ಚೈತನ್ಯದ ನುಡಿಗಳು -- ಅಲ್ಲಿ ಇಲ್ಲಿ ಹೆಕ್ಕಿದ್ದು - 4


೧.ಕೋಪ ನಾಲಿಗೆಯ ತುದಿಯಲ್ಲಿರಬೇಕು ಆದರೆ ಹೃದಯದಲ್ಲಿ ಪ್ರೀತಿಯಿರಬೇಕು.

೨.ಸಮಸ್ಯೆಯ ಮೂಲ ಮನಸ್ಸು.
   ಮನಸ್ಸಿನ ಭಾವನೆಗಳು ನಾಲಿಗೆಯಲ್ಲಿ ಪ್ರತಿಧ್ವನಿಸುತ್ತವೆ.

೩.ಅಹಂಕಾರಿಗಳು ದುರ್ಬಲರು.ತಮ್ಮ ಬಗ್ಗೆಯೇ ಅವರಿಗೆ ವಿಶ್ವಾಸವಿರುವುದಿಲ್ಲ.
   ಆದರೆ ಸ್ವಾಭಿಮಾನಿಗಳು ಬಲಿಷ್ಟರು.

೪.ಇತರರು ನಿಮ್ಮ ಬಗ್ಗೆ ಹೇಗೆ ನಡೆದುಕೊಳ್ಳಬೇಕೆಂದು ಬಯಸುವಿರೊ ಹಾಗೆಯೇ
   ನೀವು ಅವರ ಬಗ್ಗೆ  ನಡೆದುಕೊಳ್ಳಬೇಕು.

೫.ಸೋಲುವೆನೆಂಬ ಭಯವನ್ನು ಜಯಿಸುವುದೇ ನಿಜವಾದ ಗೆಲುವು.

೬.ಕೆಲಸ ಮಾಡುವಾಗ ದಕ್ಷರಾಗಿರಬೇಕು.
   ಮಾತನಾಡುವಾಗ ಎಚ್ಚರದಿಂದಿರಬೇಕು.
   ಯೋಚಿಸುವಾಗ ದೂರದೃಷ್ಠಿ ಇರಬೇಕು.

೭.ಕಷ್ಟಗಳು ಪರಮಾತ್ಮನ ಕರುಣೆಯ ಕುರುಹು ಎಂದು ತಿಳಿ.

೮.ಉನ್ನತಿಯಾಗಲಿ , ಅವನತಿಯಾಗಲಿ ದೂರದಲ್ಲಿಲ್ಲ.
   ಅವರವರ ಕೈಯ್ಯಲ್ಲಿದೆ,ಮನಸ್ಸಿನಲ್ಲಿದೆ.

೯.ಕಷ್ಟಗಳಿಲ್ಲದೆ ಕೆಚ್ಚು ಕೆರಳದು. ಕೆಚ್ಚು ಕೆರಳದೆ ಏನನ್ನೂ ಸಾಧಿಸಲಾಗದು.

೧೦.ನೆನಪುಗಳಿರುವುದು ವಸ್ತುಗಳಲ್ಲಲ್ಲ, ಮನಸ್ಸಿನಲ್ಲಿ.

ವಿದೇಶ ವಿಹಾರ - 8 - Billabong Sanctuaryಯಲ್ಲಿ ಕಾಂಗರೂಗಳೊಡನೆ...



ಆಸ್ಟ್ರೇಲಿಯಾ ಕಾಂಗರೂಗಳ ನಾಡು.ಇವುಗಳು ಈ ನಾಡಿಗೊಂದು ಶೋಭೆ.ಆಸ್ಟ್ರೇಲಿಯವೆಂದೊಡನೆ ನಮ್ಮ ಕಣ್ಮುಂದೆ ಕಾಂಗರೂ ಸುಳಿಯುವುದು ನಿಶ್ಚಿತ.ತನ್ನ ಹೊಟ್ಟೆಯ ಚೀಲದಲ್ಲಿ ಮರಿಯನ್ನಿಟ್ಟುಕೊಂಡು ಬೆಳೆಸುವ, ಜಗತ್ತಿನಲ್ಲಿಯೇ ವಿಶೇಷವಾದ ಸಸ್ತನಿಯಾದ ಕಾಂಗರೂಗಳು ಇಲ್ಲಿ ಗುಂಪು-ಗುಂಪಾಗಿ ವಾಸಮಾಡುವುದನ್ನು ನೋಡುವುದೇ ಒಂದು ಸೊಗಸು.

ಯೂರೋಪಿನ ಯಾತ್ರಿಗಳು ಮೊದಲಬಾರಿಗೆ ಆಸ್ಟೇಲಿಯಾಕ್ಕೆ ಭೇಟಿಯಿತ್ತಾಗ ಈ ವಿಚಿತ್ರವಾದ ಪ್ರ‍ಾಣಿಯನ್ನು ನೋಡಿ ಇದೇನೆಂದು ಕೇಳಿದರಂತೆ.ಅಲ್ಲಿನ ಆದಿವಾಸಿ ಜನಾಂಗ  ಅವರ ಭಾಷೆ ಅರ್ಥವಾಗದೆ "ಕಾಂಗರೂ" ಎಂದರಂತೆ.ಆಸ್ಟೇಲಿಯಾದ ಆದಿವಾಸಿಗಳ ಭಾಷೆಯಲ್ಲಿ ಕಾಂಗರೂ ಎಂದರೆ "ನನಗೆ ಅರ್ಥವಾಗಲಿಲ್ಲ" ಎಂದು ಅರ್ಥವಂತೆ.ಮುಂದೆ ಅದೇ ಹೆಸರು ಈ ಪ್ರ‍ಾಣಿಗೆ ಶಾಶ್ವತವಾಯಿತು.


ಕೆಂಪು,ಬೂದು ಬಣ್ಣವಲ್ಲದೆ ಸ್ವಲ್ಪ ಕಪ್ಪು ವರ್ಣದ ಕಾಂಗರೂಗಳನ್ನೂ ನಾವಿಲ್ಲಿ ನೋಡಬಹುದು.     ತನ್ನ ಹೊಟ್ಟೆಯ ಚೀಲದಲ್ಲಿ ಮರಿಯನ್ನಿಟ್ಟುಕೊಂಡು ಓಡಾಡುವ ಅಮ್ಮ ಕಾಂಗರೂವನ್ನು ನೋಡುವುದೇ ಚೆಂದ.ನಾವು ನೀಡುವ ಕಾಳುಗಳನ್ನು ತಿನ್ನುವ ಆಸೆಗೆ ಅವು
ನಮ್ಮ ಬಳಿ ಬರುತ್ತದೆ.ಮುಂದಿನೆರಡು ಕಾಲುಗಳನ್ನೆತ್ತಿ ತನ್ನ ಹಿಂದಿನ ಎರಡು ಕಾಲಿಗಳಿಂದ ಕುಪ್ಪಳಿಸಿ ನೆಗೆಯುತ್ತಾ ಓಡಾಡುವ ಇದು ಮಕ್ಕಳಿಗೆ ಬಲು ಪ್ರಿಯವಾದ ಪ್ರಾಣಿ.ಪ್ರವಾಸಿಗರಿಗೆ ಕಾಂಗರೂಗಳೆಂದರೆ ವಿಶೇಷ ಆಕರ್ಷಣೆ.ಆಸ್ಟ್ರೇಲಿಯಾದ ಯಾವುದೇ ಪ್ರಾಣಿಸಂಗ್ರಹಾಲಯಕ್ಕೆ ಹೋದರೂ ಇವುಗಳನ್ನು  ಮುಟ್ಟಿ ,ಅವುಗಳ ಚಲನವಲನಗಳನ್ನು ಸಮೀಪದಿಂದ ನೋಡಿ ಆನಂದಿಸಬಹುದು. ಕಾಂಗರೂಗಳು ಶಕ್ತಿಯುತವಾದ ಉದ್ದಪಾದಗಳೊಂದಿಗೆ ದೊಡ್ಡದಾದ ಹಿಂದಿನಕಾಲುಗಳನ್ನು ಹೊಂದಿದೆ. ಮುಂದಿನ ಕಾಲುಗಳು ಚಿಕ್ಕವು.ತನ್ನ ಬಲಿಷ್ಟವಾದ ಬಾಲವನ್ನು ಆಧಾರವಾಗಿಟ್ಟುಕೊಂಡು ಹಿಂದಿನ ಕಾಲುಗಳಿಂದ ನೆಗೆಯುತ್ತಾ ಓಡಾಡುತ್ತವೆ.ಇವುಗಳು ಹುಲ್ಲು,ಕಾಳುಕಡ್ಡಿಗಳನ್ನು ತಿನ್ನುತ್ತವೆ. ಕಾಂಗರೂಗಳು ಒಳ್ಳೆಯ ಈಜುಗಾರರು.ಮರದ ಮೇಲೆ ವಾಸಿಸುವ ಕಾಂಗರೂಗಳೂ ಇಲ್ಲಿವೆಯಂತೆ. ಅವನ್ನು ನೋಡಿ ಆನಂದಿಸುವ ಭಾಗ್ಯ ನಮಗೆ ಸಿಗಲಿಲ್ಲ.


ಈ ದೇಶದಲ್ಲೇ ಸರಿಸುಮಾರು ಕಾಂಗರೂಗಳ ಐವತ್ತಕ್ಕೂ ಹೆಚ್ಚು ಪ್ರಭೇದಗಳಿದ್ದವಂತೆ.ಆದಿವಾಸಿಗಳ ಕಾಲದಿಂದ ಹಾಗು ಈಗಲೂ ಸಹ ಇವುಗಳನ್ನು ಮಾಂಸಕ್ಕಾಗಿ ಮತ್ತು ಚರ್ಮಕ್ಕಾಗಿ ಬೇಟೆಯಾಡುತ್ತಿದ್ದುದರಿಂದ ಕಾಂಗರೂಗಳ ಅನೇಕ ಪ್ರಭೇದಗಳನ್ನು ನಾವೀಗ ನೋಡಲೂ ಸಾಧ್ಯವಿಲ್ಲದಂತಾಗಿದೆ.ಇನ್ನುಳಿದಿರುವ ಕೆಲವನ್ನು ಸಂರಕ್ಷಿಸಲು ಅಲ್ಲಿನ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.  

ನಾವು ಕೈರ್ನ್ಸ್  ಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಎರಡೂ ಪಕ್ಕದ ಹುಲ್ಲುಗಾವಲಿನಲ್ಲಿ ಇವುಗಳ ದೊಡ್ಡ ಗುಂಪುಗಳನ್ನು ನೋಡಿ ಆನಂದಿಸಿದೆವು.ಆಸ್ಟೇಲಿಯಾದ ರಾಷ್ಟ್ರ‍ೀಯ ಸಂಕೇತವಾದ ಮತ್ತು ಅಪರೂಪದ ಈ ಪ್ರ‍ಾಣಿಯನ್ನು ಸಂರಕ್ಷಿಸುವುದು ಸರ್ಕಾರದ ಮುಖ್ಯ ಉದ್ದೇಶ. ಇವುಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳ ಹೈವೇಗಳಲ್ಲಿ "ಕಾಂಗರೂ ಕ್ರಾಸಿಂಗ್" ಚಿಹ್ನೆಯ ಬೋರ್ಡುಗಳನ್ನು ಹಾಕಿರುತ್ತಾರೆ. ಆ ಪ್ರದೇಶದಲ್ಲಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ.ಕಾಂಗರೂ ಗುಂಪು ರಸ್ತೆ ದಾಟುವ ತನಕ ವಾಹನ ಚಾಲಕರು ಕಾಯಬೇಕು. ಆದರೂ  ರಸ್ತೆಯನ್ನು ದಾಟುವಾಗ ವಾಹನಗಳಿಗೆ ಸಿಕ್ಕು ಕೆಲವು ಕಾಂಗರೂಗಳು ಸಾವನ್ನಪ್ಪಿದುದನ್ನು ಕಂಡು ನನ್ನ ಮನಸ್ಸಿಗೆ ಖೇದವಾಯಿತು.


ಆಸ್ಟ್ರೇಲಿಯಾದ ರಾಷ್ಟ್ರ ಲಾಂಛನದಲ್ಲಿ ಮತ್ತು  ಆಸ್ಟ್ರೇಲಿಯನ್ ಡಾಲರುಗಳ ಮೇಲೆ ಕಾಂಗರೂ ಚಿತ್ರವನ್ನು ಹಾಕಿ ಈ ಪ್ರಾಣಿಯನ್ನು ಗೌರವಿಸಲಾಗಿದೆ.ಸಾಮಾನ್ಯವಾಗಿ ಇಲ್ಲಿನ ಲೋಗೋಗಳಲ್ಲಿ,ಎಂಬ್ಲಮ್ ಗಳಲ್ಲಿ ಮತ್ತು ಮಕ್ಕಳ ಆಟದ ಸಾಮಾನುಗಳ ಮೇಲೆ  ಕಾಂಗರೂ ಗುರುತುಗಳು ಇದ್ದೇ ಇರುತ್ತವೆ.ಇವೆಲ್ಲವೂ ಆಸ್ಟೇಲಿಯನ್ನರು ಜಗತ್ತಿನಲ್ಲೇ ಅಪೂರ್ವವಾದ ಈ ಪ್ರಾಣಿಯನ್ನು ಗೌರವಿಸುವುದರ ಸಂಕೇತ.  ಒಟ್ಟಿನಲ್ಲಿ ಈ ವಿಶೇಷವಾದ ಪ್ರಾಣಿಯ ಸಂರಕ್ಷಣೆ ಮಾನವನ ಆದ್ಯ ಕರ್ತವ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿದೇಶ ವಿಹಾರ- 7 - Indian Cultural Festival In Australia

                    (ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಚಿಟಿಕಿಸಿ)

ನನ್ನ ಮಗಳು-ಅಳಿಯ ಇರುವ ಟೌನ್ಸ್ವಿಲ್ ನಲ್ಲಿ ವಾಸಿಸುವ ಭಾರತೀಯರೆಲ್ಲ ಒಟ್ಟು ಸೇರಿ ಇಂಡಿಯನ್ ಸೊಸೈಟಿಯನ್ನು ಹುಟ್ಟುಹಾಕಿದ್ದಾರೆ.ಇವರೆಲ್ಲ ವೀಕೆಂಡಿನಲ್ಲಿ ಮತ್ತು ಹಬ್ಬ ಹರಿದಿನಗಳಲ್ಲಿ ಒಂದೆಡೆ ಸೇರುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ಗೌರಿ-ಗಣಪತಿ, ದೀಪಾವಳಿ, ವರಮಹಾಲಕ್ಷ್ಮಿ ಮುಂತಾದ ಹಬ್ಬಗಳನ್ನು ಒಂದೆಡೆ ಸೇರಿ ಆಚರಿಸುತ್ತಾರೆ.ನಮ್ಮ ನಾಡ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಪೂಜೆಯೆಲ್ಲಾ
ಸಾಂಗವಾಗಿ ನೆರವೇರಿದ ನಂತರ ಪ್ರತಿಯೊಬ್ಬರೂ ಮಾಡಿ ತಂದ ಬಗೆಬಗೆಯ ಅಡಿಗೆಯ ರುಚಿಯನ್ನು ಎಲ್ಲರೂ ಸವಿಯುತ್ತಾ ,ಕಲೆತು ಮಾತನಾಡುತ್ತಾ ಹಬ್ಬದ ಸುಖವನ್ನು ಅನುಭವಿಸುವ ಪರಿ ಅನನ್ಯವೆನಿಸಿತು.  ವರ್ಷಕ್ಕೊಮ್ಮೆನಮ್ಮ ಮಹಾನ್ ಸಂಸ್ಕೃತಿಯನ್ನು ಬಿಂಬಿಸುವ ಇಂಡಿಯನ್ ಕಲ್ಚರಲ್ ಫೆಸ್ಟಿವಲ್ ನಡೆಸಿಕೊಂಡು ಬಂದಿದ್ದಾರೆ.

ನಾರ್ತ್ ಕ್ವೀನ್ಸ್ ಲ್ಯಾಂಡ್ ಹಿಂದೂ ಕಮ್ಯುನಿಟಿ ಯವರು ಪ್ರಸ್ತುತ ಪಡಿಸಿದ ’ಅರ್ಪಣ್ - ಒಂದು ಕೊಡುಗೆ" ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದವಕಾಶ ನಮಗೆ ಅಲ್ಲಿದ್ದಾಗ ದೊರಕಿತು. ಇಲ್ಲಿರುವ ನಮ್ಮ ಭಾರತೀಯರು ವರ್ಷಕ್ಕೊಮ್ಮೆ ’ಇಂಡಿಯನ್ ಕಲ್ಚರಲ್ ಫೆಸ್ಟಿವಲ್’ ಅನ್ನು ಆಚರಿಸುತ್ತಾರೆ.ಬೇರೆ ದೇಶದಲ್ಲಿದ್ದರೂ ನಮ್ಮ ಭಾರತೀಯ ಪರಂಪರೆಯನ್ನು ಉಳಿಸಿ-ಬೆಳೆಸುವುದೇ ಅಲ್ಲದೆ ವಿದೇಶಿಯರಿಗೆ ನಮ್ಮ ಭವ್ಯ ಪರಂಪರೆಯನ್ನು ಪರಿಚಯಿಸಬೇಕೆಂಬ ತುಡಿತವನ್ನು ನಾವಿಲ್ಲಿ ಕಾಣಬಹುದು.
ಪ್ರತಿ ದಿನ ತಮ್ಮ ಅನುಕೂಲಕ್ಕಾಗಿ ಬಗೆಬಗೆಯ ಉಡುಗೆಗಳನ್ನು ಧರಿಸುವ ನಮ್ಮ ಹೆಣ್ಣುಮಕ್ಕಳು ಇಂದು ಸೀರೆಯನ್ನು ಮತ್ತು ಗಂಡಸರು ಕುರ್ತಾ ಧರಿಸಿ ಈ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಓಡಾಡುವುದು ಕಂಡುಬಂದಿತು.ಇಲ್ಲಿಗೆ ಆಗಮಿಸಿದವರಿಗೆಲ್ಲಾ, ವಿದೇಶಿಯರಿಗೂ ಸಹ ಹಣೆಗೆ ತಿಲಕವನ್ನಿಟ್ಟು ಆರತಿ ಬೆಳಗಿ ಬರಮಾಡಿಕೊಂಡುದು ನಮ್ಮ ಪರಂಪರೆಯನ್ನು ಬಿಂಬಿಸುತ್ತಿತ್ತು.









ಪ್ರತಿಯೊಂದು ಟೇಬಲ್ಲಿನ ಮೇಲೂ ತಮ್ಮ ಕೈಯಾರೆ ತಯಾರಿಸಿದ ಸುಂದರ ಹೂವಿನ ಬೊಕ್ಕೆಗಳ ಅಲಂಕಾರ ಮನಸೆಳೆಯುವಂತಿತ್ತು.ಎಲ್ಲಾ ಮೇಜುಗಳಿಗೂ ನಂಬರುಗಳನ್ನು ಹಾಕಿ,ಆ ದಿನದ ಕಾರ್ಯಕ್ರಮದ ಪಟ್ಟಿ, ನೀರಿನ ಬಾಟಲುಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರು.ಲಘು ಉಪಹಾರ ಮತ್ತು ತಂಪು ಪಾನೀಯದ ನಂತರ ಆ ಸಂಜೆಯ ಕಾರ್ಯಕ್ರಮಗಳು ಪ್ರಾರಂಭವಾಯಿತು.
 ಇಂಡಿಯಾದಿಂದ ತರಿಸಲಾದ ಅಮೂಲ್ಯವಾದ ಕರಕುಶಲ ವಸ್ತುಗಳ ಮತ್ತು ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನೂ ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮ ನಡೆಯುವ ವೇದಿಕೆಯು ನಮ್ಮ ಭಾರತೀಯತೆಯ ಧ್ಯೋತಕವಾಗಿತ್ತು.ಗಣ್ಯರಿಂದ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸ್ವಾಗತದ ಬಳಿಕ ಹಿಂದೂ ಕಮ್ಯುನಿಟಿಯ ಅಧ್ಯಕ್ಷರಾದ ಶ್ರ‍ೀ ಶಶಿಧರ್ ಅವರಿಂದ ಪ್ರಾಸ್ತಾವಿಕ ನುಡಿಗಳೊಂದಿಗೆ ಕಲಾಪ ಮುಂದುವರೆಯಿತು.ಭಾರತೀಯ ಸಂಗೀತದ ಬಗ್ಗೆ ಪರಿಚಯಿಸುವುದು ಅಂದಿನ ಮುಖ್ಯ ಉದ್ದೇಶ.








ನಿರೂಪಣೆಯಲ್ಲಿ ನಮ್ಮ ದೇಶದ ಶ್ರೀಮಂತಿಕೆಯನ್ನು ಸಾರುವ ಗಾಯನ-ವಾದ್ಯ ಸಂಗೀತ-ನಾಟ್ಯ ಕಲೆಗಳು ಬೆಳೆದು ಬಂದ ದಾರಿ,ಸಂಗೀತ ಸರಸ್ವತಿಯ ಸೇವೆಗಾಗಿ ತಮ್ಮ ಜೀವಿತವನ್ನೇ ಮುಡಿಪಾಗಿಟ್ಟ ವಿದ್ವಾಂಸರುಗಳ ನೆನಪುಗಳನ್ನು ಮಿತೇಶ್ ಮತ್ತು ರಿಚಾ ಮಾಡಿಕೊಟ್ಟರು. ಜೊತೆಗೆ ಇದಕ್ಕೆ ಪೂರಕವಾದ ವೀಡಿಯೋಗಳನ್ನು ತೋರಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.
ಬೆಂಗಳೂರಿನವರಾದ ಈಗ ಸಿಡ್ನಿಯಲ್ಲಿ ನೆಲೆಸಿರುವ ಶ್ರ‍ೀಮತಿ ನಿಖಿಲ ಕಿರಣ್ ಮತ್ತು ಇವರ ಶಿಷ್ಯೆಯಾದ ಪ್ರಿಯಾದತ್ ಇವರಿಂದ ನೃತ್ಯದ ಜೊತೆಗೆ ಟೌನ್ಸ್ ವಿಲ್ ನಲ್ಲಿ ಕರ್ನಾಟಕ ಸಂಗೀತಪಾಠವನ್ನು ಕಲಿಸುತ್ತಿರುವ ಶ್ರೀಮತಿ ನಿತಾ ಫ್ರಾನ್ಸಿಸ್ ರವರಿಂದ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ನಿಖಿಲ ಮತ್ತು ಪ್ರಿಯಾರವರು ಗಣೇಶ ಸ್ತುತಿ,ಶಿವ ಪಂಚಾಕ್ಷರಿ ಶ್ಲೋಕಂ,ಜತಿಸ್ವರಂ,ಶೃಂಗಾರ ಲಹರಿ,ಶ್ರೀರಾಮಚಂದ್ರ ಕೃಪಾಳು ಭಜಮನ  ಮುಂತಾದ ರಸವತ್ತಾದ ಭಾಗಗಳನ್ನು ತಮ್ಮ ಮನಸೆಳೆಯುವ ನೃತ್ಯದ ಮೂಲಕ ಪ್ರಸ್ತುತಪಡಿಸಿದರು.ನಿಖಿಲ ಕಿರಣ್ ರವರು ಕನ್ನಡ ಮತ್ತು ಸಂಸ್ಕೃತದ ಶ್ಲೋಕಗಳಿಗೆ ನೃತ್ಯ ಸಂಯೋಜನೆ ಮಾಡಿರುವುದು ವಿಶೇಷವೆನಿಸಿತು.ತಮ್ಮ ವೈವಿಧ್ಯವಾದ ಭಾವಾಭಿನಯದಿಂದ ಇವರಿಬ್ಬರೂ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದರು.

ಇಂಡಿಯಾದಿಂದ ತರಿಸಲಾದ ಅತ್ಯುತ್ತಮ ಕಲಾಕೃತಿಗಳನ್ನು ಹರಾಜು  ಮಾಡಲಾಯಿತು. ಇದರಲ್ಲಿ ಆಸ್ಟ್ರ‍ೇಲಿಯನ್ಸ್ ಉತ್ಸಾಹದಿಂದ ಭಾಗವಹಿಸಿ ಅವುಗಳನ್ನು ಉತ್ತಮ ಡಾಲರಿಗೆ ಕೊಂಡುಕೊಂಡು ನಮ್ಮ ಕಲೆಯ ಬಗ್ಗೆ ತಮಗಿರುವ ಗೌರವವನ್ನು ಪ್ರದರ್ಶಿಸಿದರು.ಈ ರೀತಿಯ ಹರಾಜಿನಲ್ಲಿ ಸಂಗ್ರಹಿಸಿದ ಮೊತ್ತವನ್ನು ಅಲ್ಲಿ ದೇವಾಲಯವನ್ನು ಕಟ್ಟಲು ಉಪಯೋಗಿಸುವ ಆಶಯವನ್ನು ಹಿಂದೂ ಕಮ್ಯುನಿಟಿಯವರು ವ್ಯಕ್ತಪಡಿಸಿದರು. ಆಸ್ಟ್ರೇಲಿಯನ್ನರು ಈ ಎಲ್ಲಾ ಕಾರ್ಯಕ್ರಮಗಳನ್ನೂ ಆಸಕ್ತಿಯಿಂದ ವೀಕ್ಷಿಸಿ ನಮ್ಮ ಮೆಚ್ಚುಗೆಗೆ ಪಾತ್ರರಾದರು.


 ಮುಖ್ಯ ಅತಿಥಿಗಳ ಮೇಜಿನ ಬಳಿಯೇ ಹೋಗಿ ವಂದನಾರ್ಪಣೆಯನ್ನು ಮಾಡಿದುದು ವಿನೂತನವಾಗಿತ್ತು. ಅಂತಿಮವಾಗಿ ರಮಾ ಆಂಟಿಯವರ ನೇತೃತ್ವದಲ್ಲಿ ತಯಾರಿಸಲಾದ ರುಚಿಕಟ್ಟಾದ ಭಾರತೀಯ ಸಂಪ್ರದಾಯದ ಭೋಜನದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಮ್ಮ ಯುವಕ-ಯುವತಿಯರು ಉತ್ಸಾಹದಿಂದ ಭಾಗವಹಿಸಿ,ತಮ್ಮ ಮನೆಯಲ್ಲಿ ಸಮಾರಂಭ ಮಾಡಿದ ಸಂತಸವನ್ನು ಪಡೆದರಲ್ಲದೆ ನಮ್ಮ ದೇಶದಿಂದ ದೂರವಿದ್ದೇವೆಂಬ ಬೇಸರವನ್ನು ಪರಿಹರಿಸಿಕೊಂಡರು ಎಂದು ಹೇಳುವ ಅವಶ್ಯಕತೆಯಿಲ್ಲ.
ನಮಗೆ ಕೂಡ ಈ ಕಾರ್ಯಕ್ರಮಗಳು ತೃಪ್ತಿಯನ್ನು ನೀಡಿದವು.ನಾವು ಎಲ್ಲೇ ಇದ್ದರೂ ನಮ್ಮ ದೇಶ, ನಮ್ಮ ಭಾಷೆ, ನಮ್ಮ ಜನರೊಂದಿಗೆ ಬೆರೆತಾಗ ಸಿಗುವ ಆನಂದಕ್ಕೆ ಮಿಗಿಲಾದದ್ದು ಬೇರೆ ಉಂಟೆ .... ?! ಈ ಸದವಕಾಶಗಳನ್ನು ನಮ್ಮದಾಗಿಸಿಕೊಳ್ಳುವ ಮನಸ್ಸಿದ್ದರೆ ಸಾಕು. ನಾವು ಎಲ್ಲಿದ್ದರೆ ಏನು ಎನ್ನುವ ಭಾವ ನನಗಾಯಿತು.ಕುವೆಂಪುರವರ "ಎಲ್ಲಾದರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು" ನುಡಿಯನ್ನು ಮನ ಸ್ಮರಿಸಿತು.  ಟೌನ್ಸ್ವಿಲ್ ಭಾರತೀಯರ ಅಪೇಕ್ಷೆಯಂತೆ ದೇಗುಲದ ನಿರ್ಮಾಣ ಕಾರ್ಯ ತ್ವರಿತವಾಗಿ ಮುಗಿಯಲಿ ಎಂದು ಆ ಭಗವಂತನಲ್ಲಿ ನಮ್ಮ ಪ್ರಾರ್ಥನೆ.  

    

ವಿದೇಶ ವಿಹಾರ - 6- "ಸೂರ್ಯೋದಯ" ಮತ್ತು "ಚಂದ್ರೋದಯ".


2012-ನೂತನ ವರ್ಷದ ಹಾರ್ಧಿಕ ಶುಭಾಶಯಗಳು 
(ಫೋಟೋಗಳನ್ನು ದೊಡ್ಡದಾಗಿಸಲು ಅದರ ಮೇಲೆ ಚಿಟಿಕಿಸಿ)

ಸೂರ್ಯೋದಯ

"ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೋ
ಸೂರ್ಯೋದಯ ಚಂದ್ರೋದಯ ದೇವರ ದಯೆ ಕಣೋ"
ಎಂದಿದ್ದಾರೆ ನಮ್ಮ ಜಗದ ಕವಿ ಯುಗದ ಕವಿ ಕುವೆಂಪು.
ಸೃಷ್ಟಿಯ ಅದ್ಭುತಗಳನ್ನು ಸವಿಯಲು,ಅದರಲ್ಲಿ ದೇವರನ್ನು ಕಾಣಲು ಸಾಮಾನ್ಯರಾದ ನಮಗೆ ಸುಲಭ ಸಾಧ್ಯವೆ....?

ನನ್ನ ಆಸ್ಟೇಲಿಯಾ ಪ್ರವಾಸದಲ್ಲಿ ನಾನು ಕಂಡ ನಯನ ಮನೋಹರ ದೃಶ್ಯಗಳ ವೈಭವವನ್ನಿಲ್ಲಿ ದಾಖಲಿಸಲೇಬೇಕು.ಟೌನ್ಸ್ವಿಲ್ ನ ಸ್ಟ್ರ್ಯಾಂಡ್ ಬೀಚ್ ನಲ್ಲಿ ಕಂಡ   "ಸೂರ್ಯೋದಯ" ಮತ್ತು ಕ್ರೈನ್ಸ್ ನಿಂದ ಮರಳುವಾಗ ನೋಡಿದ "ಚಂದ್ರೋದಯ"ವನ್ನು ನಾನೆಂದೂ ಮರೆಯಲಾರೆ. ಭೌಗೋಳಿಕವಾಗಿ ನಡೆಯುವ ಈ ಎರಡು ಅಪರೂಪದ ದೃಶ್ಯಗಳನ್ನು ಆನಂದದಿಂದ ಅನುಭವಿಸುವ ಅವಕಾಶ ನಮ್ಮದಾಯಿತು.









ವಿಸ್ತಾರವಾದ,ಅಲೆಗಳ ಆರ್ಭಟವಿಲ್ಲದ, ಹೆಸರಿಗೆ ತಕ್ಕಂತೆ ಪ್ರಶಾಂತವಾಗಿರುವ ಶಾಂತ ಸಾಗರವನ್ನು ನೋಡುವುದೇ ಚೆಂದ. ಮುಂಜಾನೆ ದಿಗಂತದಲ್ಲಿ ಸೂರ್ಯ ಸಮುದ್ರದೊಳಗಿನಿಂದ ಮೇಲೇರಿ ಬರುವ ಅಪೂರ್ವ ದೃಶ್ಯ ಕಣ್ಣಿಗೆ ಹಬ್ಬವೇ ಸರಿ.ಸೂರ್ಯ ಆಗಮಿಸುವ ಸಮಯವಾಯ್ತೆಂದು ಬಾನೆಲ್ಲ ಕೆಂದಾರತಿಯನ್ನಿಡಿದು ಸ್ವಾಗತಕ್ಕೆ ಅಣಿಯಾಯಿತು.ಸಾಗರವೆಲ್ಲಾ ಕೆಂಪಾಗಿ ಭೂಮಿ-ಬಾನಿನ ನಡುವಿನ ಅಂತರವೇ ಕಾಣದಾಯಿತು.ಆಗ ಸುವರ್ಣ ಬಣ್ಣದ ಬೆಳಕು ದಿಗಂತದಲ್ಲಿ ಮೇಲೇರ ತೊಡಗಿದಂತೆ ರಕ್ತ ವರ್ಣದ ಆಗಸ ಚಿನ್ನದ ಬಣ್ಣವಾಗತೊಡಗಿತು.ಸೂರ್ಯನ ರಶ್ಮಿ ನಿಧಾನವಾಗಿ ಜಗತ್ತನ್ನು ತುಂಬತೊಡಗಿತು.ದಿಗಂತದಿಂದ ಮೇಲೇರಿದ ರವಿಯ ಚಿನ್ನದ ಕಿರಣಗಳು ನಮ್ಮನ್ನು ತಾಕಿ ಆನಂದವನ್ನುಂಟು ಮಾಡಿದವು.ಮೋಡದ ವಾತಾವರಣದ ಕಾರಣ ಕನ್ಯಾಕುಮಾರಿಯಲ್ಲಿ ಅನುಭವಿಸಲಾಗದ ದೃಶ್ಯ ವೈಭವದ ಅನುಭವ ಟೌನ್ಸ್ವಿಲ್ ನ ಸ್ಟ್ರ್ಯಾಂಡ್ ಬೀಚ್ ನಲ್ಲಾಯಿತು.    




"ಚಂದ್ರೋದಯ"


ಕೈರ್ನ್ಸ್ ನ ಸುತ್ತಾಮುತ್ತಾ ಪ್ರ‍ೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ವಾಪಾಸು ನಮ್ಮ ಮಗಳು-ಅಳಿಯನ ಊರು ಟೌನ್ಸ್ವಿಲ್ ಗೆ ಹಿಂದಿರುತ್ತಿದ್ದೆವು.ಆ ದಿನ ಸಂಕಷ್ಟ ಹರ ಚತುರ್ಥಿ. ಪ್ರತಿ ತಿಂಗಳೂ ಈ ದಿನ ಉಪವಾಸವಿದ್ದು ಸಂಜೆ ಗಣಪತಿ ಪೂಜೆ ಮಾಡಿ ರಾತ್ರಿ ಚಂದ್ರನನ್ನು ನೋಡುವ ಪದ್ಧತಿ ನನ್ನದು.ರ‍ಾತ್ರಿ ಎಂಟು ಗಂಟೆಯ ವೇಳೆಗೆ ದಾರಿಯಲ್ಲಿ ನಮ್ಮ ಹುಂಡೈ ವ್ಯಾನು ಗಾಳಿಯಲ್ಲಿ ತೇಲಿದಂತೆ ಹೋಗುತ್ತಿತ್ತು. ರಸ್ತೆ ಉಬ್ಬುತಗ್ಗುಗಳಿಲ್ಲದೆ ಸಮನಾಗಿತ್ತು.ನುಣುಪಾದ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದರೆ ಹಾಗೇ ಜೊಂಪು ಬಂದಂತೆ ಆಗುತ್ತಿತ್ತು.ಕನ್ನಡ-ಹಿಂದಿ ಹಾಡುಗಳನ್ನು ಕೇಳುತ್ತಾ ದಾರಿ ಸಾಗುತ್ತಿದ್ದುದೇ ತಿಳಿಯುತ್ತಿರಲಿಲ್ಲ.ಒಂದೇ ದಿನ ೪೫೦-೫೦೦ ಕಿ ಮಿ ಓಡಾಡಿದರೂ ದಣಿವೆನ್ನಿಸಲಿಲ್ಲ.

ನಾನು ಕಿಟಕಿಯಿಂದ ಹೊರಗೆ ಅಷ್ಟೇನೂ ದಟ್ಟವಾಗಿರದ ಕಾಡು, ಮರ-ಗಿಡಗಳನ್ನು ನೋಡುತ್ತಾ ಕುಳಿತಿದ್ದೆ.ರಸ್ತೆಯ ಇಕ್ಕೆಲಗಳಲ್ಲೂ ನಮ್ಮ ಮಲೆನಾಡಿನಷ್ಟು ದಟ್ಟವಾಗಿರದ ಕಾಡು.ನಮ್ಮ ದೇಶದ ಪ್ರಕೃತಿ ಸಂಪತ್ತು ಅಪಾರ.ಅದು ನಮಗೆ ದೇವರಿತ್ತ ವರ.ನಮ್ಮ ದೇಶದಲ್ಲಿನ ಸಮೃದ್ಧವಾದ ಮತ್ತು ವೈವಿಧ್ಯಮಯವಾದ ಸಸ್ಯರಾಶಿಗಳನ್ನಾಗಲೀ, ಪ್ರಾಣಿಪ್ರಪಂಚವನ್ನಾಗಲೀ ಆಸ್ಟೇಲಿಯಾದಲ್ಲಿ ಕಾಣಲು ಸಾಧ್ಯವಿಲ್ಲ. ಅಲ್ಲಿ ನಮ್ಮ ನೀಲಗಿರಿ ಜಾತಿಗೆ ಸೇರಿದ ಮರಗಳೇ ಹೆಚ್ಚು.ಅವು ನೇರವಾಗಿ ಎತ್ತರಕ್ಕೆ ಬೆಳೆದಿರುತ್ತವೆ.ಹಾಗಾಗಿ ಕಾರಿನಲ್ಲಿ ಕುಳಿತು ರಸ್ತೆಯ ಪಕ್ಕಕ್ಕೆ ತುಂಬಾ ದೂರದವರೆಗೆ ದೃಷ್ಠಿಹಾಯಿಸಬಹುದು. ಹಾಗಾಗಿ ದೂರದಲ್ಲಿ ಬಾನು-ಭೂಮಿ ಒಂದಾದ ಅನುಭವ ನನಗಾಗುತ್ತಿತ್ತು. ಮರಗಳ ಮಧ್ಯೆ ದೂರದಲ್ಲಿ ವಸುಂಧರೆಯ ಒಡಲಿನಿಂದ ನಸುಗೆಂಪು ವರ್ಣದ ಆಕೃತಿಯ ತುಣುಕೊಂದು ಗೋಚರವಾದಂತಾಯ್ತು...! ಅರೆ... ಇದೇನು ಎಂದು ಒಂದರೆಕ್ಷಣ ಅಚ್ಚರಿಯಾಯಿತು.ಆದರೆ ತಕ್ಷಣ ತಿಳಿಯಿತು ... ಅದು "ಚಂದ್ರೋದಯ"ವೆಂದು.ನನ್ನ ಕಣ್ಣನ್ನು ಅಲ್ಲಿಂದ ಕದಲಿಸಲಾಗಲಿಲ್ಲ.ಕೊಂಚ ಕೊಂಚವೇ ಮೇಲೇರಿ ಬರುವ ಅರ್ಧ ಚಂದ್ರ ಪೂರ್ಣಚಂದಿರನಾಗುವ ದೃಶ್ಯ ನನ್ನ ಮನಸ್ಸಲ್ಲಿ ಅಚ್ಚಳಿಯದಂತೆ ನೆಲೆ ನಿಂತಿತು.

ಸಾಮಾನ್ಯವಾಗಿ ನಾವು ನಮ್ಮ ಕಾಂಕ್ರಿಟಿನ ನಗರದಲ್ಲಿ ಉದಯಿಸುತ್ತಿರುವ ಚಂದ್ರನ ಸೊಬಗನ್ನು ಕಾಣಲಸಾಧ್ಯ.ನಾವೇನಿದ್ದರೂ ಬಾನೇರಿ ನಿಂತ ಶಶಿಯನ್ನು ನೋಡಿ ತೃಪ್ತಿಪಡಬೇಕು ಅಷ್ಟೆ .
ನೋಡನೋಡುತ್ತಿದ್ದಂತೆ ಮೇಲೇರಿ ಬರುವ ಕಿತ್ತಳೆ ಬಣ್ಣದ ಪೂರ್ಣಚಂದ್ರ‍ನ ರೂಪವನ್ನು ತುಂಬಿಕೊಳ್ಳಲು ನನ್ನೆರಡು ಕಣ್ಣುಗಳು ಸಾಲದಾಯಿತು.ನಿಮಿಷಗಳು ಸರಿದಂತೆ ಬೆಳ್ಳಗೆ ಹೊಳೆಯುವ ತುಂಬುಚಂದಿರ ನಗುತ್ತಾ ಬೆಳದಿಂಗಳನ್ನು ಚೆಲ್ಲುತ್ತಾ ನಮ್ಮ ದಾರಿಗೆ  ಜೊತೆಯಾದ.ಗಣಪನ ಪೂಜೆಗೆ ಮುನ್ನವೇ ಚಂದ್ರ ದರ್ಶನದ ಅಪರೂಪದ ಗಳಿಗೆಯದು. ಅದರಲ್ಲೂ ವಿದೇಶದಲ್ಲಿ ಮೊದಲ ಸಂಕಷ್ಟ ಹರ ಚತುರ್ಥಿ ಆಚರಣೆ ವಿನೂತನವೆನಿಸಿತು. 

ಸೂರ್ಯೋದಯ ಮತ್ತು ಚಂದ್ರೋದಯಗಳಲ್ಲಿ ಆ ಶಿವನನ್ನೇ ಕಂಡ ಕವಿಯ ನುಡಿಗಳು ನನ್ನನ್ನು ಮತ್ತೊಮ್ಮೆ ಭಾವಪರವಶವಾಗುವಂತೆ ಮಾಡಿತು. ಮರೆಯಲಾರದ ರಸಮಯ ಕ್ಷಣಗಳ ಪಾಲು ನನ್ನದಾಯಿತು.