ಪದ ವಿನ್ಯಾಸ -1




          



1


2


3
x
x
4

x
x

x
x
5




x
x
6

7
x
x
x

8

9

x
10
11
x
x
x

x

x
x
x
12
13

14
15


16
x
x
x

x

x
x
x
17
18
x
19



20
x
x
x
21


x
x

22


23
x
x

x
x


x
x
24




































ಎಡದಿಂದ ಬಲಕ್ಕೆ:-

















1  ಕನ್ನಡಿಗರ ನಾಡಹಬ್ಬ (7)





5  ನವೀನತೆಯ ಹುಟ್ಟು (4)





6  ಹಾಡು ಹೇಳಿದ್ದಕ್ಕೆ ಕೊಟ್ಟ ಬಿಲ್ಲೆ (3)




8  ಶಪಿಸಲ್ಪಟ್ಟ ಹೆಂಡತಿ (4)






10  ಸಂಗಡ (2)







12  ಮಧ್ಯದಲ್ಲೇಕೊ ಗರಂ ಆಗಿರುವ ಪ್ರೀತಿಯ ಬಣ್ಣ (4)


15  ಕಾವ್ಯ-ನಾಟಕಗಳಲ್ಲಿ ಬರುವ ಒಂಬತ್ತು ಸಾರ (4)


17  ಮಂಜುಗೆಡ್ಡೆ (2)






19  ಅಂತ್ಯದಲ್ಲಿ ಧೀರ್ಘವಾದ ಕಣಗಲೆ (4)




21  ರಸ ವೇಗವಾಗಿ ಹರಿದಿದೆ (3)





22  ಹಾದಿಯಲ್ಲಿ ತಿರುಗುವವನು ಹಿಂತಿರುಗಿದ್ದಾನೆ (4)


24  ಮಾಸ್ತಿಯವರ ಈ ಕೃತಿಗೆ ಙ್ಞಾನಪೀಠ ಪ್ರಶಸ್ತಿ ಸಂದಿದೆ (2)











ಮೇಲಿನಿಂದ ಕೆಳಕ್ಕೆ :-
















1  ಶಿಲೆಯಲ್ಲಿ ಕೊರೆದಿಟ್ಟ ಬರಹ (6)





2 ನಮ್ಮ ದೇಶದ ಪ್ರಥಮ ಪ್ರಜೆ (4)




3  ಅಡವಿ (2)







4  ಹಾಲಿನಿಂದ ತಯಾರಿಸಿದ ಸಿಹಿಯಾದ ಭಕ್ಷ್ಯ (3)



7 ಕಡ್ಡಿಯೊಂದಿಗಿನ ಕೊಳೆ (2)





9 ಮಾಲೆ ಹಾಕಿ ಅಗೌರವಿಸುವುದಿರಬಹುದೆ? (3)



11 ಶಿವನನ್ನು ಧೀರ್ಘವಾಗಿ ಕರೆಯಿರಿ (2)




13 ಏನೂ ತಿಳಿಯದ ಹಳ್ಳಿಯವನು (3)




14 ಪೂಜ್ಯ ಮಂತ್ರಾಲಯ ನಿವಾಸಿ (6)




16 ಇಲ್ಲಿ ನಿಮ್ಮ ರುಜು ಹಾಕಿ (2)





18 ಸಸಿಯಲ್ಲ ವೃಕ್ಷ (2)






19 ಕನಕ (4)







20 ಮೋಸ ಮಾಡಿ ನಲಿಯುತ್ತಿರುವ ಗಿಲೀಟು (3)



23  ಹಾಸ್ಯಬ್ರಹ್ಮನೆಂದು ಖ್ಯಾತರಾದ ಕನ್ನಡದ ಲೇಖಕರು (2)    



ಚೈತನ್ಯದ ನುಡಿಗಳು - ಅಲ್ಲಿ ಇಲ್ಲಿ ಹೆಕ್ಕಿದ್ದು - ೩


೧. ಬದುಕಿಗೆ ಕ್ರಾಂತಿಯೆಂಬ ಮಳೆಗಾಲವೂ ಬೇಕು
    ಶಾಂತಿಯೆಂಬ ಶರತ್ಕಾಲವೂ ಇರಬೇಕು.

೨. ಒಳಿತು ಬಲಿಷ್ಟವಾಗದೆ ಪ್ರಯೋಜನವಿಲ್ಲ.

೩. ವಾಸ್ತವದಲ್ಲಿ ಎಲ್ಲದರಲ್ಲೂ ಸ್ವಲ್ಪ ಅಸತ್ಯ ತುಂಬಿರುತ್ತದೆ.
    ಹೆಚ್ಚಿನ ಪ್ರಯೋಜನಕ್ಕೆ ಸ್ವಲ್ಪವನ್ನು ಕಳೆದುಕೊಳ್ಳಬೇಕಾಗುತ್ತದೆ.
    ಈ ಹೊಂದಾಣಿಕೆ ಜೀವನದಲ್ಲಿ ಮುಖ್ಯ.

೪. ಅಭಿಪ್ರಾಯ ಕೊಡುವಾಗ ಸತ್ಯವಿರಲಿ,ನಿಸ್ವಾರ್ಥವಾಗಿರಲಿ,ನಯವಿರಲಿ ಆದರೆ ಅಹಂಕಾರವಿರಬಾರದು.

೫. ಯೋಗ್ಯಕಾಲದಲ್ಲಿ ಯೋಗ್ಯ ನಿರ್ಣಯ ತೆಗೆದುಕೊಂಡು ತತ್ ಕ್ಷಣ ಕಾರ್ಯ ಪ್ರವೃತ್ತರಾಗುವುದು ಜಾಣರ ಲಕ್ಷಣ.

೬. ನಿಸ್ವಾರ್ಥತೆ ಮತ್ತು ಧೀಮಂತಿಕೆ ಯೋಗ್ಯ ನಿರ್ಣಯ ಕೈಗೊಳ್ಳಲು ಇರಬೇಕಾದ ಗುಣಗಳು.

೭. ಜಾಣರ ದುಷ್ಟತನ ಮತ್ತು ದುಷ್ಟರ ಧೀಮಂತಿಕೆ ಅಪಾಯ.

೮. ಕಿವಿಗೆಟುಕದ ಶಬ್ದ,ನಾಲಿಗೆಗೆಟುಕದ ಸವಿ,ಕಣ್ಣಿಗೆಟುಕದ ಬೆಳಕು ಅನುಪಯುಕ್ತ.

೯. ಮನಸ್ಸಿಗೆ ಅಂಟಿಕೊಂಡವರು ಎಲ್ಲದಕ್ಕೂ ಅಂಟಿಕೊಂಡಂತೆ.

೧೦ .ರೂಪಕ್ಕಿಂತ ಸ್ವರೂಪ (ಸಹಜವಾದ ಗುಣ-ಸ್ವಭಾವ)ಕ್ಕೆ ಬೆಲೆ ಕೊಡಬೇಕು.

ಕಾವ್ಯದಲ್ಲಿ ಪದ ಚಮತ್ಕಾರ


ನನ್ನ ಸಹೋದ್ಯೋಗಿಯೊಬ್ಬರಿಂದ ತಿಳಿದ ಈ ಸಂಸ್ಕೃತ ಪದ್ಯವನ್ನು ನನ್ನ ಬ್ಲಾಗ್ ನಲ್ಲಿ ಉಲ್ಲೇಖಿಸಲು ನನಗೆ ಸಂತಸವೆನಿಸುತ್ತಿದೆ.ಈ ಪದ್ಯದಲ್ಲಿರುವ ಅಕ್ಷರಗಳ ಚಮತ್ಕಾರ ವನ್ನು ಕಂಡು ವಿಸ್ಮಿತಳಾಗಿದ್ದೇನೆ. ನಾಲ್ಕು ಸಾಲಿನ ಈ ಕಾವ್ಯದಲ್ಲಿ ಹರಿಹರರಿಬ್ಬರ ವರ್ಣನೆಯೂ ಇದೆ. ಪ್ರತಿ ಪದದ ಮೊದಲ ಅಕ್ಷರ ಸೇರಿಸಿ ಓದಿದರೆ ಶಿವನ ಸ್ತುತಿಯಾದರೆ, ಮೊದಲ ಅಕ್ಷರವನ್ನು ಬಿಟ್ಟು ಓದಿದರೆ ವಿಷ್ಣುವಿನ ವರ್ಣನೆಯಾಗುತ್ತದೆ. ಇಂಥಹ ಪದ್ಯ ರಚನೆ ಕವಿಯ ಪಾಂಡಿತ್ಯವನ್ನು ಎತ್ತಿ ತೋರುತ್ತದೆ.  ಇದರ ಸೊಬಗನ್ನು ನೀವೂ ಸವಿಲೆಂಬುದೇ ನನ್ನ ಆಶಯ.  ಇದೇ ರೀತಿಯ ಬೆರಗಿನ ಕಾವ್ಯಗಳು ನಿಮಗೆ ತಿಳಿದಿದ್ದರೆ ನನ್ನೊಂದಿಗೆ ಹಂಚಿಕೊಳ್ಳಿ.

"ಪಾಯಾತ್, ಕುಮಾರಜನಕ ಶಶಿಖಂಡಮೌಳಿಃ
 ಶಂಖಪ್ರಭಶ್ಚ ನಿಧನಶ್ಚ ಗವೀಶಯಾನಃ
 ಗಂಗಾಂಚ ಪನ್ನಗಧರಶ್ಚ ಉಮಾವಿಲಾಸಃ
 ಆದ್ಯಕ್ಷರೇಣ ಸಹಿತೋ ರಹಿತೋಪಿ ದೇವಃ"


ಈ ಪದ್ಯದ ಅರ್ಥ ಹೀಗಿದೆ:

ಪಾಯಾತ್ - ಕಾಪಾಡು
ಕುಮಾರಜನಕ - ಶಿವ,  ಮಾರಜನಕ - ವಿಷ್ಣು
ಶಶಿಖಂಡಮೌಳಿಃ - ಚಂದ್ರನನ್ನು ಧರಿಸಿದವನು
ಶಿಖಂಡಮೌಳಿಃ - ನವಿಲುಗರಿ ಧರಿಸಿದವನು
ಶಂಖಪ್ರಭಶ್ಚ - ಬಿಳಿ, ಹಿಮಾಲಯವಾಸಿ,ಕೈಲಾಸವಾಸಿ
ಖಪ್ರಭಶ್ಚ - ನೀಲಿ ಬಣ್ಣದವನು (ಖ-ಆಕಾಶ)
ನಿಧನಶ್ಚ - ಲಯಕಾರಕ, ಧನಶ್ಚ - ಲಕ್ಷ್ಮೀಪತಿ
ಗವೀಶಯಾನಃ - ಬಸವವಾಹನ,  ವೀಶಯಾನಃ - ಪಕ್ಷಿವಾಹನ
ಗಂಗಾಂಚ - ಗಂಗೆಯ ಒಡೆಯ, ಗಾಂಚ -ಗೋವುಗಳನ್ನು ಕಾದವನು
ಪನ್ನಗಧರಶ್ಚ - ಹಾವನ್ನು ಧರಿಸಿದವನು, ನಗಧರಶ್ಚ - ಗಿರಿಧರ
ಉಮಾವಿಲಾಸಃ - ಶಿವ, ಮಾವಿಲಾಸಃ - ವಿಷ್ಣು (ಮಾ-ರಮಾ)
ಆದ್ಯಕ್ಷರೇಣ ಸಹಿತೋ ರಹಿತೋಪಿ ದೇವಃ - ಪ್ರಥಮಾಕ್ಷರ ಸಹಿತವೂ ರಹಿತವೂ ಆದ ದೇವನೇ ಕಾಪಾಡು.

(ಚಿತ್ರಕೃಪೆ - ಅಂತರ್ಜಾಲ)

ರಸಪ್ರಶ್ನೆ- 1 ರ ಉತ್ತರಗಳು


ಒಗಟುಗಳು:
1. ದೀಪ.
2. ಭೂಮಿ.
3. ನದಿ.
4. ಸೀತಾಫಲಹಣ್ಣು
5. ನವಿಲು
6. ಕಪ್ಪೆ.
7. ನೇರಳೆ ಹಣ್ಣು
8. ಛತ್ರಿ
9. ದಾಳಿಂಬೆ
10.ಎಳನೀರು ಅಥವ  ತೆಂಗಿನಕಾಯಿ

ಗಾದೆಗಳು:
1.ತೂತು ಒಲೆ ಕೆಡಿಸಿತು.
2.ಪೂಜಾರಿಗೊಂದು ಎದ್ದ ಕಲ್ಲು.
3.ನೆರೆಗೆ ನಿಂದಕರು ಬೇಕು.
4.ದಳವಾಯಿ ದೊರೆಯಲ್ಲ.
5.ಕಳೆ ಹೆಚ್ಚಿದ ಹೊಲ ಹಾಳು.
6.ಕೆಲಸದಲ್ಲಿ ಕಳ್ಳಿ.
7.ಹರಟೆಗೆ ಹಿಡಿತವಿಲ್ಲ.
8.ನಂದಿಯಂತೆ ಮೂರುವರ್ಷ ಬಾಳುವುದು ಲೇಸು.
9.ಬಿಡು ಅಂದ್ರೆ ಹಾವಿಗೆ ಕೋಪ.
10.ನೆಂಟ ಮನೆಗೆ ಮಾರಿ.

ನುಡಿಗಟ್ಟುಗಳು:
1. ಆನಂದಪಡು, ಜಂಬಪಡು.
2. ಬಹಳ ಕುತೂಹಲದಿಂದಿರು, ಬಹಳ ಕಾತರದಿಂದಿರು.
3. ಯಾಚಿಸು, ಧೈನ್ಯದಿಂದ ಕೇಳು.
4. ಸಂಕುಚಿತ ವಿಚಾರವುಳ್ಳ, ಲೋಕಾನುಭವವಿಲ್ಲದ.
5. ಹೊಣೆ ಹೊರಿಸು.
6. ತಿರಸ್ಕಾರ ತೋರಿಸು.
7. ಅವಮಾನ ಮಾಡು.
8. ಬಹಳ ಅನುಭವಶಾಲಿ.
9. ಮೋಸ ಪಡಿಸು, ಕಷ್ಟ ಕೊಡು.
10.ಬಹಳ ಯಾತನೆಯಾಗು.

ರಸಪ್ರಶ್ನೆ - 1


ಒಗಟುಗಳನ್ನು ಬಿಡಿಸಿ

1. ಅಕ್ಕ ಅಕ್ಕ ಬಾವಿ ನೋಡು
   ಬಾವಿಯೊಳಗೆ ನೀರು ನೋಡು
   ನೀರಿನೊಳಗೆ ಬಳ್ಳಿ ನೋಡು
   ಬಳ್ಳಿಗೊಂದು ಹೂವು ನೋಡು

2. ಬಡಗಿ ಮಾಡಿದ ಬಂಡಿಯಲ್ಲ
   ಮನುಷ್ಯ ಮಾಡಿದ ಯಂತ್ರವಲ್ಲ
   ಒಂದು ನಿಮಿಷವೂ ಪುರುಸೊತ್ತಿಲ್ಲ

3 .ಕಾಲಿಲ್ಲದೆ ನಡೆಯುವೆನು
   ಬಾಯಿಯಿಲ್ಲದೆ ನುಡಿಯುವೆನು
   ಓಡಿ ಓಡಿ ನನ್ನ ಊರು ಸೇರುವೆನು

4. ಹಸಿರು ಕೋಟೆ
   ಅದರೊಳಗೆ ಬಿಳಿಯ ರಾಜ
   ಕದ ತೆರೆದರೆ ಬರುತ್ತಾರೆ ಕರಿ ಸೈನಿಕರು

5. ಕಂಠದಲಿ ಕಪ್ಪುಂಟು ಕರಿಕಂಠನಲ್ಲ
   ಗಿಂಟದಲಿ ಜುಟ್ಟುಂಟು ವಿಪ್ರ ತಾನಲ್ಲ
   ಮೈಯ್ಯಲ್ಲಿ ಕಣ್ಣುಂಟು ದೇವೇಂದ್ರನಲ್ಲ

6. ಬಾಲವಿಲ್ಲದ ಬಜಾರಿ
   ನಾಕ್ಕಾಲಿನ ಕಠಾರಿ
   ನೀರಿನಲ್ಲಿರುವ ಸಿಂಗಾರಿ
   ಇದ ಹೇಳ್ದೋರ್ಗೆ ಚಿನ್ನದ ಕಠಾರಿ

7. ಹುಟ್ಟುತ್ತಲೆ ಹಸುರುಂಟು ಪಚ್ಚೆ ತಾನಲ್ಲ
   ಬೆಳೆಯುತ್ತಲೆ ಕೆಂಪುಂಟು ನವರತ್ನವಲ್ಲ
   ಕಡೆಕಡೆಗೆ ಕಪ್ಪುಂಟು ಕಸ್ತೂರಿಯಲ್ಲ
   ಇದ ಹೇಳಬಲ್ಲ ಜಾಣರಿಗೆ ಅರಿಯದೇ ಇಲ್ಲ

8. ಮೊಗ್ಗರಳಿ ಹೂವಾಗಿ ಪುಷ್ಪ ತಾನಲ್ಲ
   ಹಿಗ್ಗಲಿಸಿ ನೋಡಿದರೆ ಪರಿಮಳವೆ ಇಲ್ಲ

9. ಚಿಕ್ಕ ಚಿಕ್ಕ ಪೆಟ್ಟಿಗೆ
   ಚಿನ್ನದ ಪೆಟ್ಟಿಗೆ
   ಮುಟ್ಟಿ ತೆಗೆದರೆ ಮುನ್ನೂರು ಪೆಟ್ಟಿಗೆ

10. ಕುಂಬಾರ ಮಾಡಿದ ಮಡಿಕೆಯೇನಾಗಲಿಲ್ಲ
     ಅಗಸ ಬಟ್ಟೆ ಒಗೆಯುವ ಮಡುವಾಗಲಿಲ್ಲ
     ಸೂರ್ಯ ನೋಡಿದ ನೀರಾಗಲಿಲ್ಲ
     ಹಾಗಾದರೆ ನಾನ್ಯಾರು?

ಗಾದೆಗಳ ಮೊದಲ ಭಾಗವನ್ನು ಕೊಡಲಾಗಿದೆ. ಮೊದಲ ಭಾಗವನ್ನು ಪುಷ್ಠೀಕರಿಸುವಂತಿರುವ ಮುಂದಿನ ಭಾಗವನ್ನು ತಿಳಿಸಿ.

1.ಮಾತು ಮನೆ ಕೆಡಿಸಿತು. _________________________.
2.ಅಗಸನಿಗೊಂದು ಬಿದ್ದ ಕಲ್ಲು. ________________________.
3.ಊರಿಗೆ ಹಂದಿ ಬೇಕು. _____________________________.
4.ಎಳೆಗರು ಎತ್ತಲ್ಲ. _________________________________.
5.ಕಪಿ ಹೆಚ್ಚಿದ ತೋಟ ಹಾಳು. ________________________.
6.ಮಾತಿನಲ್ಲಿ ಮಳ್ಳಿ. ________________________________.
7.ನಾಲಿಗೆಗೆ ನೋವಿಲ್ಲ . _____________________________.
8.ಹಂದಿಯಂತೆ ನೂರುವರ್ಷ ಬಾಳುವುದಕ್ಕಿಂತ _______________________________.
9.ಕೊಲ್ಲು ಅಂದ್ರೆ ಕಪ್ಪೆಗೆ ಕೋಪ. _____________________________.
10.ಕುಂಟೆತ್ತು ಹೊಲಕ್ಕೆ ಮಾರಿ .__________________________________.


ನುಡಿಗಟ್ಟಿನ ಅರ್ಥ ತಿಳಿಸಿ.

1. ಆಕಾಶಕ್ಕೇರು
2. ಒಂಟಿ ಕಾಲಿನ ಮೇಲೆ ನಿಲ್ಲು
3. ಕಾಲು ಕಟ್ಟು
4. ಕೂಪ ಮಂಡೂಕ
5. ತಲೆಯ ಮೇಲೆ ಹಾಕು
6. ಮುಖ ಮುರಿ
7. ಮೂಗಿಗೆ ಸುಣ್ಣ ಹಚ್ಚು
8. ಏಳು ಕೆರೆ ನೀರು ಕುಡಿದವ
9. ಚಳ್ಳೆ ಹಣ್ಣು ತಿನ್ನಿಸು
10. ಕಣ್ಣಲ್ಲಿ ರಕ್ತ ಬರು

ಎಳ್ಳುಬೆಲ್ಲವ ಮೆಲ್ಲೋಣ.. ಒಳ್ಳೊಳ್ಳೆಯ ಮಾತನಾಡೋಣ....


ಮಕರ ಸಂಕ್ರಾಂತಿ, ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗಂತೂ ಸಂಭ್ರಮದ ದಿನ.ಹೊಸ ಬಟ್ಟೆ ಧರಿಸಿ,ಅಲಂಕರಿಸಿಕೊಂಡು ಮನೆಮನೆಗೆ ಎಳ್ಳು ಬೀರುವ ಸಡಗರದ ದಿನ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯಲ್ಲಿದ್ದ ಪ್ರತಿಯೊಂದು ಮನೆಗೂ ಎಳ್ಳು ಬೀರುತ್ತಿದ್ದೆವು. ಅದು ಸಂಮೃದ್ಧಿಯ ದಿನಗಳು.ಈಗಿನ ತುಟ್ಟಿ ಕಾಲದಲ್ಲಿ ತಾವಿರುವ ಬಡಾವಣೆಯ ಎಲ್ಲಾ ಮನೆಗಳಿಗೂ ಎಳ್ಳು ಬೀರುವುದೆಂದರೆ ಮಧ್ಯಮ ವರ್ಗದವರಿಗೆ ಸ್ವಲ್ಪ ಭಾರವೇ ಸರಿ. ಹಾಗೆಂದು ಮಕ್ಕಳ ಉತ್ಸಾಹಕ್ಕೆ ತಣ್ಣೀರೆರೆಚುವ ಹಾಗಿಲ್ಲವಲ್ಲ. ಹಾಗಾಗಿ ತುಂಬಾ ಆತ್ಮೀಯರಾದವರಿಗೆ ಮತ್ತು ಅಕ್ಕಪಕ್ಕದವರಿಗೆ ಮಾತ್ರ ಎಳ್ಳು ಬೀರುವುದನ್ನು ನಾವು ಈಗ  ಕಾಣುತ್ತೇವೆ.  ಅಕ್ಕಪಕ್ಕದ ಮಕ್ಕಳೆಲ್ಲ ಒಂದಾಗಿ ಎಳ್ಳು ಬೀರಲು ಹೊರಟರೂ ತಮಗೆ ಬೇಕಾದವರಿಗೆ (ಮನೆಯಲ್ಲಿ ಅಮ್ಮ ಯಾರ‍್ಯಾರಿಗೆ ಕೊಡಲು ಹೇಳಿರುತ್ತಾರೋ ಆ ಮನೆಗಳಿಗೆ) ಮಾತ್ರ ಎಳ್ಳು ಕೊಡುತ್ತಾರೆ. ಇದು ತಪ್ಪಲ್ಲ.ನನ್ನ ಅನುಭವಕ್ಕೆ ಬಂದ ಒಂದು ಚಿಕ್ಕ ಪ್ರಸಂಗವನ್ನಿಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ.

ಸಂಕ್ರಾಂತಿಯ ಒಂದು ದಿನ ನನ್ನ ಪರಿಚಿತರ ಮಗಳು ಎಳ್ಳುಬೀರಲು ಬಂದಳು. ಎಂದಿನಂತೆ ಎಳ್ಳಿನ ವಿನಮಯವಾಯ್ತು. ’ಬರ್ತೀನಿ ಆಂಟಿ’ ಎಂದು ಹೊರಟವಳನ್ನು ಗೇಟಿನವರೆಗೆ ಬೀಳ್ಕೊಡಲು ಹೊರಟಾಗ,ಅವಳ ಜೊತೆಗೆ ಬಂದ ಅವಳ ಗೆಳತಿಯೊಬ್ಬಳು ಹೊರಗೆ ಕಾಯುತ್ತಾ ನಿಂತಿದ್ದಳು.ಅವಳ ಲಿಸ್ಟ್ ನಲ್ಲಿ ನಮ್ಮ ಮನೆ ಇರಲಿಲ್ಲ ಅಂತ ಕಾಣುತ್ತೆ(ಆ ಹುಡುಗಿಯೂ ನನಗೆ ಪರಿಚಿತಳೆ). ಆಗ ನಾನು ’ಯಾಕಮ್ಮಾ ಹೊರಗೇ ನಿಂತೆ, ಬಾ ಒಳಗೆ’ ಎಂದರೆ , ಅವಳು ’ಇಲ್ಲ ಆಂಟಿ’ ಎಂದು ಬರಲೊಪ್ಪಲಿಲ್ಲ.ಆಗ ನಾನು ಎಳ್ಳಿನ ಕವರನ್ನು ಅಲ್ಲೇ ಕೊಟ್ಟು ಕಳುಹಿಸಿದೆ.

ಆ ಹುಡುಗಿ ಹೊರಗೆ ನಿಂತಿರುವ ಬದಲು ತನ್ನ ಸ್ನೇಹಿತೆಯೊಂದಿಗೆ ಒಳಗೆ ಬಂದು ಶುಭಾಶಯಗಳನ್ನು ಹೇಳಬಹುದಿತ್ತು.ಎಳ್ಳು ಕೊಡಲು ಮಾತ್ರ ಮನೆಯೊಳಗೆ ಬರಬೇಕೆಂಬುದೇನಿಲ್ಲ. ಆಕಸ್ಮಿಕವಾಗಿ ನಾನು ಕಂಡಾಗಲಾದರೂ ಬಂದು ವಿಶ್ ಮಾಡಬಹುದಿತ್ತು.ಹಿರಿಯರಾದ ನಾವು ನಮ್ಮ ಮಕ್ಕಳಲ್ಲಿ ಸಮಯಪ್ರಜ್ಞೆ ಮತ್ತು ಸೌಜನ್ಯಯುತ ನಡವಳಿಕೆಯ ಬಗ್ಗೆ ತಿಳಿಹೇಳುವ ಅಗತ್ಯವಿದೆ.ಇಲ್ಲದಿದ್ದರೆ ಇಂತಹ ಚಿಕ್ಕಪುಟ್ಟ ವಿಷಯಗಳು ಇನ್ನೊಬ್ಬರನ್ನು ಮುಜುಗರಕ್ಕೀಡು ಮಾಡಿಬಿಡುತ್ತವೆ. ಎಳ್ಳುಬೆಲ್ಲವ ಮೆಲ್ಲೋಣ ಒಳ್ಳೊಳ್ಳೆಯ ಮಾತನಾಡೋಣ ಎಂಬುದೇ ಸಂಕ್ರಾಂತಿ ಹಬ್ಬದ ಆಶಯ.ಹಬ್ಬದ ಉದ್ದೇಶವರಿತು ಆಚರಿಸಿದರೆ ಒಳ್ಳೆಯದು. ಒಂದು ಮಗು ಎಳ್ಳು ಕೊಟ್ಟು ಮಿಕ್ಕವರೆಲ್ಲಾ ಶುಭಾಶಯ ಹೇಳುವದು ಒಂದು ಒಳ್ಳೆಯ ಸಂಪ್ರದಾಯವೇ.ಇದನ್ನು ನಾವೂ ಕಲಿತು, ನಮ್ಮ ಮಕ್ಕಳಲ್ಲಿಯೂ ಬೆಳೆಸುವುದು ಇಂದಿನ ದಿನಗಳಲ್ಲಿ ಅವಶ್ಯಕ ಕೂಡ.

’ಪುಟ್ಟ ಮಕ್ಕಳೇ ಬನ್ನಿ
 ಸ್ನೇಹಿತರನ್ನೂ ಕರೆತನ್ನಿ
 ಶುಭಾಶಯಗಳು ನಿಮಗೆನ್ನಿ’

"ಸರ್ವರಿಗೂ ನೂತನ ವರ್ಷದ
ಮತ್ತು
ಮಕರ ಸಂಕ್ರಾಂತಿಯ ಶುಭಾಶಯಗಳು"

’ಹ’ಕಾರಕ್ಕೆ ಹೂಂಗುಟ್ಟುವಿರಾ?

ಹೊಸನಗರದ ಹತ್ತಿರ ಹಾಲ್ಕೊಳವೆಂಬುದೊಂದು ಹೋಬಳಿ. ಹಳ್ಳಿಯ ಹಾಡಿಯಲ್ಲೊಂದು ಹಟ್ಟಿಯಿತ್ತು.ಹಟ್ಟಿ ಹನುಮಪ್ಪನದು. ಹನುಮಪ್ಪನ ಹೆಂಡತಿ ಹೂವಮ್ಮ.ಹನುಮಪ್ಪನೊಬ್ಬ ಹಾಲಿಗನಾಗಿದ್ದನು (ಬೇಸಾಯಗಾರ).ಹನುಮಪ್ಪನ ಹುಟ್ಟೂರಿದೆಯಾಗಿತ್ತು.ಹನುಮಪ್ಪ-ಹೂವಮ್ಮರಿಗೊಬ್ಬಳು ಹೆಣ್ಣುಮಗಳಿದ್ದಳು.ಹೆಸರು ಹೇಮಾವತಿಯೆಂದು.ಹೇಮಾ ಹದಿಹರೆಯದ ಹುಡುಗಿ, ಹಸನ್ಮುಖಿ.ಹನುಮಪ್ಪ, ಹೂವಮ್ಮ,ಹೇಮರು ಹಾಳು ಹರಟೆಗಾರರಲ್ಲ. ಹೊತ್ತು ಹುಟ್ಟುವ ಹೊತ್ತಿಗೆ ಹಾಸಿಗೆಯಿಂದೆದ್ದು ಹೊಲ-ಹೈನುಗಾರಿಕೆಯೆಂದು ಹೈರಾಣಾಗುತ್ತಿದ್ದರು.


ಹಾಸಿಗೆಯಿಂದೆದ್ದ ಹನುಮಪ್ಪನು ಹೇರಂಬನಿಗೆ ಹಣತೆ ಹಚ್ಚಿ ಹೂವೇರ‍ಿಸುತ್ತಾನೆ. ಹೂವಮ್ಮ ಹಾಕಿಕೊಟ್ಟ ಹಾಲನ್ನು ಹೀರಿ ಹೊಲದೆಡೆಗೆ ಹೋಗುತ್ತಾನೆ. ಹೊಲ ಹನುಮಪ್ಪನ ಹರಕೆಯಿಂದ ಹಚ್ಚ ಹಸಿರಾಗಿತ್ತು. ಹೊಲದ ಹತ್ತಿರವೇ ಹಳ್ಳ ಹರಿಯುತ್ತಿತ್ತು. ಹಳ್ಳವೆಂದೂ ಹಿಂಗಿಹೋಗಿದ್ದಿಲ್ಲ.ಹೊಲದಲ್ಲಿ ಹೂಗಳು-ಹಣ್ಣುಹಂಪಲುಗಳು ಹೇರಳವಾಗಿದ್ದವು.ಹೊಂಬಾಳೆ, ಹೊಂಕೇದಿಗೆ, ಹಳದಿ-ಹರಿಶಿನದ ಹೂಗಳಲ್ಲದೆ ಹಲವಾರು ಹೂಗಳು ಹಾಗು ಹಣ್ಣುಗಳಿದ್ದವು. ಹೂಗಳನ್ನು ಹೆಕ್ಕಿ ಹುವ್ವಿನ ಹೆಡಿಗೆಗೂ ಹಾಗೂ ಹಣ್ಣುಗಳನ್ನು ಹಣ್ಣಿನ ಹೆಡಿಗೆಗೂ ಹಾಕಿಕೊಂಡು ಹನುಮಪ್ಪ ಹಟ್ಟಿಗೆ ಹಿಂದಿರುಗುತ್ತಾನೆ. ಹಬ್ಬದಡಿಗೆಯುಂಡು ಹಸಿವನ್ನು ಹಿಂಗಿಸಿಕೊಂಡು ಹೂ-ಹಣ್ಣು ಹಂಚಲು ಹಳ್ಳಿಹಳ್ಳಿಗೆ ಹೋಗುತ್ತಾನೆ.ಹನುಮಪ್ಪನಿಗೆ ಹಾಲು,ಹೂ-ಹಣ್ಣುಗಳೇ ಹಣಗಳಿಕೆಯ ಹಾದಿಯಾಗಿದ್ದವು.

ಹೊತ್ತಾರೆಯೆದ್ದ ಹೂವಮ್ಮ ಹರಿಸ್ಮರಣೆಗೈದು ಹಟ್ಟಿಯಲ್ಲಿರುವ ಹಸುಗಳಿಂದ ಹಾಲನ್ನು ಹಿಂಡುತ್ತಿದ್ದಳು. ಹಾಗೆಯೇ ಹುಳಿಯನ್ನ,ಹುಯಿಗಡಬು,ಹಾಲುಪಾಯಸ,ಹಾಲುಂಡೆಯೆಂದು ಹಬ್ಬದಡಿಗೆಯನ್ನು ಹನುಮಪ್ಪ, ಹೇಮರಿಗಾಗಿ ಹದಮಾಡಿಡುತ್ತಿದ್ದಳು.ಹನುಮಪ್ಪ ಹೂಬನದಿಂದ ಹೊತ್ತುತಂದ ಹೂಗಳನ್ನು ಹೂಮಾಲೆ, ಹೂಗೊಂಚಲು,ಹೂಹಾರಗಳನ್ನಾಗಿಸಿ ಹರಿವಾಣಗಳಲ್ಲಿ ಹಾಗು ಹೆಡಿಗೆಗಳಲ್ಲಿಡುತ್ತಿದ್ದಳು.ಹುಳುಕಾದ ಹೂಗಳನ್ನು ಹೆಕ್ಕಿ ಹಾಕಿ ಹೊಸತು ಹೂಗಳಿಂದ ಹೂಮಾಲೆಯಾಗುತ್ತಿದ್ದುದು ಹೆಗ್ಗಳಿಕೆಯೆನ್ನಿಸಿತ್ತು. ಹೇಮ- ಹೂವಮ್ಮರೂ ಹೆರಳು ಹಾಕಿಕೊಂಡು ಹೂಗೊಂಡೆಯನ್ನು ಹೆರಳಿಗೇರಿಸಿಕೊಳ್ಳುತ್ತಿದ್ದರು.ಹೂವಮ್ಮ ಹಟ್ಟಿಯಲ್ಲಿಯೇ ಹಾಲು, ಹೂ-ಹಣ್ಣುಗಳನ್ನು ಹಟ್ಟಿಯ ಹತ್ತಿರವಿರುವ ಹಳ್ಳಿಗರಿಗೆ ಹಂಚಿ ಹಣಗಳಿಸುತ್ತಿದ್ದಳು.

 ಹೇಮ ಹಳ್ಳಿಯ ಹೆಣ್ಣುಮಕ್ಕಳಿಗೆಲ್ಲ ಹಾಡು-ಹಸೆ ಹೇಳಿಕೊಡುತ್ತಿದ್ದಳು. ಹಳ್ಳಿಯ ಹೆಣ್ಣುಮಕ್ಕಳಿಗೆಲ್ಲ ’ಹೇಮಕ್ಕ’ನೆಂದೇ ಹೆಸರಾಗಿದ್ದಳು. ಹೆಣ್ಣುಮಕ್ಕಳನ್ನು ಹುರಿದುಂಬಿಸಲು, ಹಿತೋಪದೇಶ ಹೇಳಲು ಹೇಮ ಹಿಂಜರಿಯುತ್ತಿರಲಿಲ್ಲ. ಹಳ್ಳಿ ಹೈಕಳಿಗೆ ಹಿಂದಿ ಹೇಳಿಕೊಡುತ್ತಿದ್ದಳು.


ಹತ್ತಾರು ಹಳ್ಳಿಯ ಹೆಂಗೆಳೆಯರ ಹೆರಳಿನಲಂಕಾರಕ್ಕೆ, ಹೂಮುಡಿಯಲು ಹೂವಮ್ಮನ ಹೂದಂಡೆಯಿರಬೇಕು. ಹರಿ,ಹರ,ಹೇರಂಬರಿಗೆ ಹೂಮಾಲೆ ಹಾಕಲು ಹನುಮಪ್ಪನ ಹಟ್ಟಿಯಿಂದಲೇ ಹೂವನ್ನು ಹೊತ್ತೊಯ್ಯುತ್ತಿದ್ದರು. ಹೊಸಮನೆಗೆ ಹಾಲುಕ್ಕಿಸಲು ಹನುಮಪ್ಪ,ಹೂವಮ್ಮರ ಹೂ, ಹಣ್ಣು,ಹಾಲು ಹೋಗುತ್ತಿತ್ತು. ಹಬ್ಬಹರಿದಿನಗಳಿರಲಿ, ಹೂವೀಳ್ಯವಿರಲಿ ಹನುಮಪ್ಪನ ಹೊಲದ ಹೂಹಣ್ಣಿಗೆ ಹಳ್ಳಿಗರೆಲ್ಲ ಹಾತೊರೆಯುತ್ತಿದ್ದರು. ಹಳ್ಳಿಯ ಹೆಗ್ಗಡೆ,ಹೆಗ್ಗಡಿತಿಯರೂ ಹೂ-ಹಣ್ಣಿಗಾಗಿ ಹನುಮಪ್ಪನನ್ನು ಹುಡುಕುತ್ತಿದ್ದುದು ಹೆಚ್ಚುಗಾರಿಕೆಯಾಗಿತ್ತು .

ಹನುಮಪ್ಪ,ಹೂವಮ್ಮ, ಹೇಮರು ಹಳ್ಳಿಯ ಹಾಗು ಹಳ್ಳಿಗರ ಹಿತಚಿಂತಕರಾಗಿದ್ದರು. ಹುರುಪು, ಹುಮ್ಮಸ್ಸಿಗೆ ಹೆಸರುವಾಸಿಯಾಗಿದ್ದರು.ಹೂವಿಗಾಗಲಿ, ಹಾಲಿಗಾಗಲಿ ಹೆಚ್ಚಿನ ಹಣ ಹೇಳಿ ಹಳ್ಳಿಗರಿಗೆ ಹೊರೆಯಾಗದಂತೆ ಹೃದಯವಂತಿಕೆ ಹರಿಸುತ್ತಿದ್ದರು.ಹನುಮಪ್ಪ,ಹೂವಮ್ಮರ ಹಟ್ಟಿ ಹಳ್ಳಿಯವರೆಲ್ಲಾ ಹಾಡಿ ಹೊಗಳುವಂತಿತ್ತು. ಹಾಗೆಂದೇ ಹಳ್ಳಿಯವರಿಗೆಲ್ಲ ಹತ್ತಿರವಾಗಿದ್ದರು.

(ಯಾವುದಾದರೊಂದು ಆಕ್ಷರದ ಗುಣಿತಾಕ್ಷರಗಳನ್ನುಪಯೋಗಿಸಿ ನೀವೂ ಕತೆ,ಕವನ,ಲೇಖನವನ್ನು ಬರೆಯಲು ಪ್ರಯತ್ನಿಸಬಾರದೇಕೆ?)