ಅಳಿಲೇ... ಅಳಿಲೇ...



ಅಳಿಲೇ... ಅಳಿಲೇ...
ಮುದ್ದಿನ ಅಳಿಲೇ..
ಚೀವ್.. ಚೀವ್.. ಎಂದು 
ಉಲಿಯುವ ಅಳಿಲೇ..

ವೇಗದಿ ಮರವನು
ಏರುವ ಅಳಿಲೇ
ಪಿಳಿ ಪಿಳಿಯೆಂದು 
ನೋಡುವ ಅಳಿಲೇ

ನನ್ನಯ ಕೈಯಿಗೆ 
ಸಿಕ್ಕರೆ ನೀನು
ನಿನ್ನಯ ನೆತ್ತಿಯ 
ಸವರುವೆ ನಾನು

ಮೃದು ಮೈಯ್ಯನ್ನು 
ಮುದ್ದಿಸಲೇನು?
ಬೆನ್ನಿನ ಗೆರೆಗಳ 
ಮುಟ್ಟಲೆ ನಾನು?

ಪುಟು ಪುಟು ಎಂದು
ಓಡುವೆ ಏಕೆ?
ತಿನ್ನಲು ಹಣ್ಣನು 
ಕೊಡುವೆನು ಬೇಕೆ?

ಬಾ..ಬಾ... ಅಳಿಲೇ
ಪುಟಾಣಿ ಅಳಿಲೇ..
ಮುದ್ದಿನ ಅಳಿಲೇ...

(ಚಿತ್ರಕೃಪೆ-ಅಂತರ್ಜಾಲ)

ವಿದೇಶ ವಿಹಾರ - 10 ಆಸ್ಟ್ರೇಲಿಯಾ ದೇಶ.. ಜನ..ಪರಿಸರ...


ವಿಸ್ತಾರವಾದ ದೇಶ.ವಿರಳ ಜನಸಂಖ್ಯೆ.ಆಸ್ಟ್ರ‍ೇಲಿಯಾ ದೇಶದ ಸುತ್ತಲಿರುವ ಕಡಲತಡಿಯಲ್ಲಿ ಮಾತ್ರ ನಾವು ನಗರಗಳನ್ನು ಮತ್ತು ಜನವಸತಿಯನ್ನು ಕಾಣಬಹುದು. ಮಧ್ಯ ಭಾಗದಲ್ಲಿ ದಟ್ಟ ಅರಣ್ಯ.ಕೃಷಿ, ಹೈನುಗಾರಿಕೆ, ಗಣಿಗಾರಿಕೆ ಇಲ್ಲಿನ ಜನರ ಮುಖ್ಯ ಉದ್ಯೋಗ.ವಾರವೆಲ್ಲ ಕಷ್ಟಪಟ್ಟು ದುಡಿದು, ವಾರಾಂತ್ಯದ ಎರಡು ದಿನ ತಮ್ಮ ಕುಟುಂಬದೊಂದಿಗೆ ಜಾಲಿಯಾಗಿ ಕಾಲಕಳೆಯುವ ಮನೋಭಾವದ ಜನರೇ ಇಲ್ಲಿ ಹೆಚ್ಚು.ಇಂಗ್ಲೆಂಡಿನ ಮೂಲದವರೇ ಹೆಚ್ಚಿರುವ ಕಾರಣ,ಇಂಗ್ಲೀಷ್ ಇಲ್ಲಿನವರ ಮಾತೃಭಾಷೆ.ಸಹಜವಾಗಿಯೇ ಕ್ರಿಸ್ಮಸ್ ಈ ದೇಶದ ದೊಡ್ಡಹಬ್ಬ.
   







ನಗರ ಪ್ರದೇಶವಿರಲಿ ಹಳ್ಳಿಗಳಿರಲಿ (ಇಲ್ಲಿ ಹಳ್ಳಿಗಳಿಗೆ ಕಂಟ್ರಿಸೈಡ್ ಎನ್ನುತ್ತಾರೆ) ಅಲ್ಲಿನ ಶುಚಿತ್ವ ಮೆಚ್ಚುಗೆಗೆ ಪಾತ್ರವಾಗುತ್ತದೆ.ಅಲ್ಲಿನ ಜನರ ನಗುಮೊಗದ ನಡೆನುಡಿ ಮನಸ್ಸಿಗೆ ಹಿತವೆನ್ನಿಸುತ್ತದೆ.ಕಾನೂನು ಪರಿಪಾಲನೆ ಎಲ್ಲರ  ಧ್ಯೇಯ.ಸೌಜನ್ಯಯುತ ನಡವಳಿಕೆ.ಮಿತ ಮಾನವ ಶಕ್ತಿಯ ಪರಿಣಾಮ ಯಂತ್ರಗಳ ಬಳಕೆ ಅಧಿಕ.

ಎಲ್ಲೆಲ್ಲೂ ಶುಚಿಯೋ ಶುಚಿ.......


ರಸ್ತೆಯಲ್ಲಿ,ಫುಟ್ಪಾತ್ ನಲ್ಲಿ ಉಗುಳುವುದು,ಗಲೀಜು ಮಾಡುವುದು ಹಾಳು ಮಾಡುವುದು ಇಲ್ಲಿ ಕಾಣಲು ಸಾಧ್ಯವೇ ಇಲ್ಲ.ಎಲ್ಲೆಡೆಯೂ ಕಸದ ತೊಟ್ಟಿ ಕಂಡುಬರುತ್ತದೆ.ನಮ್ಮ ದೇಶದಂತೆ ಅವು ತುಂಬಿ ಚೆಲ್ಲಿದರೂ ಖಾಲಿ ಮಾಡದ್ದನ್ನು ನಾನಿಲ್ಲಿ ಎಲ್ಲಿಯೂ ಕಾಣಲಿಲ್ಲ.ಇಲ್ಲಿನ ರಸ್ತೆಗಳು ನುಣುಪಾಗಿ ವಿಶಾಲವಾಗಿರುತ್ತದೆ.ಒಂದು ಚಿಕ್ಕ ಗುಂಡಿಯನ್ನಾಗಲೀ, ಕಸಕಡ್ಡಿಯನ್ನಾಗಲೀ ರಸ್ತೆಗಳಲ್ಲಿ ಹುಡುಕಿದರೂ ಸಿಕ್ಕದು. ಸ್ವಚ್ಛತೆಗೆ ಮೊದಲ ಆದ್ಯತೆ.ಸಾರ್ವಜನಿಕ ಸ್ಥಳಗಳು ಶುಚಿಯಾಗಿರಲು ಇಲ್ಲಿನ ಜನರ ಮನೋಭಾವನೆ ,ಸಹಕಾರದೊಂದಿಗೆ ಸರ್ಕಾರಿ ಇಲಾಖೆಗಳ ಕಾರ್ಯಕ್ಷಮತೆಯೂ ಕಾರಣ.ಕಂಡಲ್ಲಿ ಉಗಿಯುವುದು, ತಿಂದು-ಕುಡಿದು ಎಲ್ಲೆಂದರಲ್ಲಿ ಕಸವನ್ನು ಎಸೆಯುವುದನ್ನು ಇಲ್ಲಿ ಕಾಣಲು ಸಾಧ್ಯವೇ ಇಲ್ಲ.ರಸ್ತೆ,ಏರ್ ಪೋರ್ಟ್, ಬೀಚ್ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಎಲ್ಲೆಡೆಯೂ ಡಸ್ಟ್ ಬಿನ್ ಮತ್ತು ರೀಸೈಕಲ್ ಬಿನ್ ಗಳನ್ನು ಇಟ್ಟಿರುತ್ತಾರೆ. ಜನರೂ ಸಹ ಇವುಗಳನ್ನು ಹುಡುಕಿ ಕಸ ಹಾಕುತ್ತಾರೆ.ನಿಯಮಿತವಾಗಿ ಕಸವನ್ನು ಖಾಲಿ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಿಡುವ ವ್ಯವಸ್ಥೆಯನ್ನು ನಾನಿಲ್ಲಿ ಉಲ್ಲೇಖಿಸಲೇಬೇಕು.ನಮ್ಮ ಮುನ್ಸಿಪಾಲಿಟಿಯ ಕಸದತೊಟ್ಟಿ ತುಂಬಿ ಕೊಳೆತು ನಾರುತ್ತಿದ್ದರೂ ಖಾಲಿ ಮಾಡುವ ಸೌಜನ್ಯ ನಮ್ಮ ಸರ್ಕಾರಿ ಇಲಾಖೆಯಲ್ಲಿ ಯಾಕಿಲ್ಲ ಎಂದು ಬೇಸರವಾಗುತ್ತದೆ.ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯದ ನಿರ್ವಹಣೆ ಜನರು ಮತ್ತು ಸರ್ಕಾರ ಎರಡೂ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಸಾಧ್ಯ ಎಂಬುದನ್ನು ನಾವಿಲ್ಲಿ ತಿಳಿಯಬಹುದು.         

ಈ ದೇಶದಲ್ಲಿ ಪ್ರತಿದಿನದ ಕಸ ಮತ್ತು ತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆ ಮನಮೆಚ್ಚುವಂತಿದೆ.ಪ್ರತಿಯೊಂದು ಮನೆಗೂ ದೊಡ್ಡದಾದ ಡಸ್ಟ್ ಬಿನ್ ಮತ್ತು ರೀಸೈಕಲ್ ಬಿನ್ ಗಳನ್ನು ಸಿಟಿ ಕೌನ್ಸಿಲ್ ಒದಗಿಸಿರುತ್ತದೆ. ತ್ಯಾಜ್ಯವಸ್ತುಗಳನ್ನು Dust Binಗೂ ಮತ್ತು  ಪ್ಲಾಸ್ಟಿಕ್, ಪೇಪರ್ ಮುಂತಾದುವುಗಳನ್ನು Recycle Binಗೂ ಹಾಕಿಡಬೇಕು.ನಿಗದಿಯಾದ ದಿನ ಮನೆಯ ಹೊರಗೆ,ರಸ್ತೆಯ ಪಕ್ಕದಲ್ಲಿ ತುಂಬಿರುವ ಈ ಕಸದ ಡಬ್ಬಗಳನ್ನು ಇಟ್ಟರೆ ಕಸ ವಿಲೇವಾರಿಯ ವಾಹನ ಬಂದು ಅದನ್ನು ಖಾಲಿ ಮಾಡಿ ಇಟ್ಟು ಹೋಗುತ್ತದೆ.ಮನೆಗಳಿಗಾದರೆ ವಾರದಲ್ಲಿ ಎರಡು ಬಾರಿ ಕಸ ವಿಲೇವಾರಿ ಮಾಡುತ್ತಾರೆ. ಹೆಚ್ಚು ಕಸ ಬೀಳುವ ಹೋಟೆಲ್,ಹಾಸ್ಪಿಟಲ್ ಮುಂತಾದುವೆಡೆಗಳಲ್ಲಿ ದಿನವೂ ಕಸವನ್ನು ನಿಯಮಿತವಾಗಿ ತೆಗೆದುಕೊಂಡು ಹೋಗುವ  ವ್ಯವಸ್ಥೆಯಿರುವುದರಿಂದ ಎಲ್ಲೆಡೆಯೂ ಸ್ವಚ್ಛತೆಯನ್ನು ಕಾಣಬಹುದು.


ನುಣುಪಾದ ರಸ್ತೆಗಳು ಮತ್ತು ಸಂಚಾರಿ ನಿಯಮ


ಇಲ್ಲಿನ ಜನ ಟ್ರಾಫಿಕ್ ನಿಯಮಗಳನ್ನು ತುಂಬಾ ಚೆನ್ನಾಗಿ ಪಾಲಿಸುತ್ತಾರೆ.ವಾಹನ ಚಾಲನೆಗೆ ಲೈಸನ್ಸ್ ನೀಡುವಾಗಲೇ ಎರಡು Test ಗಳನ್ನು ಕಟ್ಟುನಿಟ್ಟಾಗಿ ಮಾಡಿ , ಪಾಸಾದ ನಂತರ ಡ್ರೈವಿಂಗ್ ಲೈಸನ್ಸ್ ನೀಡುತ್ತಾರೆ. ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೋಲಿಸರಿರುವುದಿಲ್ಲ. ಎಲ್ಲೆಡೆಯೂ ಸಿ ಸಿ ಕ್ಯಾಮರಾಗಳನ್ನು ಅಳವಡಿಸಿರುತ್ತಾರೆ.ಯಾರಾದರು ರೂಲ್ಸ್ ಮುರಿದರೆ ಈ ಕ್ಯಾಮರಾದಲ್ಲಿ ಚಿತ್ರಿತವಾಗಿರುತ್ತದೆ. ನಂತರ ವಾಹನ ಮಾಲಿಕರ ಮನೆಗೆ ಫೈನ್ ಕಟ್ಟಲು ನೋಟೀಸ್ ಕಳುಹಿಸುತ್ತಾರೆ.ಇಂತಹ ನೋಟೀಸ್ ಗಳನ್ನು ಆಗ್ಗಾಗ್ಗೆ ಪಡೆದವರ ಡ್ರ‍ೈವಿಂಗ್ ಲೈಸನ್ಸನ್ನು ರದ್ದು ಮಾಡುವ ಕಟ್ಟುನಿಟ್ಟಿನ ಕ್ರಮ ಇಲ್ಲಿದೆ.ಹಾಗಾಗಿ ಇಲ್ಲಿನ ಜನ ರಸ್ತೆ ನಿಯಮಗಳನ್ನು ಪರಿಪಾಲಿಸುವುದರಿಂದ ಇಲ್ಲಿನ ರಸ್ತೆಗಳಲ್ಲಿ ಸಂಚಾರ ಸುಲಭ ಮತ್ತು ಸುರಕ್ಷಿತ.ಪ್ರತಿ ರಸ್ತೆಯಲ್ಲಿಯೂ ಮಿತಿಮೀರಿದ ವೇಗದಿಂದ ವಾಹನವನ್ನು ಚಲಾಯಿಸುವಂತಿಲ್ಲ.ಇದೇ ವೇಗದಲ್ಲಿಯೇ ನಿಮ್ಮ ವಾಹನವನ್ನು ಓಡಿಸಬೇಕೆಂಬ ಸೂಚನಾ ಫಲಕಗಳನ್ನು  ರಸ್ತೆ ಬದಿಯಲ್ಲಿ ನಿಲ್ಲಿಸಿರುತ್ತಾರೆ. ಆ ಮಿತಿಯೊಳಗೇ  ನಾವು ಹೋಗಬೇಕು ಇಲ್ಲದಿದ್ದರೆ ಫೈನ್ ಗ್ಯಾರಂಟಿ.ನಮ್ಮ ಮುಂದಿರುವ ವಾಹನಕ್ಕೂ ನಮ್ಮ ವಾಹನಕ್ಕೂ ಇಂತಿಷ್ಟೇ ಅಂತರವಿರಬೇಕು.ಸಿಕ್ಕ ಸಿಕ್ಕಲ್ಲಿ ನಮ್ಮ ಮುಂದಿನ ವಾಹನವನ್ನು ಓವರ್ ಟೇಕ್ ಮಾಡುವಂತಿಲ್ಲ.ಓವರ್ ಟೇಕ್ ಮಾಡಲು ಅನುಮತಿ ಇರುವೆಡೆ ಮಾತ್ರ ನಮ್ಮ ಮುಂದಿನ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಬೇಕು. ಜನರ ಸುರಕ್ಷತೆಯ ದೃಷ್ಟಿಯಿಂದ ಅನೇಕ ಕಾನೂನುಗಳನ್ನು ಮಾಡಿದ್ದಾರೆ. ಜನರೂ ಸಹ ಅದನ್ನು ತಪ್ಪದೆ ಪಾಲಿಸುತ್ತಾರೆ.ಇಲ್ಲದಿದ್ದರೆ ಅಲ್ಲಿನ ಕಟ್ಟಿನಿಟ್ಟಿನ ಕಾನೂನಿನಿಂದಾಗಿ ಲೈಸನ್ಸ್ ರದ್ದಾಗುವ ಭಯವಿದೆ. ನಮ್ಮಲ್ಲೂ ನಮ್ಮ ಸರ್ಕಾರ ಜನರ ಸುರಕ್ಷತೆಗಾಗಿ ಅನೇಕ ಕಾನೂನುಗಳನ್ನು ಮಾಡಿರುವುದು ನಿಜ.ಆದರೆ ಅದನ್ನು ಪರಿಪಾಲಿಸುವ ಅಧಿಕಾರಿಗಳು ಮತ್ತು ಜನರು ಬಹಳ ಕಡಿಮೆ. ಇದೇ ನಮ್ಮ ದೇಶದಲ್ಲಿ ಅಪಘಾತಗಳು ಹೆಚ್ಚಲು ಕಾರಣ.ನಮ್ಮ ಜನರಲ್ಲಿ ಕಾನೂನಿಗೆ ಅನುಗುಣವಾಗಿ ನೆಡೆಯುವ ಪ್ರಜ್ಞೆ ಮೂಡಿಬರಬೇಕು.ಆಗಲೇ ಶಿಸ್ತುಬದ್ಧ ಜೀವನ ಸಾಧ್ಯ.    
     
ನಮ್ಮ ದೇಶದಲ್ಲಿ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು,ದನಕರುಗಳು,ಕತ್ತೆ,ಕುದುರೆಗಳು ಅಲ್ಲದೆ ಹಂದಿಗಳು ರಾಜಾರೋಷವಾಗಿ ಓಡಾಡಿಕೊಂಡಿರುವುದನ್ನು ಮತ್ತು ಹಿಂಡುಹಿಂಡಾಗಿ ಮಲಗಿರುವುದನ್ನು ನೋಡಿದ್ದೇವೆ.ನಮ್ಮ ದೇಶದ ಅನೇಕ ಅಪಘಾತಗಳಿಗೆ ಇವೇ ಕಾರಣವೆನ್ನುವುದು ಸಹ ನಮಗೆ ತಿಳಿಯದ್ದೇನಲ್ಲ.ಆದರೆ ಇದನ್ನು ತಡೆಯಲು ನಮ್ಮಲ್ಲಿ ಸಾಧ್ಯವಾಗಿಲ್ಲ.ಆದರೆ ಆಸ್ಟ್ರೇಲಿಯಾದಲ್ಲಿ ರಸ್ತೆಗಳಲ್ಲಿ ಒಂದಾದರೂ ಪ್ರಾಣಿಯನ್ನು ನಾನು ನೋಡಲಿಲ್ಲ. ಪಟ್ಟಣ ಪ್ರದೇಶದಿಂದ ಹೊರಗೆ ವಿಶಾಲವಾದ ಜಾಗಗಳಲ್ಲಿ ಮಾತ್ರ (ನಮ್ಮಲ್ಲಿ ಗೋಮಾಳವಿದ್ದಂತೆ) ಪ್ರಾಣಿಗಳನ್ನು,ಹಸುಗಳನ್ನು ಸಾಕಬಹುದು.ಆದ್ದರಿಂದ ನಮ್ಮಲ್ಲಿಯಂತೆ ಹಾದಿಬೀದಿಗಳಲ್ಲಿ ಸಾಕುಪ್ರಾಣಿಗಳ ಹಾವಳಿ ಕಂಡುಬರುವುದಿಲ್ಲ.

ರಸ್ತೆಯ ಇಕ್ಕೆಲಗಳಲ್ಲೂ ಹುಲ್ಲಿನ ಲಾನುಗಳನ್ನು ಬೆಳೆಸಿರುವುದರಿಂದ ರಸ್ತೆಯಲ್ಲಿ ಧೂಳೇಳುವ ಸಾಧ್ಯತೆಗಳಿಲ್ಲ.ಇದರಿಂದ ಸುತ್ತಮುತ್ತಲ ಪರಿಸರ ಶುಭ್ರವಾಗಿರುತ್ತದೆ.

ಇಲ್ಲಿ ಕರೆಂಟ್ ಹೋಗುವುದೇ ಇಲ್ಲ.....!!!!!

ಪ್ರತಿ ಮನೆಮನೆಗೆ ದಿನದ ಇಪ್ಪತ್ನಾಲ್ಕು ಗಂಟೆಗಳೂ ಶುದ್ಧವಾದ ನೀರು ಮತ್ತು ವಿದ್ಯುತ್ತನ್ನು ನಿರಂತರವಾಗಿ ಸರಬರಾಜು ಮಾಡಲಾಗುತ್ತದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸೋಲಾರ್ ಪವರ್ ಉಪಯೋಗಿಸಲು ಇಲ್ಲಿನ ಸರಕಾರ ಹೆಚ್ಚಿನ ಒತ್ತು ನೀಡಿ, ಸೋಲಾರ್ ಉಪಯೋಗಿಸುವವರಿಗಾಗಿ ಕೆಲವು ಆಕರ್ಷಕ ರಿಯಾಯಿತಿಗಳನ್ನೂ ಜನರಿಗೆ ನೀಡಿ ಪ್ರೋತ್ಸಾಹ ಕೊಡುತ್ತದೆ.  
ಒಟ್ಟಿನಲ್ಲಿ ನೆಮ್ಮದಿಯಾಗಿ ಬದುಕಲು ಇರಬೇಕಾದ ಮೂಲಭೂತ ಸೌಕರ್ಯಗಳನ್ನು ಇಲ್ಲಿನ ಜನರು ಪಡೆದಿದ್ದಾರೆ.ನಿರ್ಮಲವಾದ ಗಾಳಿ,ಬೆಳಕು,ನೀರು ಮತ್ತು ಸ್ವಚ್ಛವಾದ ಪರಿಸರ ಇಲ್ಲಿನ ಜನರ ಸೌಭಾಗ್ಯವೆಂದು ನನ್ನ ಅನಿಸಿಕೆ.....!!

ವಿದೇಶ ವಿಹಾರ - 9 - Sunday Market

(ಫೋಟೋ ಗಳನ್ನು ದೊಡ್ಡದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)



ಭಾನುವಾರ ಬೆಳಗ್ಗೆ ನಿಮ್ಮನ್ನು ಒಂದು ಮಾಯಾಬಜಾರ್ ಗೆ ಕರೆದುಕೊಂಡು ಹೋಗುತ್ತೇನೆ,ಎಲ್ಲರೂ ಬೇಗ ಎದ್ದು ರೆಡಿಯಾಗಬೇಕು ಎಂದು ನನ್ನ  ಮಗಳು ಹೇಳಿದ್ದಳು. ನಾವೂ ಉತ್ಸಾಹದಿಂದ ಎದ್ದು ಹೊರಟೆವು.ಅವಳು ನಮ್ಮನ್ನು ಕರೆದುಕೊಂಡು ಹೋಗಿದ್ದು ಸಂಡೇ ಮಾರ್ಕೆಟ್ ಗೆ.....ಟೌನ್ಸ್ವಿಲ್ ನಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ಸಂಡೇ ಮಾರ್ಕೆಟ್ ಇರುತ್ತದೆ.ಇದು ಒಂದು ಥರ ನಮ್ಮ ಸಂತೆ ಇದ್ದಂತೆ ಅಂತ ಹೇಳಬಹುದು. ಇಲ್ಲಿ ಸಿಗದ ವಸ್ತುಗಳಿಲ್ಲ.ದೊಡ್ಡ ದೊಡ್ಡ ಶಾಪಿಂಗ್ ಮಾಲುಗಳಲ್ಲಿ ಕಾಣದ,ಸಿಗದ ವಸ್ತುಗಳು ಇಲ್ಲಿ ಸಿಗುತ್ತದೆ.

ಭಾನುವಾರದ ಬಜಾರಿಗಾಗಿ ಸಿಟಿ ಕೌನ್ಸಿಲ್ಲಿನ ಆಡಳಿತ ಈ ನಗರದ ಒಂದು ಮುಖ್ಯ ರಸ್ತೆಯನ್ನು ಮಧ್ಯಾಹ್ನ ಎರಡು ಗಂಟೆಯ ತನಕ ಬಂದ್ ಮಾಡಿ, ರಸ್ತೆ ಮತ್ತು ಫುಟ್ಪಾತ್ ಗಳಲ್ಲಿ ಸ್ಟಾಲುಗಳನ್ನಿಡಲು ಅನುಮತಿ ನೀಡುತ್ತದೆ.ಜನರ ಅನುಕೂಲಕ್ಕಾಗಿ ಈ ವ್ಯವಸ್ಥೆ.ಮಧ್ಯಾಹ್ನ ಎರಡರ ನಂತರ ಈ ರಸ್ತೆಯಲ್ಲಿ ಮಾರ್ಕೆಟ್ ಇತ್ತೇ ಎಂಬ ಸಂಶಯ ಉಂಟಾಗುವಷ್ಟು ಶುಚಿಯಾಗಿಯೇ ಇರುತ್ತದೆ..!!! ಜೊತೆಗೆ ವಾಹನಗಳ ಓಡಾಟ ಮೊದಲಿನಂತಾಗುತ್ತದೆ..!! ಇದನ್ನೆಲ್ಲ ವೀಕ್ಷಿಸಿದ ನನಗೆ ನಮ್ಮೂರಿನ ಸಂತೆಯ ಗೌಜು, ಗದ್ದಲ, ಅವ್ಯವಸ್ಥೆಯನ್ನು ನೆನೆದು ಕಸಿವಿಸಿಯಾಯಿತು. ಸಾರ್ವಜನಿಕ ಸ್ಥಳಗಳನ್ನು ತಮ್ಮ ಮನೆಯಂತೆ ಶುಚಿಯಾಗಿಡಬೇಕೆಂಬ ಇಲ್ಲಿನವರ ಮನೋಭಾವ ನಮಗೆ ನಿಜಕ್ಕೂ ಮಾದರಿಯಾಗಬೇಕು.ಇದನ್ನು ನಾವೂ ಪಾಲಿಸಿದರೆಷ್ಟು ಚೆನ್ನ ಎನ್ನಿಸಿತು.        

ತಾಜಾ ತರಕಾರಿ,ಹಣ್ಣುಹಂಪಲು ಬೇಕಿದ್ದರೆ ವಾರಕ್ಕೊಮ್ಮೆ ಇಲ್ಲಿಗೆ ಬರಬೇಕು.ನಮಗೆ ಬೇಕಾದ ದಿನನಿತ್ಯದ ವಸ್ತುಗಳನ್ನು ಇಲ್ಲಿ ಕೊಂಡು ರೆಫ್ರಿಜರೇಟರಿನಲ್ಲಿ ಇಟ್ಟುಕೊಂಡರ‍ೆ ವಾರವಿಡೀ ತರಕಾರಿ,ಹಣ್ಣುಗಳಿಗೆ ಪರದಾಡಬೇಕಿಲ್ಲ.ಆಗತಾನೆ ಕಿತ್ತುತಂದ ಹಸಿರಾದ ಸೊಪ್ಪು,ತರಕಾರಿಗಳನ್ನು ತೆಗೆದುಕೊಳ್ಳಬೇಕೆನ್ನುವ ಆಸೆಯಾಗುತ್ತದೆ.ಅಷ್ಟೊಂದು ತಾಜಾ ಮತ್ತು ಶುಚಿಯಾಗಿರುತ್ತದಲ್ಲದೆ ಮಾಡಿದ ಸಾಂಬಾರು,ಪಲ್ಯಗಳು ಬಲು ರುಚಿಯಾಗಿಯೂ ಇರುತ್ತವೆ.ನಮ್ಮ ದೇಶದಲ್ಲಿ ಸಿಗುವ ಸರಿ ಸುಮಾರು ಎಲ್ಲಾ ತರಕಾರಿಗಳನ್ನೂ ನಾನಿಲ್ಲಿ ಕಂಡೆ. ಸಿಹಿಗುಂಬಳ,ಹಾಲುಸೋರೆ, ಸಬ್ಬಸಿಗೆ ಸೊಪ್ಪು ಎಲ್ಲವೂ ಇಲ್ಲಿ ಲಭ್ಯ.ಇಲ್ಲಿ ದೊರಕುವ ವಿವಿಧ ರೀತಿಯ ತಾಜಾ ಸೊಪ್ಪುಗಳು ಅದರಲ್ಲೂ ಚಿಕ್ಕ ಚಿಕ್ಕ ಪಾಟಿನಲ್ಲಿ ಸಿಗುವ ಕೊತ್ತಂಬರಿ ಸೊಪ್ಪನ್ನಂತು ನಾನೆಂದೂ ಮರೆಯಲಾರೆ. ಅಲ್ಲಿ ಸಿಗುವ "ಬೇಬಿ ಸ್ಪಿನಾಚ್" ಸೊಪ್ಪಿನಿಂದ ತಯಾರಿಸಿದ ಅಡುಗೆಯ ಘಮಲು, ರುಚಿ ನನಗಿನ್ನೂ ಮರೆಯಲಾಗಿಲ್ಲ.


















ಇನ್ನು ಹಣ್ಣುಗಳ ವಿಚಾರಕ್ಕೆ ಬಂದರೆ ಇಲ್ಲಿ ಸಿಗುವ ಎಷ್ಟೋ ಹಣ್ಣುಗಳನ್ನು ನಾನು ನೋಡೇ ಇರಲಿಲ್ಲ.ಆಗತಾನೆ ಕಿತ್ತು ತಂದ ರಸಭರಿತ ಹಣ್ಣುಗಳು,ತರಕಾರಿಗಳು ನಮ್ಮಂತಹ ಪುಳಿಚಾರುಗಳಿಗೆ ಸಮಾಧಾನ ತರುತ್ತದೆ. ಸಧ್ಯ... ವಿದೇಶಕ್ಕೆ ಬಂದರೂ ನಮ್ಮ ಶೈಲಿಯ ಊಟೋಪಚಾರಕ್ಕೆ ಭಂಗವಿಲ್ಲದಂತೆ ಇರಬಹುದು ಎಂಬ ಸಮಾಧಾನ ಉಂಟಾಗುತ್ತದೆ.

ನಿಮಗೆ ಮೆಹಂದಿ,ಹಚ್ಚೆಯ ಅಥವ ಟ್ಯಾಟೋ ಹುಚ್ಚೆ....?  ಹಾಗಾದರೆ ಇಲ್ಲಿ ಬಂದು ನೋಡಿ...!ಮೈ..ಕೈ ಮೇಲೆಲ್ಲಾ ಚಿತ್ರ ಬಿಡಿಸುವ ಮಂದಿ ತಮ್ಮ ಸ್ಟಾಲ್ ಗಳಲ್ಲಿ ನಿಮಗಾಗಿ ಕಾಯುತ್ತಿರುತ್ತಾರೆ.ದೇಹದ ತುಂಬಾ ಹಚ್ಚೆ ಬರೆಸಿಕೊಳ್ಳುತ್ತಿರುವ ವಿದೇಶಿಯರನ್ನೂ ನಾವಿಲ್ಲಿ ಕಾಣಬಹುದು.ಆಸ್ಟ್ರೇಲಿಯನ್ ಯುವಕರು ತಮ್ಮ ಮೈ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡು ಓಡಾಡುತ್ತಾರೆ.   ಸಾಮಾನ್ಯವಾಗಿ ಮೆಹಂದಿಯ ಸ್ಟಾಲ್ ಗಳ ಮಾಲೀಕರು ನಮ್ಮ  ಭಾರತೀಯರೆನ್ನುವುದು ಮೆಚ್ಚುಗೆಯ ವಿಷಯ. ಟ್ಯಾಟೋ ಸ್ಟಿಕ್ಕರುಗಳೂ ಇಲ್ಲಿ ದೊರೆಯುತ್ತವೆ.

ಸಮುದ್ರದಲ್ಲಿ ಸಿಗುವ ಕಪ್ಪೆಚಿಪ್ಪು,ಶಂಖಗಳು,ನಕ್ಷತ್ರ ಮೀನಿನ ಚಿಪ್ಪುಗಳಿಂದ ತಯಾರಿಸಲಾದ ಅಲಂಕಾರಿಕ ವಸ್ತುಗಳನ್ನು ಇಲ್ಲಿ ಹೇರಳವಾಗಿ ಮಾರಾಟಕ್ಕಿಟ್ಟುಕೊಂಡಿರುತ್ತಾರೆ. ಶೋಕೇಸಿನಲ್ಲಿಡುವ ವಸ್ತುಗಳು,ಬಿದಿರಿನಿಂದ ತಯಾರಿಸಲಾದ ಬುಟ್ಟಿ,ತೆಂಗಿನ ಕಡ್ಡಿ ಪೊರಕೆಯನ್ನೂ ನಾನಿಲ್ಲಿ ಕಂಡು ಆಶ್ಚರ್ಯಪಟ್ಟೆ. ವಾರವಿಡೀ ಕುಳಿತು ತಮ್ಮ ಕೈಯ್ಯಾರೆ ತಯಾರಿಸಲಾದ ಆಕರ್ಷಕವಾದ ಪೇಯಿಂಟಿಂಗ್ ಮತ್ತು ಕಸೂತಿ ವಸ್ತುಗಳನ್ನು ಮನೆ ಗೋಡೆಗಳಿಗೆ ಹಾಕಲು ಜನ ಖರೀದಿಸುತ್ತಾರೆ.















ವೀಕೆಂಡ್ ಎಂದು ಆರಾಮಾಗಿ ಕಾಲ ಕಳೆಯುವ ಇಲ್ಲಿನ ಜನ , ಭಾನುವಾರ ಬೆಳಗ್ಗೆ ಇಲ್ಲಿಗೆ ತಮ್ಮ ಫ್ಯಾಮಿಲಿಯೊಂದಿಗೆ ಬಂದು ಬೇಕಾದ ಸಾಮಾನು ಕೊಂಡು,ಬೆಳಗಿನ ಉಪಾಹಾರವನ್ನು,ಕಾಫಿ,ಜ್ಯೂಸನ್ನು ಇಲ್ಲೇ ಮುಗಿಸಿ ಕಾಲ ಕಳೆಯುತ್ತಾರೆ.ಇಲ್ಲಿ ಕಾಫಿ ಸ್ಟಾಲ್ ,ಬ್ರೆಡ್ ಬೇಕರಿ ಸ್ಟಾಲುಗಳನ್ನು ಸಹ ಹಾಕಿರುತ್ತಾರೆ.
ಜನರ ಮನೋರಂಜನೆಗಾಗಿ ಮತ್ತು ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಲು ಉದಯೋನ್ಮುಖ ಕಲಾವಿದರು ಟೆಂಟುಗಳನ್ನು ಹಾಕಿಕೊಂಡು ಹಾಡುವುದು ಮತ್ತು ಗಿಟಾರ್ ನುಡಿಸುತ್ತಿರುತ್ತಾರೆ.ಬಂದ ಕೆಲಸ ಮುಗಿಸಿ ಇಲ್ಲಿನ ಫುಟ್ಪಾತಿನಲ್ಲಿರುವ ಬೆಂಚುಗಳ ಮೇಲೆ ಕುಳಿತು ಸಂಗೀತವನ್ನು ಆಸ್ವಾದಿಸುವ ಬಿಳಿಯರನ್ನು ನಾವಿಲ್ಲಿ ಕಾಣಬಹುದು.ಮನೆಯಿಂದ ಹೊರಗೆ ಬಂದರೆ ತಮ್ಮ ವಾಹನಗಳಲ್ಲೇ ಓಡಾಡುವ ಇಲ್ಲಿನ ಜನರನ್ನು ನೋಡಬೇಕೆಂದರೆ ನಾವು ಈ ಮಾರ್ಕೆಟ್ ಗೆ ಹೋಗಲೇಬೇಕು.ನಮ್ಮ ದೇಶದಲ್ಲಿ ಎಲ್ಲೆಂದರಲ್ಲಿ ಜನವೋ ಜನ ಆದರೆ ಇಲ್ಲಿ ಮಾತ್ರ ಬರೀ ಕಾರುಗಳು. ಕೈ ಹಿಡಿದು ಬರುವ   ವಯಸ್ಸಾದ ದಂಪತಿಗಳು, ತಮ್ಮ ಪುಟ್ಟ ಮಗುವನ್ನು ಮಕ್ಕಳಗಾಡಿಗಳಲ್ಲಿ ಕೂರಿಸಿಕೊಂಡು ಅತ್ತಿತ್ತ ಓಡಾಡುತ್ತಾ ತಮಗೆ ಬೇಕಾದ ವಸ್ತುವನ್ನು ಖರೀದಿಸುವ ಯುವ ದಂಪತಿಗಳನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ.

ಮಕ್ಕಳಿಗೆ ಆಟವಾಡಲು ಪ್ಲಾಸ್ಟಿಕ್ಕಿನ ಜಾರುವಬಂಡಿ ಹಾಗೂ ಇನ್ನಿತರ ಆಟಗಳನ್ನು ಇಲ್ಲಿ ಸಿದ್ಧಪಡಿಸಿರಿತ್ತಾರೆ. ಚಿಕ್ಕ ಮಕ್ಕಳು ಆಡಿ -ನಲಿದು ಸಂತಸಪಡುತ್ತಾರೆ.
ಭಿಕ್ಷೆ ಬೇಡುತ್ತಿರುವ ಪೋಲಿಯೊ ಪೀಡಿತ ಬಾಲಕ

ಗಿಟಾರ್ ನುಡಿಸಿ, ತನ್ನ ಓದಿಗಾಗಿ ಹಣ ಸಂಪಾದಿಸುತ್ತಿರುವ ಆಸ್ಟ್ರೇಲಿಯನ್ ಮುದ್ದುಬಾಲೆ 
ನಮ್ಮನ್ನು ನೋಡಿ ಆತ್ಮೀಯ ಭಾವವನ್ನು ಪ್ರಕಟಿಸುವ ಮತ್ತು Excuse me, Sorry ಎಂದು ಉಲಿಯುತ್ತಾ,ನಗು ಸೂಸುತ್ತಾ ಓಡಾಡುವ ಬಿಳಿಯರ ಬಗ್ಗೆ ನಮಗೆ ಗೌರವ ಭಾವ ಉಂಟಾಗುತ್ತದೆ. 

ಅಲ್ಲಿನ ಸಂಡೇ ಮಾರ್ಕೆಟ್ ನಲ್ಲಿ ಕಳೆದ ಗಂಟೆಗಳು ನಮಗೆ ಆಸ್ಟ್ರೇಲಿಯನ್ ಜನರ ಜೀವನದ ಒಂದು ಮುಖವನ್ನು ಪರಿಚಯಿಸಿತಲ್ಲದೆ ನಮಗೆ ಸಂತಸವನ್ನು ನೀಡಿತು.