ. ಒಂದಿಷ್ಟೂ ನೆಲವೇ ಕಾಣದಂತೆ ಒತ್ತೊತ್ತಾಗಿ, ಸುಸಜ್ಜಿತವಾಗಿ ಮತ್ತು ಬಹು ಎತ್ತರಕ್ಕೆ ಕಟ್ಟಿದ ಕಟ್ಟಡಗಳ ಕಲಾಕೃತಿಗಳು ಕಾಣಬರುತ್ತವೆ. ಇಂದ್ರನ ಅಮರಾವತಿಯನ್ನು ಪ್ರವೇಶಿಸಿದಂತೆ ಅನುಭವ ನೀಡುವ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ...! ವಿಮಾನ ಲ್ಯಾಂಡ್ ಆಗುವಾಗ ಹಂತಹಂತವಾಗಿ ತನ್ನ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಾ, ರನ್ ವೇಗೆ ಬಂದು ಭೂಸ್ಪರ್ಶ ಮಾಡಿದ ಒಂದು ಕ್ಷಣ ಝಕ್ ...ಎಂದು ಒಂದು ಜರಕು ಹೊಡೆದು ಜೋರಾಗಿ ರನ್ ವೇನಲ್ಲಿ ಓಡುತ್ತದೆ. ಓಟವನ್ನು ನಿಧಾನಗೊಳಿಸುತ್ತಾ ನಮ್ಮ ವಿಮಾನಕ್ಕಾಗಿ ನಿಗದಿಪಡಿಸಲಾದ ಗೇಟಿಗೆ ಬಂದು ನಿಲ್ಲುತ್ತದೆ. ನಾವೀಗ ವಿಮಾನದಿಂದ ಇಳಿಯಲು ಅನುಮತಿ ಸಿಗುತ್ತದೆ. ಗಗನಸಖಿಯರ ನಗುಮೊಗದ ವಿದಾಯವನ್ನು ಸ್ವೀಕರಿಸಿ ಹೊರಬರುತ್ತೇವೆ.  ನನ್ನ ಜೀವಿತದಲ್ಲಿ ಮೊದಲಬಾರಿ ತಾಯ್ನೆಲವನ್ನು ಬಿಟ್ಟು ಬೇರೆ ನೆಲವನ್ನು ಸ್ಪರ್ಶಿಸಿದ ವಿಶಿಷ್ಟ ಗಳಿಗೆಯಿದು.  

ಬೆಳಗಿನ ವೇಳೆಯ ವಿಮಾನಯಾನದ ಅನುಭವ:-
(ಸಿಂಗಪೂರ್-ಆಸ್ಟ್ರೇಲಿಯಾದ ಬ್ರಿಸ್ಬೇನ್ - ಟೌನ್ಸ್ವಿಲ್ ಮತ್ತು ಟೌನ್ಸ್ವಿಲ್ - ಬ್ರಿಸ್ಬೇನ್ -ಮೆಲ್ಬೋರ್ನ್ - ಸಿಂಗಪೂರ್)

ಬೆಳಗಿನ ವೇಳೆಯ ವಿಮಾನಯಾನದ ಅನುಭವವನ್ನಿಲ್ಲಿ ನಾನೀಗ ಹೇಳಹೊರಟಿದ್ದೇನೆ.ಇದೂ ಸಹ ವಿಭಿನ್ನ ಅನುಭವ. ಕೊಂಚ ಮೇಲಕ್ಕೆ ಹೋದಂತೆ ನಮ್ಮ ಪಕ್ಕದಲ್ಲಿಯೇ ಮೋಡಗಳ ಮನೋಹರ ಲೋಕ. ನಾವೀಗ ಮೋಡದ ನಾಡಿನ ಅತಿಥಿಗಳು....!!! ಪೌರಾಣಿಕ ಸಿನಿಮಾದಲ್ಲಿ ನಮ್ಮ ತ್ರಿಲೋಕ ಸಂಚಾರಿ ನಾರದರು ’ಗೊಂಬೆಯಾಟವಯ್ಯಾ... ಈ ಲೋಕವೇ ಆ ದೇವನಾಡುವಾ.. ಗೊಂಬೆಯಾಟವಯ್ಯಾ...’ ಎಂದು ಹಾಡುತ್ತಾ ಮೋಡಗಳ ಮೇಲೆ ಏರಿ ,ಲೋಕದಿಂದ ಲೋಕಕ್ಕೆ ಸುತ್ತುತ್ತಿದ್ದ ದೃಶ್ಯ ನನ್ನ ಕಣ್ಮುಂದೆ ಸುಳಿದು ಹೋಯಿತು. ನಾನೀಗ ವಿದೇಶ ಸಂಚಾರಿ.ಅಂದು ಆ ನಾರದರು ಪಡೆದ ಅದ್ಭುತ ಅನುಭವ ಇಂದು ನನ್ನ ಪಾಲಿಗೆ ಬಂದಿದೆ ಎನ್ನಿಸಿತು. ಓಹ್... ದೂರದಲ್ಲೇಲ್ಲೋ ಚಲಿಸುವ ಮೋಡಗಳೇ,ನಿಮ್ಮ ಸನಿಹಕ್ಕೆ ನಾನೀಗ ಹಾರಿ ಬಂದಿದ್ದೇನೆ.ಹತ್ತಿಯ ದೊಡ್ಡ ದೊಡ್ಡ ಉಂಡೆಗಳಂತಿರುವ ನಿಮ್ಮನ್ನು ಕೈಯಿಂದ ಒಮ್ಮೆ ಮುಟ್ಟಿಬಿಡಲೇ ಎಂದುಕೊಳ್ಳುತ್ತಿರುವಂತೆಯೇ, ನಾವೀಗ ಈ ಮೋಡಗಳನ್ನು ಭೇದಿಸಿಕೊಂಡು ಇನ್ನೂ ಎತ್ತರಕ್ಕೆ ಹಾರಿಬಿಟ್ಟಿದ್ದೇವೆ ... ! ಕೆಳಗೆ ನೋಡಿದರೆ ಮೇಘ ಮಂದಾರ....!! ! ಕವಿ ಕಾಳಿದಾಸ ಈ ಮೋಡಗಳ ಮೂಲಕವೇ ಅಲ್ಲವೆ ತನ್ನ ಪ್ರಿಯತಮೆಗೆ ಸಂದೇಶ ಕಳುಹಿಸಿದ್ದು.ಎಂತಹ  ಮನೋಹರವಾದ ಕವಿಕಲ್ಪನೆ...!!! ನಾನು ವಿಮಾನದಲ್ಲಿ ಕುಳಿತು ಹಾರಾಡುತ್ತಿದ್ದರೂ ಮನಸ್ಸು ಮಾತ್ರ ಕಾಳಿದಾಸನಿಗೆ ನಮೋ.. ಎನ್ನುತ್ತಿತ್ತು. ರವಿ ಕಾಣದ್ದನ್ನು ಕವಿ ಕಂಡ ಎನ್ನುವುದು ನಿಜವೆ. ಕವಿಗಳ ಕಲ್ಪನಾ ಪ್ರಪಂಚಕ್ಕೆ ಸಾಟಿಯಾದುದು ಬೇರಾವುದೂ ಇಲ್ಲ ಎನಿಸಿತು.         

ಸೂರ್ಯೋದಯದ ಮತ್ತು ಮುಸ್ಸಂಜೆಯ ಗಗನ ವಿಹಾರವಂತೂ ಮರೆಯಲಾಗದ ಮನೋಹರ ನೋಟ.ಕೇಸರಿ ಬಣ್ಣಕ್ಕೆ ತಿರುಗಿದ ಆಕಾಶದಲ್ಲಿ ಹೊಂಗಿರಣವನ್ನು ಚೆಲ್ಲಿದ ಸೂರ್ಯ ನಮ್ಮ ವಿಮಾನದ ಪಕ್ಕವೇ ಇದ್ದಾನೆ, ನಾವು ಅವನೊಂದಿಗೇ ಸಾಗುತ್ತಿದ್ದೇವೆನೋ ಎಂಬ ರೋಮಾಂಚನ. ಒಟ್ಟಿನಲ್ಲಿ ಮರೆಯಲಾರದ, ಸುಂದರ ಗಗನ ವಿಹಾರ ನಮ್ಮದಾಯಿತು.    

ನುಡಿಮುತ್ತುಗಳು - 1


 ನನ್ನ ಗೆಳತಿ ಶ್ರೀಮತಿ ಮಹಾಲಕ್ಷ್ಮಿಯವರಿಗೆ ನುಡಿಮುತ್ತುಗಳನ್ನು ಸಂಗ್ರಹಿಸುವ ಮತ್ತು ಅವುಗಳನ್ನು ತನ್ನ ಮಿತ್ರರಿಗೆ  S M S ಕಳುಹಿಸುವ ಒಂದು ಉತ್ತಮ ಹವ್ಯಾಸವಿದೆ.ಅವರಿಂದ ನನಗೆ ಬಂದ ಕೆಲವು ಅರ್ಥವತ್ತಾದ ನುಡಿಮುತ್ತುಗಳನ್ನಿಲ್ಲಿ ಹಂಚಿಕೊಳ್ಳಲು ನನಗೆ ಸಂತಸವಾಗಿದೆ.








ಋತುಗಾನ


ಕಾಶ್ಮೀರದ ಟುಲಿಪ್ ಗಾರ್ಡನ್ನಿನ ವೀಡಿಯೊ ಚಿತ್ರಗಳೊಂದಿಗೆ ನನ್ನ ಲೇಖನದ ಪ್ರಸ್ತುತಿ.
ವೀಡಿಯೊ, ಲೇಖನ ಮತ್ತು ನಿರೂಪಣೆ
ಶ್ರೀಮತಿ ಮಂಜುಳಾದೇವಿ, ವಿನ್ಯಾಸ, ಶಿವಮೊಗ್ಗ.

ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

ಬಣ್ಣದ ಬಳೆ... ರವಿಗೆ ಕಳೆ..!!


    ಬಾಹ್ಯಾಕಾಶ ವಿಸ್ಮಯಗಳ ಆಗರ.ವಾತಾವರಣದ ಪರಿಸ್ಥಿತಿಗೆ ಅನುಗುಣವಾಗಿ ಇಲ್ಲಿ ಜರುಗುವ ಅನೇಕ ಕ್ರಿಯೆಗಳು ಅತ್ಯದ್ಭುತ.ಇಂತಹ ಅಚ್ಚರಿಗಳಲ್ಲಿ, ಅಂಬರದಲ್ಲಿ ಮೂಡುವ ಕಾಮನಬಿಲ್ಲು ಸಹ ಒಂದು ಮನೋಹರ ಚಿತ್ರ.ಇದೇ ಕಾಮನಬಿಲ್ಲು ಸೂರ್ಯನ ಸುತ್ತ ಬಣ್ಣದ ಬಳೆಯಾಕಾರದಲ್ಲಿ ಮೂಡಿದರೆ ಆ ದೃಶ್ಯವೆಷ್ಟು ನಯನ ಮನೋಹರವಲ್ಲವೇ........!!!??? 

ಇತ್ತೀಚೆಗೆ ಭದ್ರಾವತಿಯಲ್ಲಿ ನಮ್ಮವರ ಕ್ಯಾಮರದಲ್ಲಿ ಸೆರೆಸಿಕ್ಕ ಈ ಮನಮೋಹಕ ದೃಶ್ಯಾವಳಿಗಳಿವು.ವೃತ್ತಾಕಾರದ ಬಣ್ಣದ ಬಳೆಗಳ ನಡುವೆ ಪ್ರಜ್ವಲಿಸುತ್ತಿದ್ದ ಸೂರ್ಯನನ್ನು ನೋಡುವುದೇ ಒಂದು ಅಪರೂಪದ ದೃಶ್ಯ.


  ನಿಸರ್ಗದಲ್ಲಿ ಉಂಟಾಗುವ ಅದ್ಭುತ ದೃಶ್ಯಕಾವ್ಯಗಳಲ್ಲಿ ಇದೂ ಒಂದು. ಭೂಮಿಯಿಂದ ಐದರಿಂದ ಎಂಟು ಕಿಲೋಮೀಟರ್ ಎತ್ತರದ ವಾತಾವರಣದಲ್ಲಿ ನಿರ್ಮಾಣವಾಗುವ ಹಿಮದ ಹರಳುಗಳ ಮೂಲಕ ಹಾದುಹೋಗುವ ರವಿಕಿರಣಗಳಿಂದುಂಟಾಗುವ ಪ್ರತಿಫಲನ,ವಕ್ರೀಭವನ ಮತ್ತು ಚದುರುವಿಕೆಯ ಕ್ರಿಯೆಗಳು ಈ ಬಣ್ಣದ ಬಳೆಗಳ ರಚನೆಗೆ ಕಾರಣವಂತೆ.ಇಲ್ಲಿ ಸೂರ್ಯನ ಬೆಳಕಿನ ಕಿರಣಗಳ ಎದುರು ಹಿಮದ ಹರಳುಗಳು ಪ್ರಿಸಂನಂತೆ ಮತ್ತು ದರ್ಪಣವಾಗಿ ವರ್ತಿಸಿ ಮನಸೆಳೆಯುವ ಕಾಮನಬಿಲ್ಲಿನ ಬಳೆಯ ಸೃಷ್ಟಿಗೆ ಕಾರಣವಾಗಿದೆ. ಇದನ್ನೇ ನಮ್ಮ ಪೂರ್ವಜರು ಸೂರ್ಯ ಗೂಡು ಕಟ್ಟಿದ್ದಾನೆ, ಮಳೆ ಬರುವ ಸೂಚನೆ ಎಂದು ಹೇಳುತ್ತಿದ್ದರು. 

ವಿದೇಶ ವಿಹಾರ - 15- ಇದು ಸರೀಸೃಪಗಳ ನಾಡು


ಆಸ್ಟ್ರ‍ೇಲಿಯಾ ದೇಶ ಸರೀಸೃಪಗಳ ನಾಡು.ವಿಶ್ವದಾದ್ಯಂತ ವಾಸವಾಗಿರುವ ಸರೀಸೃಪಗಳ ಸುಮಾರು ೮೬೦ ಪ್ರಭೇಧಗಳು ಇಲ್ಲಿನ ಮೂಲದವುಗಳಂತೆ.ಇವು ಮಾನವನಿಗೆ ತುಂಬಾ ಅಪಾಯಕಾರಿಯಾದವುಗಳು.ಪ್ರಪಂಚದ ಅತಿ ದೊಡ್ಡ ಸರೀಸೃಪ "ಸಾಲ್ಟ್ ವಾಟರ್ ಕ್ರೊಕೊಡೈಲ್" ಕೂಡ ಆಸ್ಟೇಲಿಯಾ ಮೂಲದ್ದು. 

ಇಲ್ಲಿನ ಕಾಡುಗಳಲ್ಲಿ ದೊಡ್ಡ ದೊಡ್ಡ ಪ್ರಾಣಿಗಳಾದ ಆನೆ,ಸಿಂಹ,ಹುಲಿ,ಚಿರತೆಗಳನ್ನು ಕಾಣಲು ಸಾಧ್ಯವಿಲ್ಲ.ಇಲ್ಲಿನ ಹವಾಮಾನಕ್ಕನುಗುಣವಾಗಿ ಮೊಸಳೆ, ವಿವಿಧ ಜಾತಿಯ ಹಾವುಗಳು ಮತ್ತು ದೊಡ್ಡ ಹಲ್ಲಿಯ ಜಾತಿಗೆ ಸೇರಿದ ಅನೇಕ ರೀತಿಯ ಸರೀಸೃಪಗಳು,ಆಮೆಗಳು ಇಲ್ಲಿ ಕಾಣಸಿಗುತ್ತವೆ.ಹಿಂದೆಲ್ಲ ಅಂದರೆ ಮೊದಲಿಗೆ ಯುರೋಪಿಯನ್ನರು ಈ ಖಂಡಕ್ಕೆ ಬಂದಾಗ  ಇಲ್ಲಿ  ಹಾವುಗಳು ಮತ್ತು ಅನೇಕ ರೀತಿಯ ವಿಷಜಂತುಗಳು ಹೆಚ್ಚಾಗಿದ್ದುದರಿಂದ ಅವುಗಳಿಂದ ರಕ್ಷಣೆಗಾಗಿ ಮನೆಗಳನ್ನು ಎತ್ತರದಲ್ಲಿ ಕಟ್ಟಿಕೊಳ್ಳುತ್ತಿದ್ದರು.    

ಸಾಮಾನ್ಯವಾಗಿ ಆಸ್ಟ್ರೇಲಿಯಾದ ಯಾವುದೇ "ದ್ವೀಪಗಳಲ್ಲಿ ಮತ್ತು ಪ್ರಾಣಿಧಾಮಗಳಲ್ಲಿ" ಸರಿಸೃಪಗಳದ್ದೇ ದರ್ಬಾರು ....!! ಇಲ್ಲಿ ಸರಿಸೃಪಗಳ ವಿವಿಧ ಜಾತಿಯ ಪ್ರಬೇಧಗಳನ್ನು ಜನರಿಗೆ ವೀಕ್ಷಿಸಲು ಇಟ್ಟಿರುವುದನ್ನು ಕಾಣಬಹುದು.ಇವೇ ಇಲ್ಲಿನ ಜನರ ಅದರಲ್ಲೂ ಮಕ್ಕಳಿಗೆ ಆಕರ್ಷಣೆಯ ಕೇಂದ್ರಗಳಾಗಿವೆ..! ಇವುಗಳನ್ನು ಕೈಯ್ಯಲ್ಲಿ ಹಿಡಿದು ಮುದ್ದಿಸುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ....!?  


ಮೊಸಳೆ ಜಾತಿಯ ಒಂದು ಪ್ರಾಣಿಯನ್ನು ತನಗೆ ಹಿಡಿದುಕೊಳ್ಳಲು ಕೊಡಲಿಲ್ಲವೆಂದು ಆಸ್ಟ್ರೇಲಿಯಾದ ಚಿಕ್ಕ ಬಾಲಕನೊಬ್ಬ ಅತ್ತು ರಂಪಾಟ ಮಾಡಿದ್ದನ್ನು ನಾನೆಂದೂ ಮರೆಯಲಾರೆ.ಭಾರವಾಗಿರುವ ಈ ಪ್ರಾಣಿಯನ್ನು ಚಿಕ್ಕ ಮಕ್ಕಳು ಎತ್ತಿ ಹಿಡಿಯುವುದು ಬಲು ಕಷ್ಟ. ತಾಯಿ ಮತ್ತು ಅಲ್ಲಿನ ಪ್ರಾಣಿಸಂರಕ್ಷಕರು ಅವನಿಗೆ ಅದನ್ನು ಎತ್ತಿಕೊಳ್ಳಲು ಕೊಟ್ಟ ನಂತರವೇ ಆ ಹುಡುಗ ಸಮಾಧಾನವಾಗಿದ್ದು..!!!

ಆಸ್ಟ್ರ‍ೇಲಿಯನ್ನರು ಹಲ್ಲಿ ಜಾತಿಯ ಸರೀಸೃಪಗಳ ಆಕೃತಿಗಳನ್ನು ಮನೆಯ ಗೋಡೆಯಲ್ಲಿ ಹಾಕುವುದನ್ನು ಶುಭಕರವೆಂದು ತಿಳಿಯುತ್ತಾರೆ.ಹಾಗಾಗಿ ಸಮಾರಂಭಗಳಲ್ಲಿ ವಿಧ ವಿಧವಾದ ಸರೀಸೃಪಗಳ ಆಕೃತಿಯನ್ನು ಉಡುಗೊರೆಯಾಗಿ ನೀಡುವುದೂ ಉಂಟು.       

ಶ್ರಾವಣ ಮಾಸ - ಒಂದೇ ಬಳ್ಳಿಯ ಹೂಗಳ ಮಾಸದ ಸಂಬಂಧಕ್ಕೆ ಸಂಕೇತ


ವರ್ಷಋತುವಿನೊಡನೆ ಶ್ರಾವಣಮಾಸ ಧರೆಗೆ ಕಾಲಿಟ್ಟಿತೆಂದರೆ ಆಷಾಢದ ಜಡತೆ ಪಲಾಯನಗೈಯ್ಯುತ್ತದೆ.ಭೋರೆಂದು ಸುರಿವ ಮಳೆ, ಹಸಿರು ಸೀರೆಯನುಟ್ಟು ಬಣ್ಣಬಣ್ಣದ ಹೂಗಳ ತೊಟ್ಟ ಪ್ರಕೃತಿದೇವಿಯ ವೈಭವ ಈ ಮಾಸಕ್ಕೆ ವಿಶೇಷವಾದ ಕಳೆ ನೀಡುತ್ತದೆ. ಪೇಟೆಯಲ್ಲಿ ಹಲವು ಬಗೆಯ ಫಲಪುಷ್ಪಗಳ ಆಗಮನ.ಮನೆಮನೆಗಳಲ್ಲಿ ದಿನಕ್ಕೊಂದು ಹಬ್ಬ-ವ್ರತಗಳೆಂದು ಸಂತಸ.ಜರಿತಾರಿ ಸೀರೆಯನ್ನುಟ್ಟು ಸಂಭ್ರಮಿಸುವ ಹೆಂಗೆಳೆಯರು ಕಣ್ಮನ ತುಂಬುತ್ತಾರೆ.ಇದೆಲ್ಲವೂ ಶ್ರಾವಣಮಾಸದ ವೈಶಿಷ್ಟ್ಯಗಳು.ಈ ಮಾಸದಲ್ಲಿ ಬರುವ ಹಬ್ಬಗಳ ಅವಲೋಕನ ಮಾಡಿದಾಗ ಒಡಹುಟ್ಟಿದವರ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬಗಳ ಆಚರಣೆ ಹೆಚ್ಚಾಗಿ ಕಂಡುಬರುತ್ತದೆ. ಅಣ್ಣ-ತಮ್ಮ,ಅಕ್ಕ-ತಂಗಿಯರು ಎಲ್ಲಿದ್ದರೂ ಮರೆಯದೆ ಪರಸ್ಪರ ಶುಭಕೋರುವ ತಿಂಗಳಿದು. ತವರಿನ ಸಂಬಂಧವನ್ನು ಉಳಿಸಿ ಬೆಳೆಸಲು ಸಹಕಾರಿಯಾದ ಹಬ್ಬಗಳು ಶ್ರಾವಣ ಸಂಭ್ರಮಕ್ಕೆ ಗರಿ ಮೂಡಿಸಿದೆ.ಈ ಮಾಸದಲ್ಲಿ ಆಚರಿಸುವ  ಭ್ರಾತೃಪ್ರೇಮವನ್ನು ಬಿಂಬಿಸುವ ಒಂದೆರಡು ಹಬ್ಬಗಳತ್ತ ಗಮನಹರಿಸೋಣ. 

ಭೀಮನ ಅಮಾವಾಸ್ಯೆ ಶ್ರಾವಣಕ್ಕೆ ಮುನ್ನುಡಿ ಬರೆವ ಹಬ್ಬ.ಈ ದಿನ ಹೆಣ್ಣುಮಕ್ಕಳು ತಮ್ಮ ಪತಿಯ ಏಳಿಗೆ, ದೀರ್ಘಾಯಸ್ಸನ್ನು ಕೋರುವುದು ವಿಶೇಷವಾದರೂ ತಮ್ಮ ಸೋದರನನ್ನು ಕರೆಸಿ,ಭಂಢಾರ ಒಡೆದು, ಉಡುಗೊರೆ ನೀಡಿ ತಮ್ಮ ನಡುವಿನ ಆತ್ಮೀಯತೆ ಬೆಸೆಯುವ ಪರಂಪರೆ ಸಹ ನಮ್ಮಲ್ಲಿ ಕೆಲವೆಡೆ ಇದೆ.

ಈ ಮಾಸದ ಶುಕ್ಲಪಕ್ಷದ ಚೌತಿ,ಪಂಚಮಿ,ಷಷ್ಟಿಯಂದು ನಾಗಪ್ಪನಿಗೆ ತನಿ ಎರೆಯುವ ಸಂಪ್ರದಾಯವಿದೆ.ಇದರಲ್ಲಿ "ನಾಗರ ಪಂಚಮಿ" ನಾಡಿಗೇ ದೊಡ್ಡದಾದ ಹಬ್ಬವೆಂಬ ಹೆಗ್ಗಳಿಕೆಯಿದೆ. ಗ್ರಾಮಾಂತರ ಪ್ರದೇಶದಲ್ಲಿ, ನಮ್ಮ ಜನಪದರಲ್ಲಿ ’ಪಂಚ್ಮಿಹಬ್ಬ’ವೆಂದು ಹೆಸರು ಪಡೆದಿದೆ. 

’ಪಂಚ್ಮಿಹಬ್ಬ ಪಂಚ್ಮಿಹಬ್ಬ ಉಳಿದಾವ್ ದಿನ ನಾಕ
ಅಣ್ಣ ಬರಲಿಲ್ಲ ಯಾಕ ಕರಿಯಾಕ’
ಎಂದು ತೌರಿನ ಕರೆಯನ್ನು ಹೆಂಗಳೆಯರು ಕಾತರದಿಂದ ಕಾಯುವ ಹಬ್ಬವಿದು.ನಾಗರಪಂಚಮಿಯಂದು ನಾಗನನ್ನು ಭಕ್ತಿಯಿಂದ ಪೂಜಿಸಿ, ಹಾಲುತುಪ್ಪದ ತನಿ ಎರೆದು,ಅರಿಶಿನದ ದಾರವನ್ನು ಕೈಗೆ ಕಟ್ಟಿಕೊಳ್ಳುವುದು ಪದ್ಧತಿ. ಈ ಪವಿತ್ರ ದಿನ ತನಿ ಎರೆದು ತಾಯಿಯ ಎದೆಹಾಲಿನ ಋಣ ತೀರಿಸುವ ಆಶಯವೂ ಇದರಲ್ಲಿದೆ.ಈದಿನ ಹೆಣ್ಣುಮಕ್ಕಳು ತಮ್ಮ ಸೋದರನ ಬೆನ್ನು ತೊಳೆದು, ಬೆನ್ನು-ನಾಭಿಗೆ ನಾಗನಿಗೆ ನೈವೇದ್ಯ ಮಾಡಿದ ಹಾಲು-ತುಪ್ಪ ಹಚ್ಚಿ ಅವರಿಗೆ ಶುಭಹಾರೈಸುತ್ತಾಳೆ. ತನ್ನ ತೌರಿನ ಬಳ್ಳಿ ಅಭಿವೃದ್ಧಿ ಹೊಂದಲಿ ಎಂದು ಆಶಿಸಿತ್ತಾಳೆ.ತನ್ನ ಶ್ರೇಯಸ್ಸನ್ನು ಬಯಸುವ ಸಹೋದರಿಗೆ ಉಡುಗೊರೆ ನೀಡಿ ಸೌಭಾಗ್ಯವತಿಯಾಗುವಂತೆ ಹರಸುತ್ತಾನೆ.ಇದು ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಪದ್ಧತಿ.

ಶ್ರಾವಣದಲ್ಲಿ ಜಾತಿಮತ ಬೇಧವಿಲ್ಲದೆ ಆಚರಿಸುವ ಒಂದು ವಿಶೇಷವಾದ ಹಬ್ಬವೆಂದರೆ ’ರಕ್ಷಾಬಂಧನ’ ಅಥವ ರಾಖಿಹಬ್ಬ.ಇದನ್ನು ಶ್ರಾವಣ ಶುಕ್ಲ ಪೂರ್ಣಿಮೆಯಂದು ಆಚರಿಸುತ್ತೇವೆ.ಈ ಹಬ್ಬದಂದು ’ರಕ್ಷೋಪವೀತಂ ಬಲಮಸ್ತು ತೇಜಃ’ ಎಂದು ಹೇಳಿ ತಂಗಿ ತನ್ನ ಅಣ್ಣನಿಗೆ ರಾಖಿ ಕಟ್ಟಿ, ಆರತಿ ಬೆಳಗಿ, ಆತನಿಗೆ ಸಿಹಿ ತಿನ್ನಿಸಿ ರಕ್ಷಣೆಯನ್ನು ಕೋರುತ್ತಾಳೆ. ತನ್ನ ಮೇಲಿಟ್ಟ ನಂಬಿಕೆಗೆ ಬದ್ಧನಾದ ಅಣ್ಣ, ತನ್ನ ತಂಗಿಗೆ ಉಡುಗೊರೆ ನೀಡಿ ಒತ್ತಾಸೆಯಾಗಿ ನಿಲ್ಲುವ ಭರವಸೆ ನೀಡುತ್ತಾನೆ. ಇಂದಿನ ದಿನಗಳಲ್ಲಿ ಹೆಣ್ಣುಗಂಡೆಂಬ ಬೇಧಭಾವವಿಲ್ಲದೆ ತಮ್ಮ ಸ್ನೇಹಿತರಿಗೆ,ಆಪ್ತಬಂಧುಗಳಿಗೆ ರಾಖಿ ಕಟ್ಟಿ ಅಥವಾ ಅಂಚೆ ಮೂಲಕ ರಾಖಿಯನ್ನು ರವಾನಿಸಿ ಪರಸ್ಪರ ವಿಶ್ವಾಸ,ಆತ್ಮೀಯತೆ ವ್ಯಕ್ತಪಡಿಸುವುದನ್ನು ಕಾಣುತ್ತಿದ್ದೇವೆ.ಆದ್ದರಿಂದ ಇಂದಿನ ರಕ್ಷಾಬಂಧನ ವಿಶ್ವಭ್ರಾತೃತ್ವ ಬಿಂಬಿಸುತ್ತಿದೆ ಎಂದರೆ ತಪ್ಪಲ್ಲ.ಒಟ್ಟಿನಲ್ಲಿ ಶ್ರಾವಣಮಾಸದಲ್ಲಿ ಆಚರಿಸುವ ಈ ಎಲ್ಲಾ ಹಬ್ಬಗಳ ಧ್ಯೇಯ ಮಾತ್ರ ಒಂದೇ. ಅದೇ ಒಡಹುಟ್ಟಿದವರಲ್ಲಿ ಮಧುರ ಭಾಂಧವ್ಯದ ಬೆಸುಗೆ.ನಮ್ಮ ಹಿರಿಯರು ಆಚರಣೆಗೆ ತಂದ ಈ ಎಲ್ಲಾ ಹಬ್ಬಗಳ ಒಳಾರ್ಥ ತಿಳಿದಾಗ ಸಂತಸವಾಗುತ್ತದೆ.     

ವಿದೇಶ ವಿಹಾರ - 14- ಆಸ್ಟ್ರೇಲಿಯಾದ ಮಹಿಳೆಯರು

ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು, ಸಾಮರ್ಥ್ಯವನ್ನು ಮೆರೆದು ಮೆಚ್ಚುಗೆಯನ್ನು ಪಡೆಯುತ್ತಿರುವುದು ಹೆಮ್ಮೆಯ ವಿಷಯ.ತೊಟ್ಟಿಲು ತೂಗುವ ಕೈ ದೇಶವನ್ನೂ ಆಳಬಲ್ಲದು ಎಂಬ ಮಾತು, ದೈಹಿಕವಾಗಿ ಪುರುಷನಿಗಿಂತ ಬಲಹೀನಳಾದ ಹೆಣ್ಣು ಸಂದರ್ಭ ಒದಗಿದಾಗ ಎಂಥಹ ಕೆಲಸವನ್ನಾದರೂ ನಿರ್ವಹಿಸುವ ಜಾಣ್ಮೆಯನ್ನು ಹೊಂದಿದ್ದಾಳೆ ಎನ್ನುವುದನ್ನು ಬಿಂಬಿಸುತ್ತದೆ.ಅಡುಗೆ ಮನೆಯಲ್ಲಿ ಆಧುನಿಕ ಸೌಲಭ್ಯಗಳು ಲಭ್ಯವಿರುವ ಇಂದಿನ ದಿನಗಳಲ್ಲಿ ಹೆಣ್ಣು ಮನೆಯಲ್ಲಿಯೇ ಕುಳಿತು ವ್ಯರ್ಥವಾಗಿ ಕಾಲಕಳೆಯುವುದು ಸಮಂಜಸವೂ ಅಲ್ಲ.
ಈ ಮಾತಿಗೆ ಭಾರತೀಯರಂತೆ ಆಸ್ಟ್ರೇಲಿಯಾ ದೇಶದ ಮಹಿಳೆಯರೂ ಹೊರತಲ್ಲ.ಇಲ್ಲಿನ ಹೆಣ್ಣು ತನ್ನ ಕುಟುಂಬವನ್ನು ನೋಡಿಕೊಳ್ಳುವುದರೊಂದಿಗೆ ತನ್ನ ಬೌದ್ಧಿಕ ಮಟ್ಟಕ್ಕೆ ಹೊಂದುವ ಯಾವುದಾದರೂ ದುಡಿಮೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿತು.ಈ ದೇಶದ ನಾರಿ ಇಲ್ಲಾ ಕೆಲಸಗಳಿಗೂ ರೆಡಿ.ಯಾವುದೇ ಕೆಲಸವನ್ನು ಸಮರ್ಪಕವಾಗಿ ಮಾಡಿ ಮುಗಿಸುವ ಮನೋಭಾವವನ್ನು ಇಲ್ಲಿನ ಸ್ತ್ರೀಯರಲ್ಲಿ ಕಂಡೆ!!!!

ಇಲ್ಲಿನ ಮಹಿಳಾಮಣಿಗಳು ದುಡಿಯದ ಕ್ಷೇತ್ರವಿಲ್ಲ ಎನ್ನಬಹುದು.
ಆಸ್ಟ್ರೇಲಿಯಾದ ಮಹಿಳೆ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದು ದೇಶವನ್ನು ಸಮರ್ಥವಾಗಿ ಮುನ್ನೆಡೆಸುವ ಜವಾಬ್ದಾರಿಯಿಂದ ಹಿಡಿದು ಪ್ರತಿ ಕಾರ್ಯ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದಾಳೆ ಎನ್ನಬಹುದು.
ಏಕೆಂದರೆ ಆಸ್ಟ್ರೇಲಿಯಾ ದೇಶದ ಈಗಿನ ಪ್ರಧಾನಮಂತ್ರಿ ಓರ್ವ ಮಹಿಳೆ.ಇಲ್ಲಿನ ಮಹಿಳೆಯರ ಸಾಮರ್ಥ್ಯಕ್ಕೆ ಇದು ಒಂದು ನಿದರ್ಶನ.

ಪ್ರತಿಷ್ಟಿತ ಕಂಪನಿಗಳ ಉನ್ನತ ಹುದ್ದೆಗಳಲ್ಲಿ,ಸರಕಾರಿ ಇಲಾಖೆಗಳ ಹುದ್ದೆಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಾಗಿ ದುಡಿಯುತ್ತಾರೆ.ಶಾಪಿಂಗ್ ಕಾಂಪ್ಲೆಕ್ಸ್ ಗಳಿರಲಿ,ಏರ್ ಪೋರ್ಟ್ ಗಳಿರಲಿ ದುಡಿಯುವ ಹೆಣ್ಣುಮಕ್ಕಳು ಕಂಡುಬರುತ್ತಾರೆ.   ಅಷ್ಟೇ ಅಲ್ಲದೆ  ರೆಸ್ಟೋರೆಂಟ್ ಮತ್ತು ಪಬ್ ಮುಂತಾದ ದೊಡ್ಡ ದೊಡ್ಡ ಉದ್ದಿಮೆಗಳನ್ನು ಸ್ವಂತವಾಗಿ ನಿರ್ವಹಿಸಬಲ್ಲ ಪರಿಣತಿ ಇಲ್ಲಿನ ಮಹಿಳೆಯರಿಗಿದೆ.ಹಾಗಾಗಿ ಇಲ್ಲಿನ ಮಹಿಳೆಯರು ವ್ಯವಹಾರ ಚತುರೆಯರು.

ಇಲ್ಲಿ ನಾನು ಗಮನಿಸಿದ ಮತ್ತೊಂದು ಸಂಗತಿಯೆಂದರೆ,ಇಲ್ಲಿನ ಮಹಿಳೆಯರು ದೈಹಿಕವಾಗಿ ಹೆಚ್ಚು ಶ್ರಮವನ್ನು ಬೇಡುವ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವುದು...! ಇದು  ನನಗೆ ಅಚ್ಚರಿ ಎನಿಸಿತು.
ಆಸ್ಟ್ರೇಲಿಯನ್ ಮಹಿಳೆಯರು ಭಾರಿ ಟ್ರಕ್ ಗಳನ್ನೂ ಸಹ ಸಲೀಸಾಗಿ ಚಾಲನೆ ಮಾಡುವುದನ್ನು ಕಂಡು ಅಚ್ಚರಿಪಟ್ಟೆ.ದೊಡ್ಡದೊಡ್ಡ ಸಾಮಾನುಗಳನ್ನು ಒರ್ವ ಮಹಿಳೆಯೇ ಸಾಗಿಸುವುದಾಗಲಿ, ಭಾರಿ ಫೆರ್ರಿ(ಲಾಂಚ್ ಗಳು)ಗಳಿಗೆ ಲಂಗರು ಹಾಕಿ ನಿಲ್ಲಿಸುವಂತಹ ಕಷ್ಟದ ಕೆಲಸಗಳನ್ನೂ ಇಲ್ಲಿನ ಮಹಿಳೆ ಲೀಲಾಜಾಲವಾಗಿ ಮಾಡುತ್ತಾಳೆ.ಒಟ್ಟಿನಲ್ಲಿ ದುಡಿಮೆ ಇಲ್ಲಿನವರ ಮಂತ್ರ.

ಇಲ್ಲಿನ ಕೆಲಸಗಳಲ್ಲಿ ಹೆಂಗಸು-ಗಂಡಸೆಂಬ ಭೇದಭಾವವಿಲ್ಲ.ಹೆಚ್ಚಿನ ಗಂಡಸರು ಮೈನಿಂಗ್ ಕೆಲಸಕ್ಕೆ ತಿಂಗಳಗಟ್ಟಲೆ ಹೊರಗೆ ಹೋಗಿ ದುಡಿಯುತ್ತಾರೆ.ನಗರ ಪ್ರದೇಶದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಮತ್ತು ಇತರೆಡೆಗಳಲ್ಲಿ ಮಹಿಳಾ ಕೆಲಸಗಾರರೇ ಹೆಚ್ಚು.ನಮ್ಮ ಮಗಳು ನೂತನವಾಗಿ ಕಟ್ಟಿರುವ ಮನೆಗೆ ಸೋಫಾಸೆಟ್ ಗಳು,ಫರ್ನಿಚರ್ ಗಳು, ದೊಡ್ಡ ಕಾಟ್ ಗಳು,ರೆಫ್ರಿಜರೇಟರ್ ಇನ್ನು ಅನೇಕ ಗೃಹೋಪಯೋಗಿ ವಸ್ತುಗಳನ್ನು ಬುಕ್ ಮಾಡಿದ್ದರು. ಇವೆಲ್ಲವನ್ನು ಲಾರಿಯಲ್ಲಿ ಲೋಡ್ (ಡ್ರೈವ್ ಕೂಡ)  ಮಾಡಿಕೊಂಡು ಬಂದು ನಮ್ಮ ಮನೆಗೆ ತಂದಿಟ್ಟುಕೊಟ್ಟಿದ್ದು ಓರ್ವ ಮಹಿಳೆ....ನಮ್ಮಲ್ಲಾಗಿದ್ರೆ ಇಷ್ಟು ಕೆಲಸಕ್ಕೆ ಕಡಿಮೆಯೆಂದರೂ ಮೂರು ಜನ ಗಂಡಸರಾದರೂ ಬರುತ್ತಾರೆ..!.ಇಲ್ಲಿನ ಈ ಕೆಲಸಗಳಿಗೆ ಅಷ್ಟು ಜನರ ಅವಶ್ಯಕತೆಯೂ ಇರುವುದಿಲ್ಲ.ಲಾರಿಗೆ ವಸ್ತುಗಳನ್ನು ಹಾಕಲು,ಇಳಿಸಲು ಮತ್ತು ಮನೆಯೊಳಗೆ ತಂದಿಡಲು ಬೇಕಾದ ಎರಡು ಗಾಲಿಗಳಿರುವ ಚಿಕ್ಕ ಗಾಡಿಯ ವ್ಯವಸ್ಥೆಯನ್ನು ಅಲ್ಲಿ ಎಲ್ಲೆಡೆಯೂ ಕಾಣಬಹುದು.ಹಾಗಾಗಿ ಈಎಲ್ಲಾ ಕೆಲಸಗಳನ್ನು ಮಹಿಳೆಯರೇ ಸುಲಭವಾಗಿ ನಿರ್ವಹಿಸಬಲ್ಲರು.ಜನಸಂಖ್ಯೆ ಕಡಿಮೆ ಇರುವ ದೇಶಗಳಲ್ಲಿ ಯಂತ್ರಗಳಿಗೆ ಮೊರೆಹೋಗುವುದು ಅನಿವಾರ್ಯ. ಆದರೆ ನಮ್ಮ ದೇಶದಲ್ಲಿ ಮೂರು ಜನರ ಕೆಲಸವನ್ನು ಒಂದು ಯಂತ್ರ ಮಾಡಿದರೆ ದುಡಿಯುವ ಕೈಗಳಿಗೆ ಕೆಲಸ ಒದಗಿಸುವುದು ಹೇಗೆ ಎಂಬ ಪ್ರಶ್ನೆ ನಮ್ಮೆದುರು ನಿಲ್ಲುತ್ತದೆ.ಹಾಗಾಗಿ ಇದನ್ನು ನಮ್ಮ ದೇಶಕ್ಕೆ ಅನ್ವಯಿಸಿಕೊಳ್ಳದಿರುವುದೇ ಒಳ್ಳೆಯದು ಎಂದು ನನ್ನ ಅನಿಸಿಕೆ.

ಇಲ್ಲಿನ ಹೆಣ್ಣು ಸಂಸಾರದ ಜವಾಬ್ದಾರಿಯನ್ನೂ ತಾನೇ ಹೊರುತ್ತಾಳೆ. ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ,ಮಕ್ಕಳನ್ನು ಬೆಳೆಸುವುದರಲ್ಲಿ ಮಹಿಳೆಯರು ಗಂಡಸರಿಗಿಂತಾ ಹೆಚ್ಚಿನ ಆಸಕ್ತಿ ವಹಿಸುತ್ತಾರೆ.ನಮ್ಮ ದೇಶದಲ್ಲಿರುವಂತೆ ಇಲ್ಲಿ ಕುಟುಂಬ ಯೋಜನೆ ಎಂಬುದಿಲ್ಲ.ಇಲ್ಲಿನ ಸರಕಾರ ತನ್ನ ದೇಶದ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ, ಹೆಚ್ಚು ಮಕ್ಕಳನ್ನು ಪಡೆಯಲು ಪ್ರೋತ್ಸಾಹಿಸುತ್ತದೆ ಮತ್ತು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದವರಿಗೆ ಅನೇಕ ಸವಲತ್ತುಗಳನ್ನು ಕೂಡ ಕೊಡುತ್ತದೆ....!!

ಇಲ್ಲಿನ ಮಕ್ಕಳು ಮತ್ತು ಹುಡುಗಿಯರನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಆಸೆಯಾಗುತ್ತದೆ.ನನಗಂತೂ ಮುದ್ದಾದ ಗೊಂಬೆಗಳನ್ನು ನೋಡಿದಂತೆನಿಸುತ್ತಿತ್ತು.ತಮ್ಮ ಕೆನೆಹಾಲಿನ ಮೈ ಬಣ್ಣಕ್ಕೆ ಚೋಟುದ್ದದ ಡ್ರೆಸ್ ಹಾಕಿಕೊಂಡು,ತಮ್ಮ ಕಪ್ಪುಕೂದಲನ್ನು ಹರಡಿಕೊಂಡು ,ಹೈಹೀಲ್ಡ್ ಚಪ್ಪಲಿ ಧರಿಸಿ ಓಡಾಡುವ ಯುವತಿಯರು ನಮ್ಮ ಕಣ್ತುಂಬುವುದರಲ್ಲಿ ಸಂದೇಹವಿಲ್ಲ.ಒಳ್ಳೆ ರಸಗುಲ್ಲಗಳಂತಿರುವ ಮಕ್ಕಳನ್ನು ನೋಡಿದೊಡನೆ ಕೆನ್ನೆ ಸವರುವ ಮನಸ್ಸಾಗುತ್ತಿತ್ತು.

ಈ ದೇಶದಲ್ಲಿ ಮನೆಗೆಲಸಕ್ಕೆ ಜನ ಸಿಗುವುದು ಕಷ್ಟ.ಸಿಕ್ಕರೂ ದುಬಾರಿ ಸಂಬಳ ನೀಡಬೇಕು.ಗಂಟೆಗೆ ಮೂವತ್ತು ಡಾಲರುಗಳನ್ನು (ಅಂದರೆ ನಮ್ಮ ದೇಶದ ರೂಪಾಯಿಯಂತೆ ೧೫೦೦/-)   ಪಾವತಿಸಬೇಕಾಗುತ್ತದೆ.

ನನ್ನ ಮಗಳ ಮನೆಗೆ ಕೆಲಸ ಮಾಡಿಕೊಡಲು ವಯಸ್ಸಾದ ಮಹಿಳೆಯೊಬ್ಬರು ವಾರಕ್ಕೊಮ್ಮೆ ಬರುತ್ತಾರೆ. ಅವರಿಗೆ ಏನಿಲ್ಲವೆಂದರೂ ಅರವತ್ತು ವರ್ಷಗಳಿರಬಹುದು.ಆದರೆ ಅವರ ಉತ್ಸಾಹ ,ಚುರುಕುತನ ನಮ್ಮನ್ನು ನಾಚುವಂತೆ ಮಾಡುತ್ತದೆ.ಟ್ರಿಂ ಆಗಿ ತಮ್ಮ ಟೊಯೋಟಾ ಕಾರಿನಲ್ಲಿ ಬಂದಿಳಿಯುವ ಇವರು ಮನೆಯೊಳಗೆ ಕಾಲಿಟ್ಟ ಒಂದೆರಡು ಗಂಟೆಗಳಲ್ಲಿ ಇಡೀ ಮನೆ ಶುಭ್ರವಾಗಿಬಿಡುತ್ತದೆ.ಕಿಚನ್, ಬಾತ್ ರೂಂ ,ಟಾಯ್ಲೆಟ್ ಗಳು, ಮನೆಯ ಎಲ್ಲಾ ಗಾಜಿನ ಬಾಗಿಲು, ಕಿಟಕಿಗಳು ಇವರ ಕೈಚಳಕದಿಂದ ಮಿರಿಮಿರಿ ಮಿನುಗುತ್ತವೆ. ಮನೆಯವರೊಡನೆ ನಗುನಗುತ್ತಾ, ಮಾತನಾಡುತ್ತಾ ಕೆಲಸವನ್ನು ಮುಗಿಸುತ್ತಾರೆ.ಇಲ್ಲಿನ ಜನರಲ್ಲಿ ಮಾಡುವ ಕೆಲಸದಲ್ಲಿ ಮೇಲು-ಕೀಳೆಂಬ ಮನೋಭಾವವಿಲ್ಲ.ಒಟ್ಟಿನಲ್ಲಿ ದುಡಿದು ತಿನ್ನಬೇಕೆಂಬ ನಿಯಮ ಅಷ್ಟೆ.ನನಗೆ ಇವರ ಕೆಲಸವನ್ನು  ನೋಡಿದಾಗ ಕೆಲಸ ಯಾವುದಾದರೇನು, ಅದನ್ನು ಮನಸ್ಸಿಟ್ಟು ಶ್ರದ್ಧೆಯಿಂದ ಮಾಡುವುದು ಮುಖ್ಯ ಎಂಬ ನಮ್ಮ ಹಿರಿಯರ ನುಡಿ ನೆನಪಾಯಿತು.

ವಿದೇಶ ವಿಹಾರ - 13 - Sky Rail Experience









ಕೈರ್ನ್ಸ್ ನಿಂದ ಹದಿನೈದು ನಿಮಿಷಗಳ ಡ್ರೈವ್ ಮಾಡಿದರೆ "ಕುರಾಂಡ" ತಲುಪಬಹುದು.
ಸಾಮಾನ್ಯವಾಗಿ ಹಳಿಗಳ ಮೇಲೆ ಚಲಿಸುವ ರೈಲಿನಲ್ಲಿ ನಾವೆಲ್ಲರೂ ಕುಳಿತು ಆನಂದಿಸಿರುತ್ತೇವೆ. ಕುರಾಂಡದಲ್ಲಿ ಇರುವುದು ಸ್ಕೈರೈಲು.....!!! ಕೇವಲ ಒಂದು ಕೇಬಲ್ಲಿನ ಆಧಾರ  ದಿಂದ ಚಲಿಸುವ ಸ್ಕೈರೈಲಿನ ಗೊಂಡಾಲದಲ್ಲಿ ಕುಳಿತು, ಸಾವಿರಾರು ಅಡಿಗಳ ಮೇಲೆ ಪಯಣಿಸುವ ವಿಭಿನ್ನ ಅನುಭವವನ್ನು ನಾವಿಲ್ಲಿ ಪಡೆಯಬಹುದು.

ಸ್ಕೈರೈಲಿನಲ್ಲಿ ಬಾರೋನ ಫಾಲ್ಸಿನತ್ತ ನಮ್ಮ ಪಯಣ...
ಆಕಾಶರೈಲಿನಲ್ಲಿ ನಾವು...ಕೆಳಗೆ ಮಾಮೂಲಿ ರೈಲು...!!!!
 ಇಲ್ಲಿನ ಸಂರಕ್ಷಿತ ಮಳೆ ಕಾಡನ್ನು ಗೊಂಡಾಲ(ಕ್ಯಾಬಿನ್)ದಲ್ಲಿ ಕುಳಿತು ಕೇಬಲ್ ವೇನಲ್ಲಿ ಹೋಗುತ್ತಾ ವೀಕ್ಷಿಸುವುದು ಒಂದು ವಿನೂತನ ಅನುಭವ.ಇದಕ್ಕೆ ಸ್ಕೈರೈಲ್ ಎಂದು ಕರೆಯುವರು. ಈ ಅರಣ್ಯದಲ್ಲಿ ಅನೇಕ ಜಾತಿಯ ಸಸ್ಯ ಪ್ರಭೇದಗಳು ಮತ್ತು ಆರ್ಕಿಡ್,ಚಿಟ್ಟೆಗಳ ಮತ್ತು ಪಕ್ಷಿಗಳ ಪ್ರಭೇದಗಳಿವೆ. ಗೊಂಡಾಲದಲ್ಲಿ ಕುಳಿತು ಕೆಳಗೆ ಕಾಣುವ ವನಸಿರಿಯ ಸೊಬಗನ್ನು ಸವಿಯಬಹುದು.

ಬಾರೋನ ಜಲಪಾತದ ರಮ್ಯ ನೋಟ

 ಕುರಾಂಡ ಟರ್ಮಿನಲ್ ನಿಂದ ಕೇಬಲ್ ಕಾರಿನಲ್ಲಿ ಹೊರಟರೆ ನಡುವೆ ಎರಡು ನಿಲ್ದಾಣಗಳಿವೆ. ಬಾರೋನ ಫಾಲ್ಸ್ ಸ್ಟೇಷನ್ ಮತ್ತು ರೆಡ್ ಪೀಕ್ ಸ್ಟೇಷನ್.ಇಲ್ಲಿ ಇಳಿದು ಕಾಡಿನಲ್ಲಿ ನಡೆದುಕೊಂಡು ಹೋಗಿ(ಇದಕ್ಕಾಗಿ ದಾರಿಯನ್ನು ಮಾಡಿದ್ದಾರೆ) ಫಾಲ್ಸ್ ಮತ್ತು ಪ್ರಕೃತಿಯ ಸೊಬಗನ್ನು ಹತ್ತಿರದಿಂದ ನೋಡಿ ಮತ್ತೆ ಗೊಂಡಾಲ ಹತ್ತಬೇಕು.
ಅಟ್ಟಣೆಗೆಯಲ್ಲಿ ನಿಂತು ಸಮೀಪದಿಂದ ಜಲಪಾತ ದರ್ಶನ
Red Peak Station










ಇಲ್ಲಿನ ಎರಡೂ ನಿಲ್ದಾಣಗಳಲ್ಲಿ ಇರುವ ಕಂಪ್ಯೂಟರ್ ಮತ್ತು ಭಿತ್ತಿಚಿತ್ರಗಳ ಮೂಲಕ ಈ ಅರಣ್ಯದಲ್ಲಿ ವಾಸಿಸುವ ಜೀವಿಗಳು,ವೃಕ್ಷ ಸಂಪತ್ತು ಮತ್ತು ಅವುಗಳ ಸಂರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮಗಳ ಸಮಗ್ರ ಪರಿಚಯ ಮಾಡಿಕೊಡಲಾಗುತ್ತದೆ.ನಮ್ಮ ಈ ಆಕಾಶರೈಲಿನ ಪಯಣ ಕಾರ್ನವೋನಿಕಾ ಟರ್ಮಿನಲ್ಲಿನಲ್ಲಿ ಮುಕ್ತಾಯಗೊಂಡಿತು.

 ಮೇಲಕ್ಕೆ ಏರುವಾಗ ನಿಧಾನವಾಗಿ ಚಲಿಸುವ ಗೊಂಡಾಲಗಳು ಇಳಿಯುವಾಗ ಸರಸರನೆ ಇಳಿದಂತೆ ಭಾಸವಾಗುತ್ತದೆ.ಇದು ಒಂದು ಅದ್ಭುತವಾದ ಅನುಭವ ನೀಡುವುದರೊಂದಿಗೆ ಮನಸ್ಸಿಗೆ ಉಲ್ಲಾಸವನ್ನು ತಂದುಕೊಟ್ಟಿತು.

ಹಿಂದಿಯಲ್ಲಿ ಬರೆದಿರುವ ಅನಿಸಿಕೆಯನ್ನು ಗಮನಿಸಿ..! 
ಕುರಾಂಡದಲ್ಲಿನ ಬಟರ್ ಫ್ಲೈ ಸ್ಯಾನ್ಚುರಿ ಯಲ್ಲಿ ಚಿಟ್ಟೆಗಳ ವೈವಿಧ್ಯಮಯ ಲೋಕ ಮನಸೆಳೆಯುತ್ತದೆ. ವಿವಿಧ ಜಾತಿಯ,ರಂಗು ರಂಗಿನ ಚಿಟ್ಟೆಗಳ ಜೀವನ ಶೈಲಿ, ಅವುಗಳ ಸ್ವಚ್ಛಂದ ವಿಹಾರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.   ಇದಲ್ಲದೆ ಕೋಯಲ ಪಾರ್ಕ್,ಆರ್ಟ್ ಗ್ಯಾಲರಿಗಳು ಕುರಾಂಡದಲ್ಲಿ ನೋಡಬಹುದಾದ ಇನ್ನಿತರ ಸ್ಥಳಗಳು. 

ವಿದೇಶ ವಿಹಾರ - 12 - "Indian cuisine"


ಕೈರ್ನ್ಸ್ ನಲ್ಲಿ ಒಂದು ಇಂಡಿಯನ್ ರೆಸ್ಟೋರೆಂಟಿದೆ. ಅಲ್ಲಿಗೆ ನೀವು ಊಟಕ್ಕೆ ಹೋಗಿ ಎಂದು ನಮ್ಮ ಅಳಿಯ ಅಲ್ಲಿನ ಅಡ್ರೆಸ್ ಕೊಟ್ಟಿದ್ದರು.ಹಾಗಾಗಿ ನಮಗೆ ಸಸ್ಯಾಹಾರಿ ಊಟ ಸಿಗುವುದು ತೊಂದರೆ ಆಗಲಿಲ್ಲ.ಆದರೆ ಅಲ್ಲಿಗೆ ಹೋದಾಗ ನಮಗೆ ಇನ್ನೂ ಅಚ್ಚರಿಯಾಗಿದ್ದೆಂದರೆ "ಇಂಡಿಯನ್ ಕ್ಯೂಸಿನ್" ಮಾಲೀಕರು ನಮ್ಮ ಮಂಗಳೂರಿನವರು ಎಂಬುದು.ನಾವು ಕನ್ನಡದಲ್ಲಿ ಮಾತನಾಡುವುದನ್ನು ಕಂಡು ಅವರು ನಮ್ಮನ್ನು ಕನ್ನಡದಲ್ಲಿ ಮಾತನಾಡಿಸಿದಾಗ ನಮಗೆ ಆತ್ಮೀಯತೆ ಹೆಚ್ಚಾಯಿತು.ಅವರು ನಮಗಾಗಿ ೨-೩ ದಿನವೂ ಸಸ್ಯಾಹಾರಿ ಊಟ-ತಿಂಡಿಯನ್ನು ತಯಾರು ಮಾಡಿಕೊಟ್ಟರು.ನಾವು ಸುತ್ತಮುತ್ತಲ ಸ್ಥಳಗಳನ್ನು ನೋಡಿಕೊಂಡು ಊಟಕ್ಕೆ ಇಲ್ಲಿಗೇ ಬರುತ್ತಿದ್ದೆವು.

ಅವರು ಆಸ್ಟ್ರೇಲಿಯಾಕ್ಕೆ ಹೋಗಿ ಇಪ್ಪತೈದು ವರ್ಷಗಳಾದುವಂತೆ.ಮಕ್ಕಳಿಬ್ಬರೂ ಓದಿ ಬೇರೆಡೆ ಕೆಲಸದಲ್ಲಿದ್ದಾರೆ. ಇವರು ಮತ್ತು ಇವರ ಪತ್ನಿ ಇಲ್ಲಿ ಹೋಟೆಲ್ ನಡೆಸುತ್ತಿದ್ದಾರೆ.ಕೆಲಸಕ್ಕೆ ಜನ ಸಿಗದ ಬಿಸಿ ಇವರಿಗೂ ತಟ್ಟಿದೆ. ಯಾರೂ ಸಿಗದಿದ್ದಾಗ ಈ ಗಂಡ-ಹೆಂಡತಿಯೇ ಅಡಿಗೆಯವರು,ಸಪ್ಲೈಯರ್,ಕ್ಲೀನರ್ ಎಲ್ಲವೂ ಆಗಬೇಕಾದ ಅನಿವಾರ್ಯತೆಯನ್ನು ಕೊಂಚ ಬೇಸರದಿಂದಲೇ ತಿಳಿಸಿದರು.

ಹೋಟೆಲ್ಲಿನ ಗೋಡೆಯಲ್ಲಿ ಶಿವಾಜಿ ಮತ್ತು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಫೋಟೋಗಳನ್ನು ಹಾಕಿದ್ದಾರೆ.ಆ ದೇಶದಲ್ಲಿ ನಮ್ಮವರನ್ನು ಕಂಡು ಸಂತಸವಾಯಿತು. ಕೈರ್ನ್ಸ್ ಪ್ರವಾಸದಲ್ಲಿ ನಮಗೆ ಖುಷಿ ನೀಡಿದ ಅನುಭವಗಳಲ್ಲಿ ಇದೂ ಒಂದು.ವಾಪಾಸಾಗುವಾಗ ಈ ದಂಪತಿಗಳಿಗೆ ಧನ್ಯವಾದ ಸಲ್ಲಿಸಿ ಹೊರಟೆವು.