ದೇವಿಗಿರಿ ಅಥವಾ ದೇವೀರಮ್ಮ ಬೆಟ್ಟ


ಪಶ್ಚಿಮ ಘಟ್ಟ ಪರ್ವತ ಪ್ರದೇಶದ ಚಂದ್ರದ್ರೋಣ ಪರ್ವತ ಶ್ರೇಣಿಯ ಮೂರು ಮುಖ್ಯ ಬೆಟ್ಟಗಳೆಂದರೆ ಮುಳ್ಳಯ್ಯನಗಿರಿ,ದೇವಿಗಿರಿ ಮತ್ತು ಬಾಬಾಬುಡಾನಗಿರಿ.ಇದರಲ್ಲಿ ಮುಳ್ಳಯ್ಯನಗಿರಿ ಕರ್ನಾಟಕದಲ್ಲಿಯೇ ಅತೀ ಎತ್ತರವಾದ ಬೆಟ್ಟ ಎಂದು ಪ್ರಸಿದ್ಧಿ ಪಡೆದಿದೆ. …!!ಬಾಬಾಬುಡಾನಗಿರಿಯಲ್ಲಿ ಪ್ರಸಿದ್ಧವಾದ ದತ್ತಪೀಠವಿದೆ. ಇದರಲ್ಲಿ ದೇವಿಗಿರಿಯ ಬೆಟ್ಟದ ತುತ್ತ ತುದಿಯಲ್ಲಿ ಪುರಾತನವಾದ ಮತ್ತು ಬಹಳ ಮಹಿಮೆಯುಳ್ಳ ದೇವಿಯ (ಚಾಮುಂಡೇಶ್ವರಿ) ಗುಡಿ ಇರುವುದರಿಂದ ಈ ಗಿರಿಯು ದೇವಿಗಿರಿ ಅಥವಾ ಜನರ ಆಡುಭಾಷೆಯಲ್ಲಿ “ದೇವೀರಮ್ಮ ಬೆಟ್ಟವೆಂದು ಹೆಸರಾಗಿದೆ. ಒಟ್ಟಿನಲ್ಲಿ ಚಂದ್ರದ್ರೋಣ ಪರ್ವತವು ಚಾರಣಿಗರಿಗೆ ಬಲು ಪ್ರಿಯವಾದ ತಾಣ….!!! 

 ದೇವಿಗಿರಿಯು ಪ್ರಕೃತಿಯ ಸೊಬಗಿಗೆ, ಚಾರಣಕ್ಕೆ ಅಲ್ಲದೇ ಪ್ರಸಿದ್ಧ  ಪುಣ್ಯಕ್ಷೇತ್ರವಾಗಿಯೂ ತನ್ನ ಛಾಪನ್ನು ಮೂಡಿಸಿದೆ….!! ವರ್ಷಕ್ಕೊಮ್ಮೆ ಅಂದರೆ ದೀಪಾವಳಿಯ ನರಕಚತುರ್ದಶಿಯಂದು ಮಾತ್ರ ಬೆಟ್ಟದ ಮೇಲಿರುವ ದೇವಾಲಯದ ಬಾಗಿಲು ತೆರೆದು ಪೂಜೆ ನೆರವೇರಿಸುತ್ತಾರೆ.  ದೇವಿಯು ತುಂಬಾ ಮಹಿಮೆಯುಳ್ಳ  ಮಾತೆ ಎಂಬ ಪ್ರತೀತಿಯಿದೆ. ಅಂದರೆ ಬೆಟ್ಟದ ಮೇಲಿರುವ ಮೂಲ ದೇವಸ್ಥಾನಕ್ಕೆ ವರ್ಷದಲ್ಲಿ ಒಮ್ಮೆ ಮಾತ್ರ ಭಕ್ತರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ  ದೀಪಾವಳಿಯ ನರಕಚತುರ್ದಶಿಯ ಹಿಂದಿನ ದಿನ ಮಧ್ಯರಾತ್ರಿಯಿಂದಲೇ  ಸಾವಿರಾರು ಭಕ್ತರು ಪಾದರಕ್ಷೆರಹಿತವಾಗಿ ಕಾಲ್ನಡಿಗೆಯಲ್ಲಿ ಕಡಿದಾದ ಬೆಟ್ಟವನ್ನೇರಿ, ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.ದೇವಿಯನ್ನು ಭಕ್ತಿಯಿಂದ ಆರಾಧಿಸಿ ತಮ್ಮ ಬೇಡಿಕೆಯನ್ನು ಈಡೇರಿಸಲು ಕೋರುವ ಮತ್ತು ತಮ್ಮ  ಇಷ್ಟಾರ್ಥ ನಡೆಸಿಕೊಟ್ಟ ಮಾತೆಗೆ ಭಕ್ತಿಯಿಂದ ಹರಕೆಯನ್ನು ಒಪ್ಪಿಸುವ ಪರಂಪರೆ ಬಹು ಹಿಂದಿನಿಂದಲೂ ಚಾಲ್ತಿಯಲ್ಲಿದ್ದು, ಇಂದಿಗೂ ಸಹ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ.

 ಹರಕೆ ಇದ್ದವರು ಬೆಟ್ಟವನ್ನೇರಿ ಸೇವೆ ಸಲ್ಲಿಸುತ್ತಾರೆ . ಇಲ್ಲದಿದ್ದರೆ ಹಲವರು ಮನೆಯಲ್ಲಿಯೇ ಆರತಿ ಬೆಳಗಿ ದೇವಿಯನ್ನು ತಪ್ಪದೇ ಸ್ಮರಿಸುತ್ತಾರೆ .ಪ್ರತಿ ದೀಪಾವಳಿಯಲ್ಲಿ, ಮನೆಮನೆಗಳಲ್ಲಿ , ಹೆಣ್ಣುಮಕ್ಕಳು ಚಿಗಣಿ ಮತ್ತು ತಂಬಿಟ್ಟಿನ ಜೋಡಿ  ದೀಪವನ್ನು  ಮಾಡಿ , ದೇವೀರಮ್ಮನ ಹೆಸರಿನಲ್ಲಿ ತುಪ್ಪದಾರತಿ ಬೆಳಗುವ ಮತ್ತು ನಂತರ ಹಿರಿಯರ ಆಶೀರ್ವಾದ ಪಡೆಯುವ ಸಂಪ್ರದಾಯ ಇಂದಿಗೂ ಕೆಲವು ಕಡೆಗಳಲ್ಲಿ ಚಾಲ್ತಿಯಲ್ಲಿದೆ.ಇದರಿಂದ ಹೆಣ್ಣುಮಕ್ಕಳಿಗೆ ಶೀಘ್ರವಾಗಿ ಅಥವ ಸಕಾಲದಲ್ಲಿ ವಿವಾಹ ಮತ್ತು ಸಂತಾನ ಭಾಗ್ಯ ಲಭಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಆಗಿನ ಕಾಲದಲ್ಲಿ ಮೈಸೂರಿನ ಮಹಾರಾಜರು ದೀಪಾವಳಿಯ ದಿನ ಈ ಬೆಟ್ಟದ ಮೇಲಿಂದ ಜ್ಯೋತಿ ಕಂಡ ನಂತರವೇ ಹಬ್ಬವನ್ನು ಆಚರಿಸುತ್ತಿದ್ದರಂತೆ. ಸುಮಾರು ವರ್ಷಗಳ ಹಿಂದೆ ಪ್ರತಿವರ್ಷವೂ ಅರಮನೆಯಿಂದ  ದೇವಿಯ ಸೇವೆಗಾಗಿ ಪೂಜಾ ಪರಿಕರಗಳು.ಎಣ್ಣೆ ಡಬ್ಬಗಳು ಮತ್ತು ಕಾಣಿಕೆ ಪೂರೈಕೆಯಾಗುತ್ತಿತ್ತು ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ. ಈಗ ಈ ದೇವಾಲಯವು ಕರ್ನಾಟಕ ಪುರಾತತ್ವ ಇಲಾಖೆಯ ವಶದಲ್ಲಿದೆ.

ಏಳೆಂಟು ಕಿಲೋಮೀಟರ್ ಬೆಟ್ಟ ಹತ್ತಿ ನಿತ್ಯವೂ ದೇವಿಗೆ ಪೂಜೆ  ಸಲ್ಲಿಸುವುದು ಕಷ್ಟ ಸಾಧ್ಯವಾದ ಕಾರಣ ಈ ಬೆಟ್ಟದ ತಪ್ಪಲಿನ ಬಿಂಡಿಗ-ಮಲ್ಲೇನಹಳ್ಳಿ ಗ್ರಾಮದಲ್ಲಿ ದೇವೀರಮ್ಮ ದೇವಾಲಯವನ್ನು ನಿರ್ಮಿಸಲಾಗಿದೆ. ಇದು ಚಿಕ್ಕಮಗಳೂರಿನಿಂದ ಹದಿನೆಂಟು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಪ್ರತಿನಿತ್ಯವೂ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ  ಈ ದೇವಾಲಯವನ್ನು ಪುನರ್ನಿರ್ಮಾಣ ಮಾಡಲಾಗಿದೆ.ಗಣಪತಿ, ದೇವೀರಮ್ಮ,  ಲಕ್ಷ್ಮೀ ಮತ್ತು ಅನ್ನಪೂರ್ಣೆಶ್ವರಿಯ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ಪ್ರತಿದಿನವೂ ಪೂಜೆಯನ್ನು ಸಾಂಗವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸುತ್ತಮುತ್ತಲಿನಿಂದ ನೂರಾರು ಭಕ್ತರು ದೇವಿಯ ದರ್ಶನಕ್ಕಾಗಿ ಪ್ರತಿದಿನವೂ ಆಗಮಿಸುತ್ತಾರೆ.



ಈ ದೇವಾಲಯದ ಮುಂಭಾಗದಲ್ಲಿ ಒಂದು ಸುಂದರವಾದ ಕೊಳವಿದೆ. ಇಲ್ಲಿ ಗಂಗಾ ಮಾತೆಯ ಗುಡಿಯಿದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಇಲ್ಲಿ ಪೂಜೆಸಲ್ಲಿಸಿ, ಈ ಕೊಳದ ನೀರನ್ನು ಒಂದೆರಡು ಬಿಂದಿಗೆ ಹಾಕಿಸಿಕೊಳ್ಳುವ ಪದ್ಧತಿ ಇಲ್ಲಿದೆ.ಇದರಿಂದ ಒಳ್ಳೆಯದಾಗುತ್ತದೆ ಎಂಬ ಪ್ರತೀತಿಯಿದೆ. ಇಲ್ಲಿ ಜಾತ್ರೆಯ ಸಮಯದಲ್ಲಿ ಕೆಂಡದಾರ್ಚನೆ ಸಹ ನಡೆಯುತ್ತದೆ.

ಪ್ರತಿದಿನ ಮಧ್ಯಾನ್ಹ ಮಹಾಮಂಗಳಾರತಿಯ ನಂತರ ಅನ್ನ ದಾಸೋಹದ ವ್ಯವಸ್ಥೆಯನ್ನು ಸ್ಥಳೀಯರಾದ ಈ ದೇವಸ್ಥಾನದ ಸಮಿತಿಯವರು ಸಮರ್ಪಕವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ದೇವಾಲಯವನ್ನು ಸುತ್ತುವರಿದಿರುವ ಸೊಂಪಾಗಿ ಬೆಳೆದಿರುವ ಅಡಿಕೆ ತೆಂಗಿನತೋಟಗಳು,ಹಸಿರು ಹೊಲಗಳು ಮತ್ತು ಕಣ್ಣಿಗೆ ತಂಪನ್ನೀಯುವ ಅಚ್ಚಹಸಿರಾದ ಗಿರಿಸಾಲುಗಳು ನಮ್ಮ ಮನಸೆಳೆಯುತ್ತವೆ. ಇನ್ನೂ ಕೆಲವು ಸಮಯವನ್ನು ಇಲ್ಲಿಯೇ ಕಳೆಯುವ ಭಾವ ನಮ್ಮಲ್ಲಿ ಸಹಜವಾಗಿಯೇ ಮೂಡಿದರೆ ಅಚ್ಚರಿಯೇನೂ ಇಲ್ಲ…..!! ಈ ಸ್ಥಳಕ್ಕೆ ಭೇಟಿಯಿತ್ತರೆ ದೇವಾಲಯದ ಪ್ರಶಾಂತವಾದ ವಾತಾವರಣದಲ್ಲಿ ಮನಸ್ಸು ಪ್ರಫುಲ್ಲಿತವಾಗುತ್ತದೆ  ಎನ್ನುವುದಂತೂ ಸತ್ಯ….!!

 ದೇವಾಲಯದ ಕೆಲವು ಛಾಯಚಿತ್ರಗಳು......:- 

ಗಣಪತಿ ದೇವಾಲಯ







ಅನ್ನಪೂರ್ಣೇಶ್ವರಿ
ಲಕ್ಷ್ಮೀದೇವಿ






ವಿದೇಶ ವಿಹಾರ - 21 - "ಮಿಲನ" House Warming Ceremony

ನನ್ನ ಮಗಳ ನೂತನ ಮನೆಯ ಗೃಹಪ್ರವೇಶದ ಹೋಮಹವನಾದಿ ಕಾರ್ಯಕ್ರಮಗಳು ಗುರುವಾರ ಬಂದಿದ್ದರಿಂದ ಆತ್ಮೀಯರೆಲ್ಲರಿಗೂ ಬರಲಾಗಿರಲಿಲ್ಲ.ಹಾಗಾಗಿ ಹೊಸ ಮನೆಗೆ ಹೋದ ನಂತರ ಒಂದು ಶನಿವಾರದ ಸಂಜೆ ನಮ್ಮ ಮಗಳು-ಅಳಿಯನ ಸ್ನೇಹಿತರು,ಸಹೋದ್ಯೋಗಿಗಳು ಮತ್ತು ಅಲ್ಲಿನ ಭಾರತೀಯ ಸ್ನೇಹಿತರನ್ನು ಆಹ್ವಾನಿಸಿ House Warming Ceremonyಯನ್ನು ಏರ್ಪಡಿಸಿದ್ದರು.ವಿದೇಶಗಳಲ್ಲಿ ಗೃಹಪ್ರವೇಶ ಕಾರ್ಯಕ್ರಮಕ್ಕೆ  House Warming Ceremony ಎನ್ನುತ್ತಾರಂತೆ. ತಿಂಗಳು ಮುಂಚೆಯೇ ಎಲ್ಲರಿಗೂ ಮೈಲ್ ಮೂಲಕ ಆಮಂತ್ರಣ ಪತ್ರಿಕೆಯನ್ನು ಕಳುಹಿಸಲಾಗಿತ್ತು.

ನಮಗೆ ಹೊಸ ಮನೆಗೆ ಹೋದನಂತರ ಹದಿನೈದು ದಿನಗಳ ಕಾಲಾವಕಾಶ ಸಿಕ್ಕಿದ್ದರಿಂದ ,ಮನೆಯ ಎಲ್ಲಾ ಸಾಮಾನುಗಳನ್ನೂ ವ್ಯವಸ್ಥಿತವಾಗಿ ಜೋಡಿಸಿಕೊಳ್ಳಲು ಅವಕಾಶವಾಯಿತು. 
ನನ್ನ ಮಗಳ ನೇತೃತ್ವದಲ್ಲಿ ಪ್ರತಿಯೊಂದು ವಸ್ತುಗಳೂ ಎಲ್ಲೆಲ್ಲಿಗೆ ಜೋಡಿಸಬೇಕೋ ಅಲ್ಲಲ್ಲಿ ಸಿಂಗಾರಗೊಂಡವು.  Office room, Hall, Dining hall,Kitchen,Bed rooms,Bath rooms, Home Theatre  ಮತ್ತು  Pooja room ಎಲ್ಲವೂ ಅಚ್ಚುಕಟ್ಟಾಗಿ ಸಿದ್ಧಗೊಂಡವು.ಇವಲ್ಲದೆ ಹೊರಗೆ Garden ಮತ್ತು Swimming pool ಸುತ್ತಮುತ್ತಲೂ ಸ್ವಚ್ಛವಾದವು. 

ಮನೆ ಮುಂದೆ ವಿದ್ಯುತ್ ದೀಪಗಳನ್ನು ಬಿಡಲಾಯಿತು.ಒಳಗೆ ಹಾಲ್ ನಲ್ಲಿ ಬಲೂನ್ ಮತ್ತು ಹೂವಿನ ಬೊಕ್ಕೆಗಳನ್ನಿಟ್ಟು ಅಲಂಕರಿಸಲಾಯಿತು. ಭಾರತಾಂಬೆಯ ಮುಂದೆ ದೀಪ  ಬೆಳಗಿಸಿ ಗೌರವಿಸಲಾಯಿತು.
ಬಂದವರು ಹಾಯಾಗಿ ಕುಳಿತುಕೊಳ್ಳಲು Swimming pool ಬಳಿ ಗಾರ್ಡನ್ನಿನಲ್ಲಿ ಕುರ್ಚಿಗಳನ್ನು ಹಾಕಿ ವ್ಯವಸ್ಥೆಗೊಳಿಸಲಾಯಿತು.ಪ್ಯಾಟಿಯೊನಲ್ಲಿ ಬಫೆ(ಊಟ)ಗೆ ಸಿದ್ಧಗೊಳಿಸಲಾಯಿತು.


ಪರ್ತ್ , ಮೆಲ್ಬೋರ್ನ್ ಮತ್ತು ನ್ಯೂಜಿಲ್ಯಾಂಡ್ ನಿಂದ ಸ್ನೇಹಿತರು ಒಂದು ದಿನ ಮೊದಲೇ ಆಗಮಿಸಿದ್ದರು. 
ಭಾರತೀಯರೇ ಅಲ್ಲದೆ ಆಸ್ಟ್ರೇಲಿಯನ್ಸ್,ಅಮೆರಿಕನ್ಸ್,ಚೈನೀಸ್ ಮತ್ತಿತರರು ಸೇರಿದ್ದರಿಂದ ಈ ಕಾರ್ಯಕ್ರಮವು ಒಂದು ರೀತಿ ವಿಶ್ವ ಬ್ರಾತೃತ್ವವನ್ನು ಪ್ರತಿನಿಧಿಸುವಂತಿತ್ತು. ಭಾರತೀಯರಾದ ನಮಗೆ ವಿದೇಶಿಯರ ಚಟುವಟಿಕೆಗಳನ್ನು ಹತ್ತಿರದಿಂದ ನೋಡುವ ಕುತೂಹಲ.

ಸಂಜೆ 5.30 ಗಂಟೆಗೆ ಪಾರ್ಟಿ ಎಂದು ಒಂದು ತಿಂಗಳು ಮೊದಲೇ mailನಲ್ಲಿ invitation ಪೋಸ್ಟ್ ಮಾಡಲಾಗಿತ್ತು.ಅಲ್ಲಿ ಟೈಂ ಅಂದ್ರೆ ಟೈಂ.ಸಂಜೆ ಐದರಿಂದಲೇ ಅತಿಥಿಗಳು ಆಗಮಿಸಲಾರಂಭಿಸಿದರು. ಅಲ್ಲೆಲ್ಲಾ ಈ ರೀತಿಯ ಸಮಾರಂಭಗಳು ಸ್ವಲ್ಪ ಅಪರೂಪವಾದ್ದರಿಂದ ಭಾರತೀಯರಿರಲಿ ಅಥವ ಇತರರೇ ಆಗಲಿ ತುಂಬಾ ಸಂತೋಷದಿಂದ ಭಾಗವಹಿಸುತ್ತಾರೆ.ನಮ್ಮಂತೆ ಊಟದ ಸಮಯಕ್ಕೆ ಹೋಗಿ,ಮನೆ ನೋಡಿದ ಶಾಸ್ತ್ರ ಮಾಡಿ, ಶುಭಾಶಯ ತಿಳಿಸಿ ಬರುವುದಿಲ್ಲ. ಒಂದು ಸಂಜೆ ಸ್ನೇಹಿತರು ಒಟ್ಟಿಗೆ ಸೇರಲು ಅವಕಾಶವಾಯಿತೆಂದು ಸಂತಸಪಡುತ್ತಾರೆ.ನೂತನ ಮನೆಯ ಒಂದೊಂದು ಕೋಣೆಯನ್ನೂ ವೀಕ್ಷಿಸಿ,ವಿಶೇಷತೆಗಳನ್ನು ಗುರುತಿಸಿ,ಮೆಚ್ಚುಗೆ ವ್ಯಕ್ತಪಡಿಸಿ ಆತ್ಮೀಯ ಭಾವನೆ ತೋರಿದರು. ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಮೊದಲು ನನ್ನ ಮಗಳು-ಅಳಿಯ ಇಬ್ಬರಿಗೂ ಹೂವಿನ ಬೊಕ್ಕೆಯನ್ನಿತ್ತು ತುಂಬು ಹೃದಯದಿಂದ ಶುಭಾಶಯ ಕೋರುತ್ತಿದ್ದುದು ನೋಡಲು ಖುಷಿಯಾಗುತ್ತಿತ್ತು.ವಿದೇಶಿಯರಲ್ಲೂ ಸಹ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಯನ್ನು ಕೊಡುವ ಪದ್ಧತಿಯನ್ನು ನಾನಿಲ್ಲಿ ಕಂಡೆ.  ಆಗಾಗ Juice ಹೀರುತ್ತಾ,ಅತಿಥಿಗಳಿಗಾಗಿಯೇ ಜೋಡಿಸಿಟ್ಟಿದ್ದ ಚಾಕೋಲೆಟ್,ಚಿಪ್ಸ್,ಬಿಸ್ಕತ್ಸ್,ಸಮೋಸ ಮುಂತಾದುವನ್ನು ಮೆಲ್ಲುತ್ತಾ ಇಡೀ ಮನೆಯ ತುಂಬಾ ಓಡಾಡಿ, ಮನೆಯವರೊಂದಿಗೆ ಮತ್ತು ಆಗಮಿಸಿದ್ದ ಇತರರೊಂದಿಗೆ ಮಾತುಕತೆಯಾಡುತ್ತಾ ಕಾಲ ಕಳೆದರು.ಪೂಜಾ ಕೋಣೆ ವಿದೇಶಿಯರನ್ನು ತುಂಬಾ ಆಕರ್ಷಿಸಿತು. 




ರಾತ್ರಿ ಎಂಟರ ನಂತರ ಡಿನ್ನರ್ ಪ್ರಾರಂಭವಾಗಿ ರಾತ್ರಿ ಹನ್ನೊಂದುವರೆ ತನಕವೂ ನೆಡೆಯಿತು. ಗಾರ್ಡನ್ನಿನಲ್ಲಿ  ವ್ಯವಸ್ಥೆ ಮಾಡಿದ್ದ ಕುರ್ಚಿಗಳಲ್ಲಿ ಗುಂಪು ಗುಂಪಾಗಿ ಕುಳಿತು ,ಕೇಸರಿಬಾತ್,ಜಾಮೂನ್,ಸಲಾಡ್,ರಾಯಿತ,ವೆಜಿಟೆಬಲ್ ಪಲಾವ್,ಪೂರಿ,ಸಾಗು,ಮೊಸರನ್ನ ಮುಂತಾದ item ಗಳನ್ನು ಸವಿಯುತ್ತಾ Ice cream ರುಚಿ ನೋಡುತ್ತಾ enjoy ಮಾಡಿದರು.




ಮಕ್ಕಳಿಗಂತೂ ಖುಷಿಯೋ ಖುಷಿ...!!ಮಕ್ಕಳೆಲ್ಲಾ ಸೇರಿ ಬಲೂನಿನಲ್ಲಿ ಆಟವಾಡುತ್ತಾ ತಮಗೆ ಇಷ್ಟವಾದ ಚಾಕೊಲೇಟ್,ಸಮೋಸ Ice cream ತಿನ್ನುತ್ತಾ ತಮ್ಮ ಸಾಂಪ್ರದಾಯಕ ಉಡುಪುಗಳನ್ನು ಧರಿಸಿ ಸಂಭ್ರಮಿಸುತ್ತಿದ್ದುದು ಎದ್ದು ಕಾಣುತ್ತಿತ್ತು.ಮನೆಯ ಒಪ್ಪ ಓರಣವನ್ನು ಗಮನಿದ ಪ್ರತಿಯೊಬ್ಬರೂ " Display homeನಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಎಲ್ಲರಲ್ಲೂ ಭಾನುವಾರದ ಸಂಜೆಯನ್ನು ಸಾರ್ಥಕವಾಗಿ ಕಳೆದ ಸಂತಸ ಕಾಣುತ್ತಿತ್ತು.ಎಲ್ಲರೂ ಹೊರಡುವಾಗ ನನ್ನ ಮಗಳು ನೀಡಿದ ಉಡುಗೊರೆಯನ್ನು ನೋಡಿ ವಿಸ್ಮಿತರಾಗಿ,ಧನ್ಯವಾದಗಳನ್ನು ತಿಳಿಸಿ ಒಬ್ಬೊಬ್ಬರಾಗಿ ತಮ್ಮ ಮನೆಗಳಿಗೆ ಹಿಂದಿರುಗಿದರು.ಕರ್ನಾಟಕ ಮತ್ತು ಭಾರತದ ಕೆಲವು ಸ್ನೇಹಿತರು ರಾತ್ರಿ ಒಂದು ಗಂಟೆಯ ತನಕ ಹಿಂದಿ ಸಿನಿಮಾವನ್ನು ನೋಡಿ ಆನಂದಿಸಿದರು. ಒಟ್ಟಿನಲ್ಲಿ ವಿಭಿನ್ನವಾದ ಒಂದು ಸಂಜೆಯನ್ನು ಕಳೆದ ಅನುಭವ ನಮಗಾಯಿತು.







ಆಸ್ಟ್ರೇಲಿಯಾದ ಜನರು ಹೊಸಮನೆಗೆ ಹೋಗುವಾಗ ನಮ್ಮ ರೀತಿಯಲ್ಲಿ ಗೃಹಪ್ರವೇಶ ಎಂದು ವಿಶೇಷವಾಗಿ ಯಾವುದೇ function ಮಾಡುವುದಿಲ್ಲವಂತೆ.ಆದರೆ ತಮಗೆ ಅತ್ಮೀಯರಾದವರನ್ನು ಒಂದು ದಿನ ಮನೆಗೆ ಆಹ್ವಾನಿಸಿ ಚಿಕ್ಕ ಪಾರ್ಟಿ ಮಾಡುತ್ತಾರೆ ಅಷ್ಟೆ. ನಮ್ಮಂತೆ ನೂರಾರು ಜನರನ್ನು ಒಟ್ಟಿಗೆ ಕರೆಯುವ  ಯಾವುದೇ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುವ ಸಂಪ್ರದಾಯ ಅಲ್ಲಿನವರಲ್ಲಿ ಕಂಡುಬರುವುದಿಲ್ಲ.ಮಕ್ಕಳ birthday ಇರಲಿ ,ಮದುವೆ ಇರಲಿ ತಮಗೆ ಬಹಳ ಅತ್ಮೀಯರಾದವರನ್ನು ಮಾತ್ರ ಆಹ್ವಾನಿಸುತ್ತಾರೆ. ಇದೆಲ್ಲ ಅವರು ಬೆಳೆಸಿಕೊಂಡು ಬಂದ ಪದ್ಧತಿ. ಹಾಗಾಗಿಯೇ ವಿದೇಶಿಯರಿಗೆ ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರವಾದ ಆಸಕ್ತಿ. ಭಾರತೀಯರು ಮಾಡುವ ಯಾವುದೇ ಕಾರ್ಯಕ್ರಮಕ್ಕೆ ಕರೆ ಬಂದರೂ ವಿದೇಶಿಯರು ಅದರಲ್ಲಿ ಭಾಗಿಗಳಾಗಲು ತುದಿಗಾಲಲ್ಲಿ ನಿಂತಿರುತ್ತಾರೆ ಎಂದೇ ಹೇಳಬೇಕು. ನಮಗೂ ಅವರಿಗೂ ಆಹಾರ ಪದ್ದತಿಯಲ್ಲಿ ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ನಮ್ಮಲ್ಲಿಗೆ ಬಂದಾಗ ನಮ್ಮ ಸಂಪ್ರದಾಯಗಳಿಗೆ ಗೌರವಿಸುವ ದೊಡ್ಡ ಗುಣ ಅವರಲ್ಲಿದೆ. ಒಂದು ಉದಾಹರಣೆ ಹೇಳಬೇಕೆಂದರೆ ವಿದೇಶಿಯರಿಗೆ ತಮ್ಮ ಚಪ್ಪಲಿಗಳನ್ನು ಮನೆಯೊಳಗೆಲ್ಲಾ ಹಾಕಿಕೊಳ್ಳುವ ಅಭ್ಯಾಸವಿದೆ. ಆದರೆ ನಮ್ಮ ಮನೆಯ ಗೃಹಪ್ರವೇಶದ ದಿನ,ನಮ್ಮಂತೆ ಅವರೂ ಸಹ   ತಮ್ಮ ತಮ್ಮ ಚಪ್ಪಲಿ,ಶೂಗಳನ್ನು ಹೊರಗಡೆಯೇ ಬಿಟ್ಟು ಬಂದರು. ...!!ನಮ್ಮೊಡನೆ ಕಲೆತು , ನಾವು ಮಾಡಿದ ಅಡಿಗೆಯನ್ನು ಹೊಟ್ಟೆ ತುಂಬಾ ತಿಂದು, ಮನಃ ಪೂರ್ವಕವಾಗಿ ಚೆನ್ನಾಗಿದೆ ಎಂದು ಹೇಳಿ, ಸಮೋಸ, sweet ಗಳನ್ನು ಮತ್ತೆ ಮತ್ತೆ ಹಾಕಿಕೊಂಡು ತಿಂದರು..ಇದನ್ನು ಬರೆಯುವಾಗ ನನ್ನ ಅಳಿಯನ ಸಹೋದ್ಯೋಗಿ ಒಬ್ಬರು ನಮ್ಮ ತಿಳಿಸಾರನ್ನು ಬಹಳ ಇಷ್ಟಪಟ್ಟು ,ಅದನ್ನು ಅನ್ನದೊಡನೆ ಕಲೆಸಿ ತಿನ್ನುವುದನ್ನು ತಿಳಿಯದೆ, ಒಂದು ಸ್ಪೂನ್ ಅನ್ನ ಬಾಯಿಯಲ್ಲಿ ಹಾಕಿಕೊಂಡು ಬೌಲಿನಿಂದ ಸಾರನ್ನು ಹೀರುವ ವಿಷಯವನ್ನು ನನ್ನ ಮಗಳು ಹೇಳಿದ್ದು ನೆನಪಾಗಿ ನಗು ಬರುತ್ತಿದೆ.....!!!

ಭಾರತೀಯರು ತೆಂಗಿನಕಾಯಿಯನ್ನು ಅಡಿಗೆಗೆ ಉಪಯೋಗಿಸುತ್ತಾರೆ ಎಂದು ತಿಳಿದ ಆಸ್ಟ್ರೇಲಿಯಾದ ಒಬ್ಬ ಗೆಳೆಯರು ನಮ್ಮ ಮನೆಗೆ ಒಂದು ದೊಡ್ಡ ಬ್ಯಾಗಿನ ತುಂಬಾ ತೆಂಗಿನಕಾಯಿ ಮತ್ತು  ನೂತನ ಮನೆಯ ಹೋಮದ ದಿನ ಬಾಳೆಕಂದು. ಮಾವಿನಸೊಪ್ಪು ,ಹೂವುಗಳನ್ನು ತಮ್ಮ  ತೋಟದಿಂದ ತಂದುಕೊಟ್ಟದ್ದನ್ನು ನಾನಿಲ್ಲಿ ಉಲ್ಲೇಖಿಸಲು ಇಷ್ಟಪಡುತ್ತೇನೆ.

ಯುರೋಪ್ ದೇಶಗಳಲ್ಲಿ ನಾವು ಅನೇಕ ಚರ್ಚ್ ಗಳನ್ನುಕಾಣಬಹುದು. ಭಾರತದಲ್ಲಿ ಬಿಡಿ… ರಸ್ತೆಗೊಂದು ದೇವಾಲಯ, ಏರಿಯಾಗೊಂದು ಚರ್ಚ್ ಮತ್ತು ಮಸೀದಿಗಳು . ಆದರೆ ಆಸ್ಟ್ರೇಲಿಯಾದಲ್ಲಿ ಚರ್ಚ್ ಗಳು ತುಂಬಾ ಕಡಿಮೆ. ಲ್ಲಿ ನಾನು ಚರ್ಚ್ ಗಳನ್ನು ನೋಡಲಿಲ್ಲವೆಂದೇ ಹೇಳಬೇಕು....! ಅವರು ಮಾಡುವ ಕೆಲಸದಲ್ಲೇ ದೇವರನ್ನು ಕಾಣುತ್ತಾರೆ. ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.ಇನ್ನೊಬ್ಬರನ್ನು ಗೌರವಿಸುವ ಗುಣ ಅವರಲ್ಲಿದೆ.ಜೀವನದಲ್ಲಿ ಬಂದದ್ದನ್ನು ಬಂದಹಾಗೇ ಸ್ವೀಕರಿಸಿ ದಿನಗಳನ್ನು ಖುಷಿಯಾಗಿ ಕಳೆಯುವ ಲವಲವಿಕೆಯನ್ನು ನಾನು ಅವರಲ್ಲಿ ಗಮನಿಸಿದೆ.

ನವಿಲೇ... ನವಿಲೇ...!!



ನವಿಲೇ... ನವಿಲೇ...
ಬಣ್ಣದ ನವಿಲೇ

ಜುಟ್ಟನು ಜಂಬದಿ ಆಡಿಸೆ ನವಿಲೇ
ಬಿಂಕದಿ ಹೆಜ್ಜೆಯ ಮುಂದಿಡೆ ನವಿಲೇ

ಗರಿಗಳ ಬಿಚ್ಚಿ ಕುಣಿಯಲೆ ನವಿಲೇ
ಭೂಮಿಗೆ ಮಳೆಯನು ಕರೆಯಲೆ ನವಿಲೇ

ಬಾರೆಲೆ ನವಿಲೇ...
ಬಣ್ಣದ ನವಿಲೇ...
ಅಂದದ ನವಿಲೇ...
ಚೆಂದದ ನವಿಲೇ..
ಸಾವಿರ ಕಣ್ಗಳ ಸುಂದರ ನವಿಲೇ...!!!!